ಇನ್ನು ಮುಂದೆ ಬಿಸಿಯೂಟಕ್ಕೆ ಸಾರವರ್ಧಿತ ಅಕ್ಕಿ ಬಳಕೆ
ಬೆಂಗಳೂರು, ಅಕ್ಟೋಬರ್, 21: ಅಪೌಷ್ಠಿಕತೆ ನಿವಾರಿಸಲು ರಾಜ್ಯ ಸರ್ಕಾರ ಮುಂದಡಿ ಇಟ್ಟಿದ್ದು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇನ್ನು ಮುಂದು ಸಾರವರ್ಧಿತ ಅಕ್ಕಿ ಬಳಕೆ ಮಾಡಲು ನಿರ್ಧರಿಸಿದೆ.
ಈ ಸಂಬಂಧ ಶಿಕ್ಷಣ ಇಲಾಖೆ ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಮಧ್ಯೆ ಒಪ್ಪಂದ ಏರ್ಪಡಿದ್ದು, ಗುರುವಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಕುರಿತು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು, 'ಮಕ್ಕಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ಅಪೌಷ್ಟಿಕತೆ ನಿವಾರಿಸಲು ಬಿಸಿಯೂಟಕ್ಕೆ ಬಳಸುವ ಅಕ್ಕಿ ಜೊತೆಗೆ ಸಾರವರ್ಧಿತ ಅಕ್ಕಿಯನ್ನೂ ಬಳಸಲಾಗುವುದು' ಎಂದು ಹೇಳಿದರು.
ಬಿಸಿಯೂಟದಲ್ಲಿ ಬಳಸುವ 99 ಕೆ.ಜಿ. ಅಕ್ಕಿ ಜೊತೆ 1 ಕೆ.ಜಿ. ಸಾರವರ್ಧಿತ ಅಕ್ಕಿ ಮಿಶ್ರಣ ಮಾಡಲಾಗುವುದು. ಒಂದು ವರ್ಷದ ನಂತರ ಮಕ್ಕಳ ದೈಹಿಕ ಬೆಳವಣಿಗೆ, ತೂಕ ಹಾಗೂ ಎತ್ತರ ಮಾಪನ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಒಪ್ಪಂದದಿಂದ ಮೂರು ಜಿಲ್ಲೆಗಳ 2,600 ಶಾಲೆಗಳ 4.5 ಲಕ್ಷ ಮಕ್ಕಳು ಲಾಭ ಪಡೆಯಲಿದ್ದಾರೆ. ಬಿಸಿಯೂಟಕ್ಕೆ ಸಾರವರ್ಧಿತ ಅಕ್ಕಿ ಬಳಸುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದರು.