ಲೋಕಸಭೆ ಚುನಾವಣೆ ವೇಳೆ ಕರ್ನಾಟಕ-ಗೋವಾ ವಲಯ ಐಟಿಯಿಂದ ಭರ್ಜರಿ ಭೇಟಿ
ಬೆಂಗಳೂರು, ಜುಲೈ 24: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಐಟಿ ದಾಳಿ ವೇಳೆ ಕರ್ನಾಟಕ-ಗೋವಾ ವಲಯದಲ್ಲಿ 189 ಕೋಟಿ ಅಕ್ರಮ ಹಣ ಹಾಗೂ 7563 ಕೋಟಿ ರೂಗಳಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಆದಾಯ ತೆರಿಗೆ ಆಯುಕ್ತ ಬಾಲಕೃಷ್ಣನ್ ಹೇಳಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಜತೆಗೆ 573 ಕೋಟಿ ರೂ ಬೇನಾಮಿ ಆಸ್ತಿ ಪತ್ತೆ ಹಚ್ಚಲಾಗಿದೆ. 158 ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ 355 ಪ್ರಕರಣ ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಪಕ್ಷಗಳು, ಪಕ್ಷೇತರರು ಎಲ್ಲ ಸೇರಿ ಮಾಡಿದ ಅಂದಾಜು ಖರ್ಚು 60,000 ಕೋಟಿ ರುಪಾಯಿ
ಕಳೆದ ವರ್ಷ ಕನ್ನಡ ಚಿತ್ರರಂಗದ ನಟರು, ನಿರ್ಮಾಪಕರ ಮೇಲೆ ಐಟಿ ದಾಳಿ ಪ್ರಕರಣ. ಕಪ್ಪು ಹಣ ವರ್ಗಾವಣೆ ಆಗಿರುವ ಮಾಹಿತಿಯಿದೆ. ಈ ಕುರಿತ ತನಿಖೆ ಮುಂದುವರೆಸಲಾಗಿದೆ ಎಂದು ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.
ದೆಹಲಿ-ಮುಂಬೈ ಬಳಿಕ ಕರ್ನಾಟಕ ಹಾಗೂ ಗೋವಾ ವಲಯ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಪೈಕಿ ಮೂರನೇ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಆದಾಯ ತೆರಿಗೆ ಮಾಹಿತಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದ ಎಂದ ಅವರು, 2013-14 ರಲ್ಲಿ 12.73 ಲಕ್ಷ ಮಂದಿ ಐಟಿ ರಿಟರ್ನ್ಸ್ ಮಾಡಿದ್ದರು. 2018-19 ರಲ್ಲಿ 41.26 ಲಕ್ಷ ಮಂದಿ ಐಟಿ ಫೈಲ್ ಮಾಡಿದ್ದಾರೆ ಎಂದು ಅಂಕಿ-ಅಂಶ ಮುಂದಿಟ್ಟರು.
ಐಎಂಎ ಬಹುಕೋಟಿ ವಂಚನೆ ಪ್ರಕರಣವನ್ನು ಇಡಿ ಹಾಗೂ ಎಸ್ಐಟಿ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದರ ತನಿಖೆ ನಡೆಸುವಂತೆ ನಮಗೆ ದೂರು ಕೊಟ್ಟರೆ ನಾವೂ ತನಿಖೆ ಮಾಡುತ್ತೇವೆ ಎಂದು ಬಾಲಕೃಷ್ಣನ್ ಹೇಳಿದರು.