ಜಿಲ್ಲಾ ಉಸ್ತುವಾರಿ: 7 ಸಚಿವರಿಗೆ ಸಂಬಂಧವೇ ಇಲ್ಲದ ಜಿಲ್ಲೆಯ ಜವಾಬ್ದಾರಿ!
ಮೊದಲಿಗೆ ಸಚಿವ ಸುಂಪುಟ ವಿಸ್ತರಣೆ, ನಂತರ ಖಾತೆ ಹಂಚಿಕೆ, ಇದಾದ ನಂತರ ಬಜೆಟ್ ಮಂಡಣೆ , ಇದ್ಯಾವುದೂ ಮುಖ್ಯಮಂತ್ರಿ ಕುಮಾರಸ್ವಾಮಿ ಬಯಸಿದಂತೆ ನಿಗದಿತ ಸಮಯದಲ್ಲಿ ನಡೆಯಲಿಲ್ಲ, ಕಾರಣ, ಸಮ್ಮಿಶ್ರ ಸರಕಾರ. ಎಲ್ಲವನ್ನೂ, ಹೈಕಮಾಂಡ್ ಗಮನಕ್ಕೆ ತಂದು, ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರುವ ಕಟ್ಟುಪಾಡು.
ಈ ಎಲ್ಲಾ ಮಜಲುಗಳನ್ನು ದಾಟಿ ಬಂದ ಎಚ್ಡಿಕೆ ನೇತೃದ ಸಮ್ಮಿಶ್ರ ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಸೋಮವಾರ (ಜುಲೈ 31) ರಾತ್ರಿ ಬಿಡುಗಡೆ ಮಾಡಿದೆ. ಕೆಲವು ಸಚಿವರಿಗೆ ಬಯಸಿದ್ದು ಸಿಕ್ಕಿದ್ದರೆ, ಒಂದಷ್ಟು ಸಚಿವರಿಗೆ ಬಯಸಿದ್ದು ಸಿಗಲಿಲ್ಲ, ಮತ್ತೊಂದಷ್ಟು ಸಚಿವರಿಗೆ ಇದು ಬಯಸದೇ ಬಂದ ಭಾಗ್ಯ.
ಕರ್ನಾಟಕದ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ
ಡಾ. ಪರಮೇಶ್ವರ್, ಆರ್ ವಿ ದೇಶಪಾಂಡೆ, ಡಿ ಕೆ ಶಿವಕುಮಾರ್, ಕೃಷ್ಣಬೈರೇಗೌಡ ಅವರಿಗೆ ಎರಡೆರಡು ಜಿಲ್ಲೆಯ ಜವಾಬ್ದಾರಿಯನ್ನು ನೀಡಲಾಗಿದೆ. ಸಮ್ಮಿಶ್ರ ಸರಕಾರ ಆಗಿರುವುದರಿಂದ ಎಲ್ಲರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ. ಹಾಗಾಗಿ, ಉಸ್ತುವಾರಿ ನೇಮಕ ವಿಚಾರದಲ್ಲಿ ಕೆಲವೊಂದು ಅಪಸ್ವರಗಳು ಕೇಳಿ ಬರುತ್ತಿವೆ.
ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಸಚಿವರಿಗೆ ಬಯಸಿದ ಜಿಲ್ಲೆಯ ಉಸ್ತುವಾರಿಯನ್ನು ನೀಡಲಿಲ್ಲ, ಆ ಮೂಲಕ ಸಿದ್ದರಾಮಯ್ಯನವರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತೂ ಅಲ್ಲಲ್ಲಿ ಕೇಳಿಬರುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ: ಯಾರ ಕಣ್ಣಿಗೆ ಸುಣ್ಣ, ಯಾರಿಗೆ ಬೆಣ್ಣೆ
ಇನ್ನು, ರಾಜ್ಯದ ಮೂವತ್ತು ಜಿಲ್ಲೆಗಳ ಪೈಕಿ, ಕೆಲವೊಂದು ಜಿಲ್ಲೆಗಳಿಗೆ ಸಂಬಂಧವೇ ಇಲ್ಲದವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಅಂದರೆ, ಆ ಜಿಲ್ಲೆಯ ಮೂಲದವರಲ್ಲದ ಅಥವಾ ಜನಪ್ರತಿನಿಧಿಗಳಲ್ಲದವರನ್ನು ಉಸ್ತುವಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಅದಕ್ಕೆ ಕಾರಣಗಳು ಹಲವಾರು, ಆ ಜಿಲ್ಲೆಗಳಾವುವು?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲ
ಎಚ್ಡಿಕೆ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವರಾಗಿರುವ ಜಯಮಾಲ ದಕ್ಷಿಣಕನ್ನಡ ಜಿಲ್ಲೆಯವರು. ವಿಧಾನಪರಿಷತ್ ಸದಸ್ಯೆಯೂ ಆಗಿರುವ ಜಯಮಾಲ ಅವರನ್ನು ಉಡುಪಿ ಜಿಲ್ಲಾ ಉಸ್ತುವರಿಯನ್ನಾಗಿ ನೇಮಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆ ಮಂಗಳೂರು ಕ್ಷೇತ್ರವನ್ನು ಪ್ರತಿನಿಧಿಸುವ ಯು ಟಿ ಖಾದರ್ ಅವರಿಗೆ ಆ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ ಎನ್ನುವುದು ಒಂದು ಕಾರಣವಾದರೆ, ಉಡುಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳನ್ನು ಬಿಜೆಪಿ ಗೆದ್ದಿರುವುದರಿಂದ ಜಯಮಾಲಾಗೆ ಉಡುಪಿ ಜಿಲ್ಲೆಯ ಜವಾಬ್ದಾರಿಯನ್ನು ಬೇರೆ ದಾರಿಯಿಲ್ಲದೆ ನೀಡಿರಬಹುದು.
ಕೆ ಜೆ ಜಾರ್ಜ್ ಗೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ
ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಕೆ ಜೆ ಜಾರ್ಜ್ ಗೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ಐಟಿ, ಬಿಟಿ, ಬೃಹತ್ ಕೈಗಾರಿಕೆ ಸಚಿವರಾಗಿರುವ ಜಾರ್ಜ್, ಬೆಂಗಳೂರು ನಗರ ಉಸ್ತುವಾರಿಯನ್ನು ಬಯಸಿದ್ದರು. ಆದರೆ, ಬೆಂಗಳೂರು ನಗರ ಉಸ್ತುವಾರಿಯನ್ನಾಗಿ ಡಿಸಿಎಂ ಪರಮೇಶ್ವರ್ ಅವರನ್ನು ನೇಮಿಸಲಾಗಿದೆ. ಮುಂದೆ ನಡೆಯುವ ಸಂಪುಟ ವಿಸ್ತರಣೆಯ ವೇಳೆ, ರಾಮಲಿಂಗ ರೆಡ್ಡಿಯವರಿಗೆ ಸಚಿವ ಸ್ಥಾನ ನೀಡಿದರೆ, ಆಗ ಬೆಂಗಳೂರು ನಗರ ಉಸ್ತುವಾರಿಯನ್ನು ಅವರಿಗೆ ನೀಡಲು ಕಾಂಗ್ರೆಸ್ಸಿನ ಮುಂಜಾಗೃತ ಕ್ರಮವಿದು ಎನ್ನುವ ಮಾತಿದೆ.
ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರಿಗೆ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿ
ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಶಾಸಕ, ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರಿಗೆ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯನ್ನು ವಹಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಭದ್ರಾವತಿಯೊಂದನ್ನು ಬಿಟ್ಟು (ಕಾಂಗ್ರೆಸ್) ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿರುವುದು ಒಂದೆಡೆಯಾದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಮಧು ಬಂಗಾರಪ್ಪ ಸ್ಪರ್ಧಿಸುವ ಸಾಧ್ಯತೆಯಿದೆ. ಹಾಗಾಗಿ, ಗೌಡ್ರ ಬೀಗರೂ ಆಗಿರುವ ತಮ್ಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಿದ್ದು ಎನ್ನಲಾಗುತ್ತಿದೆ. ಜೆಡಿಎಸ್ ಪರವಾಗಿ ಗ್ರೌಂಡ್ ವರ್ಕ್ ಮಾಡಲು ಈ ಕ್ರಮ ಎನ್ನುವ ಸುದ್ದಿಯಿದೆ.
ಜೆಡಿಎಸ್ ಬಿಟ್ಟು, ಕಾಂಗ್ರೆಸ್ ಸೇರಿ ಸಚಿವರಾಗಿರುವ ಜಮೀರ್ ಅಹಮದ್
ಜೆಡಿಎಸ್ ಬಿಟ್ಟು, ಕಾಂಗ್ರೆಸ್ ಸೇರಿ ಸಚಿವರಾಗಿರುವ ಜಮೀರ್ ಅಹಮದ್, ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾಗಿರುವ ಜಮೀರ್ ಗೆ ದೂರದ ಹಾವೇರಿ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಹಾವೇರಿ ಜಿಲ್ಲೆ, ರಾಣೆಬೆನ್ನೂರು ಶಾಸಕ ಮತ್ತು ಸಚಿವ ಆರ್ ಶಂಕರ್ ಅವರಿಗೆ ಜಿಲ್ಲೆಯ ಜವಾಬ್ದಾರಿಯನ್ನು ನೀಡದೇ, ಬೆಂಗಳೂರು ಚಾಮರಾಜಪೇಟೆ ಕ್ಷೇತ್ರವನ್ನು ಪ್ರತಿನಿಧಿಸುವ ಜಮೀರ್ ಗೆ ನೀಡಿರುವುದು ಹಲವು ಆಶ್ಚರ್ಯಕ್ಕೆ ಕಾರಣವಾಗಿದೆ. ಆರ್ ಶಂಕರ್ ಅವರಿಗೆ ಕೊಪ್ಪಳ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್
ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರಿಗೆ ಕೊಡಗು ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಕೊಡಗು ಜಿಲ್ಲೆಯ ಎರಡೂ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಮೈಸೂರು ಜಿಲ್ಲೆ, ಕೃಷ್ಣರಾಜನಗರ ಕ್ಷೇತ್ರದ ಶಾಸಕರಾಗಿರುವ ಮಹೇಶ್, ಆ ಜಿಲ್ಲೆಯಿಂದ ಜಿ ಟಿ ದೇವೇಗೌಡ ಅವರಿಗೆ ಉಸ್ತುವಾರಿ ನೀಡಿರುವುದರಿಂದ ಮೈಸೂರು ಜಿಲ್ಲೆಯ ಉಸ್ತುವಾರಿ ಮಹೇಶ್ ಗೆ ಕೈತಪ್ಪಿದೆ.
ಬಿಎಸ್ಪಿಯ ಎನ್ ಮಹೇಶ್ ಅವರಿಗೆ ಗದಗ ಜಿಲ್ಲೆಯ ಉಸ್ತುವಾರಿ
ಪ್ರಾಧಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಸಚಿವ, ಬಿಎಸ್ಪಿಯ ಎನ್ ಮಹೇಶ್ ಅವರಿಗೆ ಗದಗ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ಕೊಳ್ಳೆಗಾಲ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಮಹೇಶ್, ಚಾಮರಾಜನಗರ ಜಿಲ್ಲೆಯವರು. ಸಚಿವ ಪುಟ್ಟರಂಗಶೆಟ್ಟಿ, ಚಾಮರಾಜನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ, ಎನ್ ಮಹೇಶ್ ಅವರಿಗೆ ಉಸ್ತುವಾರಿ ಸ್ಥಾನ ತಪ್ಪಿದೆ.
ಎಸ್ ಆರ್ ಶ್ರೀನಿವಾಸ್ ಅವರಿಗೆ ದಾವಣಗೆರೆ ಜಿಲ್ಲೆಯ ಉಸ್ತುವಾರಿ
ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಅವರಿಗೆ ದಾವಣಗೆರೆ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ಸಣ್ಣ ಕೈಗಾರಿಕಾ ಸಚಿವರಾಗಿರುವ ಶ್ರೀನಿವಾಸ್ ಮೂಲತಃ ತುಮಕೂರು ಜಿಲ್ಲೆಯವರು, ಆದರೆ ಜಿಲ್ಲೆಯಿಂದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಇರುವುದರಿಂದ, ತುಮಕೂರು ಉಸ್ತುವಾರಿ ಅವರ ಪಾಲಾಗಿದೆ.