ಸರ್ಕಾರಿ ನೌಕರರಿಗೆ ಡಬಲ್ ಧಮಾಕ: ಜಯಂತಿ ರಜೆಗೆ ಅಡ್ಡಿಯಿಲ್ಲ
ಬೆಂಗಳೂರು, ಜೂನ್ 6: ರಾಜ್ಯ ಸರ್ಕಾರಿ ನೌಕರರಿಗೆ ನಾಲ್ಕನೆಯ ಶನಿವಾರ ರಜೆ ನೀಡುವ ಜತೆಯಲ್ಲಿ ವಿವಿಧ ಜಯಂತಿ ಆಚರಣೆ ವೇಳೆ ನೀಡಲಾಗುತ್ತಿದ್ದ ರಜೆಗೆ ಕತ್ತರಿ ಹಾಕಲು ಸರ್ಕಾರ ಮುಂದಾಗಿತ್ತು. ಆದರೆ, ಅದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ಸರ್ಕಾರಿ ಕಚೇರಿಗಳಿಗೆ ಪ್ರತಿ ತಿಂಗಳ ನಾಲ್ಕನೆ ಶನಿವಾರ ರಜೆ ನೀಡುವುದಾಗಿ ಸರ್ಕಾರ ಪ್ರಕಟಿಸಿತ್ತು. ಅದರ ಜತೆಗೆ ಕೆಲವು ಜಯಂತಿಗಳಿಗೆ ನೀಡುತ್ತಿದ್ದ ರಜೆಯನ್ನು ರದ್ದುಗೊಳಿಸಲಾಗಿತ್ತು. ಆರನೇ ವೇತನ ಆಯೋಗ ತನ್ನ 2ನೇ ಅವಧಿಯಲ್ಲಿ ನಾಲ್ಕನೆ ಶನಿವಾರದ ರಜೆಗೆ ಕುರಿತು ಶಿಫಾರಸು ಮಾಡಿತ್ತು. ಇದರಂತೆ ತಿಂಗಳ 2 ಮತ್ತು 4ನೇ ಶನಿವಾರ ಸರ್ಕಾರಿ ನೌಕರರಿಗೆ ರಜೆ ಸಿಗಲಿದೆ.
ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರದಿಂದ ಬಂಪರ್ ಕೊಡುಗೆ
ಇದರೊಂದಿಗೆ ಮಹಾವೀರ ಜಯಂತಿ, ವಾಲ್ಮೀಕಿ ಜಯಂತಿ, ಕನಕ ಜಯಂತಿ, ಬಸವ ಜಯಂತಿ, ಕಾರ್ಮಿಕ ದಿನಾಚರಣೆಗಳಿಗೆ ಇರುವ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಲಾಗಿತ್ತು. ಆ ದಿನಗಳನ್ನು ಕೆಲಸದ ದಿನಗಳನ್ನಾಗಿ ಪರಿವರ್ತಿಸಲು ಸೂಚಿಸಲಾಗಿತ್ತು. ಆದರೆ, ಈ ನಿರ್ಧಾರಕ್ಕೆ ವಿವಿಧ ಸಮುದಾಯಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಜೆಯ ರದ್ದು ಹಾಗೂ ಬದಲಾವಣೆಗಳ ಕುರಿತು ಗಹನವಾದ ಚರ್ಚೆ ನಡೆಯಿತು.
ವಾಲ್ಮೀಕಿ, ಕನಕ ಜಯಂತಿ ರಜೆ ಅಬಾಧಿತ
ಪ್ರಮುಖವಾಗಿ ಪ್ರಬಲ ಸಮುದಾಯಗಳಾದ ವಾಲ್ಮೀಕಿ ಹಾಗೂ ಕುರುಬ ಸಮುದಾಯಗಳಿಂದ ವಿರೋಧ ವ್ಯಕ್ತವಾಗಿದ್ದರಿಂದ ಸಮ್ಮಿಶ್ರ ಸರ್ಕಾರದ ಸಚಿವರು ಈ ನಿರ್ಧಾರ ಹೊಡೆತ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕಾರಣದಿಂದ ವಾಲ್ಮೀಕಿ ಜಯಂತಿ ಮತ್ತು ಕನಕದಾಸ ಜಯಂತಿ ಆಚರಣೆ ಹಾಗೂ ರಜೆಗಳನ್ನು ಯಥಾವತ್ತು ಮುಂದುವರಿಸಲು ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದೆ.
2019ನೇ ಸಾಲಿನ ಕೇಂದ್ರ ಸರ್ಕಾರದ ರಜಾ ದಿನಗಳ ಪಟ್ಟಿ ಪ್ರಕಟ
ಸರ್ಕಾರಿ ಕೆಲಸಕ್ಕೆ ಹಿನ್ನಡೆ
ಎಲ್ಲ ಜಯಂತಿಗಳ ಆವರಣೆಯಿಂದ ವರ್ಷಕ್ಕೆ 30-35 ಜಯಂತಿಗಳ ಆಚರಣೆಯಾಗುತ್ತದೆ. ಇದರಿಂದ ರಜೆಗಳ ಸಂಖ್ಯೆ ಹೆಚ್ಚಾಗಿ ಸರ್ಕಾರಿ ಕೆಲಸಗಳು ಬಾಕಿ ಉಳಿಯುತ್ತಿವೆ. ಹೀಗಾಗಿ ನಾಲ್ಕನೆಯ ಶನಿವಾರ ರಜೆ ನೀಡುವುದರ ಮೂಲಕ ಈ ರಜೆಗಳನ್ನು ತೆಗೆದುಹಾಕುವುದು ಸರ್ಕಾರದ ಉದ್ದೇಶವಾಗಿತ್ತು.
ಸಾಂದರ್ಭಿಕ ರಜೆ ಹತ್ತಕ್ಕೆ ಇಳಿಕೆ
ವೇತನ ಆಯೋಗದ ಶಿಫಾರಸಿನಂತೆ ಸಾಂದರ್ಭಿಕ ರಜೆಯನ್ನು 15 ದಿನಗಳಿಂದ 12 ದಿನಗಳಿಗೆ ಇಳಿಸಲು ಅನುಮೋದನೆ ನೀಡಲಾಗಿತ್ತು. ಈಗ ವಾಲ್ಮೀಕಿ ಮತ್ತು ಕನಕ ಜಯಂತಿಗಳಿಗೆ ರಜೆ ನೀಡಲು ತೀರ್ಮಾನಿಸಿರುವುದರಿಂದ ಇನ್ನೂ ಎರಡು ರಜೆಗಳನ್ನು ಕಡಿತ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಸಾಂದರ್ಭಿಕ ರಜೆಗಳನ್ನು ಹತ್ತಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಶಾಕಿಂಗ್ ಸುದ್ದಿ: ಸರ್ಕಾರಿ ರಜೆಗಳಿಗೆ ಬ್ರೇಕ್ ಹಾಕಲಿದೆ ಸರ್ಕಾರ
ರಜೆಗಳ ರದ್ದು
ಗುಡ್ ಫ್ರೈಡೇ, ಮಹಾಲಯ ಅಮಾವಾಸ್ಯೆ ಮತ್ತು ಈದ್ ಮಿಲಾದ್ ಹಬ್ಬದ ದಿನದಂದು ಇರುವ ರಜೆಯನ್ನು ರದ್ದುಪಡಿಸಿ ಅವುಗಳನ್ನು ಕೆಲಸದ ದಿನಗಳನ್ನಾಗಿ ಪರಿವರ್ತಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ದೀಪಾವಳಿ ಹಬ್ಬದ ನಿಮಿತ್ತ ನೀಡುವ 2 ರಜೆಗಳನ್ನು 1 ಮತ್ತು 3ನೇ ದಿನ ನೀಡುವ ಬದಲು 1 ಮತ್ತು 2ನೇ ದಿನ ನೀಡಲು ಒಪ್ಪಿಗೆ ನೀಡಲಾಗಿತ್ತು.