ಬೆಳಗಾವಿಯೇ 2ನೇ ರಾಜಧಾನಿಯಾಗಲಿ, ಅದಕ್ಕೂ ಮುನ್ನ ಮುಖ್ಯಮಂತ್ರಿಗಳೇ..
ಅಖಂಡ ಕರ್ನಾಟಕದ ಉತ್ತರ ಭಾಗದ ಹದಿಮೂರು ಜಿಲ್ಲೆಗಳು ಒಂದಾಗಿ ಪ್ರತ್ಯೇಕ ರಾಜ್ಯದ ಧ್ವನಿ ಹುಟ್ಟುಹಾಕಿವೆ, ಇದಕ್ಕೆ ಕಾರಣವಾದ ಅಂಶಗಳೇನು? ಆ ಭಾಗದಲ್ಲಿ ಜೆಡಿಎಸ್ ಶೂನ್ಯ ಸಂಪಾದನೆಯೋ, ಸಿಎಂ ಹೇಳಿಕೆಯೋ ಅಥವಾ ಸಿಎಂ ಹೇಳಿಕೆಯನ್ನೇ ಇಟ್ಟುಕೊಂಡು ಕಿಚ್ಚು ಹಚ್ಚುವ ಪ್ರತಿಪಕ್ಷ, ಸಂಘಟನೆಗಳೋ?
ಕಿಚ್ಚುಹೊತ್ತಲು ಕಾರಣವಾದ ಎಲ್ಲಾ ಅಂಶಗಳನ್ನು ಬದಿಗೊತ್ತಿ ಇಡೀ ಕರ್ನಾಟಕದ ಜನತೆ ಈ ಹೊತ್ತಿಗೆ ಚಿಂತಿಸಬೇಕಾದ ಅಂಶವೇನಂದರೆ, ಮರಾಠಿ ಪ್ರಾಬಲ್ಯದ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸುತ್ತಿರುವುದು.
ಒಡಕಿಗೆ ಓಗೊಡದ ಉತ್ತರ ಕರ್ನಾಟಕ ಜನತೆ: ಸಿಎಂ ಕೃತಜ್ಞತೆ
ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡಲು ಏನು ಕುಮಾರಸ್ವಾಮಿ ಸರಕಾರ ಚಿಂತನೆ ನಡೆಸುತ್ತಿದೆಯೋ ಅದಕ್ಕೆ ಅಭ್ಯಂತರವಿಲ್ಲದಿದ್ದರೂ, ಮೊದಲು ಬೆಳಗಾವಿಯಲ್ಲಿ ಆಗಬೇಕಾಗಿರುವುದು ಮರಾಠಿ ಪ್ರಾಬಲ್ಯ ಮೆಟ್ಟಿನಿಂತು, ಕನ್ನಡ ಕಡ್ಡಾಯವಾಗಿ ಬೆಳೆಸುವ ಕೆಲಸ. ಅದು ಅಲ್ಲಿನ ಸಾರ್ವಜನಿಕರ ಸಹಕಾರದೊಂದಿಗೆ ಸರಕಾರದಿಂದ ಮಾತ್ರ ಮಾಡಲು ಸಾಧ್ಯವಾದಂತಹದ್ದು.
ಕರ್ನಾಟಕದಲ್ಲಿ ಕನ್ನಡಿಗರೇ ಪರಕೀಯರಾ ಎನ್ನುವ ಚರ್ಚೆ ಸಾಮಾಜಿಕ ತಾಣದಲ್ಲಿ ನಡೆಯುವುದುಂಟು. ಕರಾವಳಿ ಭಾಗದಲ್ಲಿ ತುಳು, ಕೊಂಕಣಿ, ಕೋಲಾರ, ಬಯಲುಸೀಮೆ ಭಾಗದಲ್ಲಿ ತೆಲುಗು, ಉತ್ತರ ಕರ್ನಾಟಕದ ಭಾಗಗಳಲ್ಲಿ ಹಿಂದಿ, ಮರಾಠಿ, ಉರ್ದು, ರಾಜಧಾನಿಯಲ್ಲಿ ರಾರಾಜಿಸುವ ತಮಿಳು, ತೆಲುಗು, ಹಿಂದಿ.. ಹೀಗೆ ಕನ್ನಡವನ್ನು ಮೀರಿಸಿ ಇತರ ಭಾಷೆಗಳು ಆಡುಭಾಷೆಯಂತಾಗಿರುವುದನ್ನು ಕನ್ನಡಿಗರು ಸಹಿಸಿಕೊಂಡು ಜೊತೆಗೆ ಒಗ್ಗೂಡಿಸಿಕೊಂಡು ಬರುತ್ತಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕತೆ ಬೇಡ, ಅಭಿವೃದ್ಧಿ ಮಾಡಿ: ಕರವೇ
ಆದರೆ, ಬೆಳಗಾವಿಯಲ್ಲಿ ಎರಡನೇ ರಾಜಧಾನಿಯನ್ನು ಮಾಡುವ ರಾಜ್ಯ ಸರಕಾರದ ಚಿಂತನೆ ಏನಿದೆಯೋ ಅದನ್ನು ಮಗುದೊಮ್ಮೆ ಪರಿಶೀಲಿಸುವುದು ಒಳಿತು ಎನ್ನುವುದಕ್ಕೆ ಕಾರಣಗಳು ಹತ್ತಾರು.. ಯಾಕೆಂದರೆ, ಬೆಳಗಾವಿಯಲ್ಲಿ ಮರಾಠಿ ಭಾಷೆಯನ್ನು ಬಳಸಿಕೊಂಡು ನಡೆದ ಪುಂಡಾಟದ ಉದಾಹರಣೆಗಳು ಒಂದಲ್ಲ, ಎರಡಲ್ಲ.. ಲೆಕ್ಕವಿಲ್ಲದಷ್ಟು..
ಕನ್ನಡಿಗರೇ ಅಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ
ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯ ಎಷ್ಟಿದೆ ಎಂದರೆ ಒಂದರ್ಥದಲ್ಲಿ ಕನ್ನಡಿಗರೇ ಅಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಮಹಾನಗರಪಾಲಿಕೆ, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಸರಕಾರೀ ಕಚೇರಿಗಳ ಕನ್ನಡ ನಾಮಫಲಕಗಳನ್ನು ಕಿತ್ತೆಸೆದ ದಾರ್ಷ್ಟವನ್ನು ಮರಾಠಿ ಸಂಘಟನೆ ಮಾಡಿಕೊಂಡು ಬಂದಿವೆ.
ಬೇರೆ ಬೇರೆ ಭಾಷೆಯವರ ಪ್ರಾಬಲ್ಯ
ರಾಜ್ಯದ ಇತರ ಭಾಗಗಳಲ್ಲೂ ಬೇರೆ ಬೇರೆ ಭಾಷೆಯವರ ಪ್ರಾಬಲ್ಯವಿದ್ದರೂ, ಕನ್ನಡದ ಏಕತೆಯ ವಿಚಾರಕ್ಕೆ ಬಂದಾಗ ಎಲ್ಲರೂ ಒಂದಾದ ಉದಾಹರಣೆಗಳೇ ಹೆಚ್ಚು. ಆದರೆ, ಬೆಳಗಾವಿಯ ವಿಚಾರದಲ್ಲಿ ಹಾಗಲ್ಲ. ಕನ್ನಡ ಮತ್ತು ಕನ್ನಡಿಗರು ಅಪಹಾಸ್ಯಕ್ಕೀಡುವಾಗುವ ಎಷ್ಟೋ ಭಾಷಾ ವಿರೋಧಿ ಕೆಲಸಗಳು ನಡೆಯುತ್ತಲೇ ಇರುತ್ತದೆ. ರಾಜ್ಯೋತ್ಸವದ ದಿನವನ್ನು ಕರಾಳದಿನವನ್ನಾಗಿ ಆಚರಿಸುವ ಕೆಲಸವನ್ನು ಇದೇ ಮರಾಠಿ ಸಂಘಟನೆಗಳು, ಕರ್ನಾಟಕದ ಶಾಸಕರ ನೇತೃತ್ವದಲ್ಲಿ ಮಾಡಿದ್ದೂ ಇದೆ. ಎರಡನೇ ರಾಜಧಾನಿ ವಿಚಾರದಲ್ಲಿ ಶಿವಸೇನೆ ತಕರಾರು ತೆಗೆದು, ಸುಪ್ರೀಂ ಮೆಟ್ಟಲೇರುವಂತೆ ಫಡ್ನವೀಸ್ ಸರಕಾರಕ್ಕೆ ಒತ್ತಾಯ ಮಾಡಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಏನೂ ಕಮ್ಮಿಯಿರಲಿಲ್ಲ
2013ರ ಚುನಾವಣೆಯಲ್ಲಿ ಎಂಇಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸಂಭಾಜಿ ಪಾಟೀಲ್ ಜಯಗಳಿಸಿದ ನಂತರ ಆ ಪಕ್ಷದ ಕನ್ನಡ ವಿರೋಧಿ ಕೆಲಸಗಳು ಎಗ್ಗಿಲ್ಲದೇ ನಡೆಯುತ್ತಲೇ ಇದ್ದವು. ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಕನ್ನಡದ ವಿರುದ್ದ ಉದ್ದಟತನ ತೋರಿ, ರಾಜ್ಯ ಸರಕಾರ ಮಹಾನಗರಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಹಂತಕ್ಕೆ ಹೋಗಿದ್ದು ಗೊತ್ತೇ ಇದೆ. ಇದೇ ಈ ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್ಸಿನ ಲಕ್ಷ್ಮೀ ಹೆಬ್ಬಾಳ್ಕರ್ ಏನೂ ಕಮ್ಮಿಯಿರಲಿಲ್ಲ.
ಕಾಟಾಚಾರಕ್ಕೆ ಮಾತ್ರ 2ನೇ ರಾಜಧಾನಿಯಾಗಿರುತ್ತದೇ ಪ್ರಾಕ್ಟಿಕಲ್ ಆಗಿ ಅಲ್ಲ
ಬೆಳಗಾವಿಯಲ್ಲಿ ಸರಕಾರ ಸುವರ್ಣಸೌಧ ನಿರ್ಮಿಸಿರಬಹುದು, ಚಳಿಗಾಲದ ಅಧಿವೇಶನ ನಡೆಯುತ್ತಿರಬಹುದು. ಆದರೆ, ಎರಡನೇ ರಾಜಧಾನಿಯ ವಿಚಾರಕ್ಕೆ ಬಂದಾಗ, ಮೊದಲು ಅಲ್ಲಿನ ಮರಾಠಿ ಪ್ರಾಬಲ್ಯಕ್ಕೆ ಕಡಿವಾಣ ಹಾಕಬೇಕಿದೆ. ರಾಜ್ಯದ ಇತರ ನಗರಗಳಲ್ಲಿ ಈ ಸಮಸ್ಯೆಯಿಲ್ಲದಿರುವುದರಿಂದ, ಸರಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಲಬೇಕಿದೆ. ಇಲ್ಲದಿದ್ದರೆ, ಬರೀ ಕಾಟಾಚಾರಕ್ಕೆ ಮಾತ್ರ ಕರ್ನಾಟಕದ ಎರಡನೇ ರಾಜಧಾನಿಯಾಗಿರುತ್ತದೇ ಹೊರತು ಪ್ರಾಕ್ಟಿಕಲ್ ಆಗಿ ಅಲ್ಲ.
ಕರ್ನಾಟಕದ ಎರಡನೇ ರಾಜಧಾನಿ ಎನ್ನುವ ಪದಕ್ಕೆ ಒಂದರ್ಥ ಬರಬಹುದು
ಎಲ್ಲಾ ಸರಕಾರೀ ಕಚೇರಿ, ಮಹಾನಗರಪಾಲಿಕೆ, ಕೇಂದ್ರ ಸರಕಾರದ ಅಧೀನದ ಆಫೀಸುಗಳು, ಬ್ಯಾಂಕ್, ಶಾಲಾಕಾಲೇಜುಗಳಲ್ಲಿ ಕನ್ನಡವನ್ನು ಕಡ್ಡಾಯ, ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ, ಜೊತೆಗೆ ಸಾರ್ವಜನಿಕರಿಗೂ ಈ ಬಗ್ಗೆ ಜಾಗೃತಿ ಕೆಲಸವನ್ನು ಮಾಡಿ, ಹೆಚ್ಚಿನ ಅನುದಾನದ ಮೂಲಕ ಅಭಿವೃದ್ದಿ ಕೆಲಸಗಳು ನಡೆದರೆ, ಮರಾಠಿ ಪ್ರಾಭ್ಯಲ್ಯಕ್ಕೆ ತಡೆಯೊಡ್ಡಬಹುದಾಗಿದೆ. ಅದಾದರೆ, ಮಾತ್ರ ಕರ್ನಾಟಕದ ಎರಡನೇ ರಾಜಧಾನಿ ಎನ್ನುವ ಪದಕ್ಕೆ ಒಂದರ್ಥ ಬರಬಹುದು.