ಮದ್ಯಪ್ರಿಯರಿಗೆ ಸರ್ಕಾರದ ಗುಡ್ ನ್ಯೂಸ್: ಮನೆ ಬಾಗಿಲಿಗೇ ಬರಲಿದೆ ಮದ್ಯ
ಬೆಂಗಳೂರು, ಸೆಪ್ಟೆಂಬರ್ 4: ಮದ್ಯದ ಬಾಟಲಿ ಮಾರಾಟ ಮಾಡುವಾಗ ಆಧಾರ್ ಸಂಖ್ಯೆ ನಮೂದಿಸುವ ಹೊಸ ಪ್ರಸ್ತಾಪ ಮುಂದಿರುವಾಗಲೇ ರಾಜ್ಯ ಸರ್ಕಾರ ಕುಡುಕರ 'ಅನುಕೂಲತೆ'ಗಾಗಿ ಹೊಸ ಯೋಜನೆಯ ಜಾರಿಗೆ ಮುಂದಾಗಿದೆ. ಕುಡುಕರು ಮದ್ಯಕ್ಕಾಗಿ ಬಾರ್ ಅಥವಾ ವೈನ್ ಶಾಪ್ ಹುಡುಕಿಕೊಂಡು ಅಲೆಯುವ ಅಗತ್ಯವಿಲ್ಲ. ಕುಡಿದ ಬಳಿಕ ಮನೆಗೆ ಬರಲು ಕಷ್ಟಪಡಬೇಕಾದ ಅಗತ್ಯವೂ ಇಲ್ಲ.
ಮನೆಯ ಬಾಗಿಲಿಗೇ ಮದ್ಯ ಪೂರೈಕೆ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಅಬಕಾರಿ ಸಚಿವ ಎಚ್ ನಾಗೇಶ್ ತಿಳಿಸಿದರು.
ಕುಡುಕರಿಗೂ ಬಂತು ಅಚ್ಛೇ ದಿನ್: ನಿಂತಲ್ಲೇ ಅಮಲೇರಿಸುವ ಸುದ್ದಿ!
ಬುಧವಾರ ವಿಕಾಸಸೌಧದಲ್ಲಿ ಮಾತನಾಡಿದ ಅವರು, ''ಕೆಲವು ಊರುಗಳಲ್ಲಿ ಮದ್ಯದ ಅಂಗಡಿಗಳು ದೂರದ ಅಂತರದಲ್ಲಿವೆ. ಇನ್ನು ಕೆಲವು ಕಡೆ ಮದ್ಯದಂಗಡಿಗಳೇ ಇಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ. ಮನೆ ಬಾಗಿಲಿಗೇ ಮದ್ಯ ಪೂರೈಕೆ ಮಾಡುವ ಚಿಂತನೆ ಇಲಾಖೆಯ ಮುಂದಿದೆ'' ಎಂದು ಹೇಳಿದರು.
''ಸಂಚಾರಿ ವೈನ್ ಶಾಪ್ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಎಲ್ಲೆಲ್ಲಿ ವೈನ್ ಶಾಪ್ಗಳು ಲಭ್ಯವಿಲ್ಲವೋ ಅಲ್ಲಿ ಸಂಚಾರಿ ವೈನ್ ಶಾಪ್ಗಳನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇದರಿಂದ ಸರ್ಕಾರಕ್ಕೆ ಉತ್ತಮ ಆದಾಯ ಬರಲಿದೆ. ತಾಂಡಾಗಳಲ್ಲಿ ಸಂಚಾರಿ ವೈನ್ ಶಾಪ್ಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ'' ಎಂದು ತಿಳಿಸಿದರು.
21 ಸಾವಿರ ಕೋಟಿ ರೂ ಆದಾಯದ ಗುರಿ
ಜನರಿಗೆ ಗುಣಮಟ್ಟದ ಮದ್ಯ ಪೂರೈಕೆ ಮಾಡುವುದು ನಮ್ಮ ಗುರಿ. 2018-19ರಲ್ಲಿ 19,750 ಕೋಟಿ ಅಬಕಾರಿ ಆದಾಯದ ಗುರಿ ನಿಗದಿಪಡಿಸಲಾಗಿತ್ತು. 19,943 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. 2019-20ನೇ ಸಾಲಿನಲ್ಲಿ 21 ಸಾವಿರ ಕೋಟಿ ರೂ ಸಂಗ್ರಹದ ಗುರಿ ನಿಗದಿಪಡಿಸಿದ್ದೇವೆ. ಸಂತೋಷಕೂಟಗಳಲ್ಲಿ ಬೇರೆ ರಾಜ್ಯಗಳಿಂದ ಮದ್ಯ ತಂದು ಬಳಸುತ್ತಾರೆ. ಹಾಗಾಗಿ ಅಂತಹ ಅನಧಿಕೃತ ಪಾರ್ಟಿಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಗಾಂಜಾ ಮತ್ತು ಮಾದಕವಸ್ತುಗಳ ಬಳಕೆಗೆ ಇಲಾಖೆ ಕಡಿವಾಣ ಹಾಕಲಿದೆ ಎಂದು ನಾಗೇಶ್ ವಿವರಿಸಿದರು.
ಆಧಾರ್ ಕಾರ್ಡ್ ಕಡ್ಡಾಯವಿಲ್ಲ
ಮದ್ಯ ಖರೀದಿ ಮಾಡಲು ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಪ್ರಸ್ತಾವವನ್ನು ಅವರು ತಳ್ಳಿ ಹಾಕಿದರು. ಈ ರೀತಿಯ ಕ್ರಮವನ್ನು ತೆಗೆದುಕೊಂಡಿದ್ದೇ ಆದರೆ ಇಲಾಖೆಯ ಆದಾಯಕ್ಕೆ ಭಾರಿ ಹೊಡೆತ ಬೀಳಲಿದೆ. ಇಂತಹ ಪ್ರಸ್ತಾವ ಇಲಾಖೆಯ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನ 107 ಬಾರ್ & ರೆಸ್ಟೋರೆಂಟ್, ಪಬ್ ಲೈಸೆನ್ಸ್ ರದ್ದು
ಅಬಕಾರಿ ಇಲಾಖೆಯಲ್ಲಿ ನೇಮಕಾತಿ
ಅಬಕಾರಿ ಇಲಾಖೆಯಲ್ಲಿ ಶೇ 43ರಷ್ಟು ಹುದ್ದೆಗಳು ಖಾಲಿ ಇವೆ. ಮೊದಲ ಆದ್ಯತೆ ಮೇರೆಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. 1205 ಹುದ್ದೆಗಳು ಕೆಪಿಎಸ್ಸಿ ನೇಮಕಾತಿಯ ಹಂತದಲ್ಲಿವೆ. ಉಳಿದಿರುವ ಹುದ್ದೆಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ಮದ್ಯಪಾನ ನಿಷೇಧ ಇಲ್ಲ
ಮದ್ಯಪಾನ ನಿಷೇಧದ ಕುರಿತು ಸರ್ಕಾರ ಚಿಂತನೆ ನಡೆಸಿಲ್ಲ. ಈ ಹಿಂದೆ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರು ಪ್ರತಿಭಟನೆ ಮಾಡಿದ ಸಂಗತಿಯೂ ತಮಗೆ ತಿಳಿದಿಲ್ಲ ಎಂದು ಅವರು ಹೇಳಿದರು. ಬಹುಶಃ ತಾವು ಬಾಂಬೆಯಲ್ಲಿದ್ದಾಗ ಈ ಘಟನೆ ನಡೆದಿರಬಹುದು ಎಂದರು.
ಮದ್ಯಪಾನ ನಿಷೇಧ ಮಾಡಬೇಕೆಂದು ಕೆಲವು ಮಹಿಳೆಯರು, ಸ್ವಾಮೀಜಿಗಳು ಆಗ್ರಹಿಸುತ್ತಾರೆ. ಸಮಾಜದ ಆರೋಗ್ಯದ ದೃಷ್ಟಿಯಿಂದ ಅವರು ಹೇಳಿದ್ದಾರೆ. ಆದರೆ, ರಾಜ್ಯಕ್ಕೆ ಆದಾಯವೂ ಬೇಕಿದೆ. ಯಾರೋ ಕೆಲವು ಮಹಿಳೆಯರು ಹೇಳಿದ್ದಾರೆ ಎಂಬ ಮಾತ್ರಕ್ಕೆ ಮದ್ಯ ನಿಷೇಧ ಸಾಧ್ಯವಿಲ್ಲ ಎಂದು ಹೇಳಿದರು.