ಕರ್ನಾಟಕದಲ್ಲಿ ಬರ, ಕೇಂದ್ರದಿಂದ 3,760 ಕೋಟಿ ರುಗೆ ಮನವಿ
ಬೆಂಗಳೂರು, ಅಕ್ಟೋಬರ್ 27: ಅನಾವೃಷ್ಟಿ ಹಾಗೂ ಅತಿವೃಷ್ಟಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಂಟಾದ ಬೆಳೆ ಮತ್ತು ಆಸ್ತಿ - ಪಾಸ್ತಿಯ ಒಟ್ಟಾರೆ ನಷ್ಟದ ಪ್ರಮಾಣ 14,630.85 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ 3,760.29 ಕೋಟಿ ರೂ ಪರಿಹಾರವನ್ನು ಕೋರಲು ರಾಜ್ಯ ಸಚಿವ ಸಂಪುಟವು ನಿರ್ಧರಿಸಿದೆ.
ಒಂದೆಡೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮುಂಗಾರು ವೈಫಲ್ಯ, ಮತ್ತೊಂದೆಡೆ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅಬ್ಬರಿಸಿದ ಪ್ರವಾಹ ಪರಿಸ್ಥಿತಿಯಿಂದ ಭಾರಿ ನಷ್ಟವಾಗಿದೆ. ಹೀಗಾಗಿ, ಪರಿಹಾರಕ್ಕಾಗಿ ಆಗ್ರಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ರಾಜ್ಯದ ಕಂದಾಯ ಮತ್ತು ಕೃಷಿ ಸಚಿವರ ನೇತೃತ್ವದ ನಿಯೋಗವು ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಸಂಪುಟ ಸಭೆಯ ಬಳಿಕ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
* ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ರಾಜ್ಯದ 110 ತಾಲ್ಲೂಕುಗಳು ಬರಪೀಡಿತ ಎಂದು ಈಗಾಗಲೇ ಘೋಷಿತವಾಗಿವೆ.
* ಬರದ ಬೇಗೆಯಿಂದ ಬಳಲುತ್ತಿರುವ ಈ ತಾಲ್ಲೂಕುಗಳಲ್ಲಿ 12,145.79 ಕೋಟಿ ರೂ ಬೆಳೆ ಹಾನಿಯಾಗಿದೆ
* ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳ ಅನ್ವಯ 3,373.85 ಕೋಟಿ ರೂ ಪರಿಹಾರ ಕೋರಲು ತೀರ್ಮಾನಿಸಲಾಗಿದೆ.
* ಬರ ಪೀಡಿತ ಪ್ರದೇಶಗಳಲ್ಲಿ ಗೋ ಶಾಲೆ ಮತ್ತು ಮೇವು ಬ್ಯಾಂಕ್ ಸ್ಥಾಪನೆಗೆ ಹಾಗೂ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಆಧ್ಯತೆಯ ಮೇರೆಗೆ ನೆರವು ಒದಗಿಸುವಂತೆ ಮನವಿ.
* ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ರೈತರಿಂದ ನೇರವಾಗಿ ಖರೀದಿಸಲು ಇರುವ ತೊಡಕುಗಳನ್ನು ನಿವಾರಿಸಲು ಸರ್ಕಾರ ಮುಂದಾಗಿದೆ
ಈ ಹಿನ್ನೆಲೆಯಲ್ಲಿ, ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿಗೆ ಶಿಫಾರಸ್ಸು ಮಾಡುವ ನಿಯಾಮಳಿಗಳನ್ನು ಸರಳೀಕರಣಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.