ಕುಮಾರಸ್ವಾಮಿ Vs ಸಿದ್ದರಾಮಯ್ಯ 'ಬಜೆಟ್' ಜಟಾಪಟಿ: ನಾನಾ..ನೀನಾ..
ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚುಕಮ್ಮಿ ಒಂದು ತಿಂಗಳಾಯಿತು. ಹಾಗೂ.. ಹೀಗೂ.. ಸಚಿವ ಸಂಪುಟ ವಿಸ್ತರಣೆಯಾದರೂ, ಆಡಳಿತ ಯಂತ್ರ ಇನ್ನೂ ಚುರುಕುಗೊಂಡಿಲ್ಲ. ಮೊದಲ ಸಮನ್ವಯ ಸಮಿತಿ ಸಭೆಯೂ ನಡೆಯಿತು.
ಸಮನ್ವಯ ಸಮಿತಿಯ ನಂತರ ಅದೇನೋ, ಒಂದು ವರ್ಷ ನನ್ನನ್ನು ಯಾರೂ ಟಚ್ ಮಾಡೋಕೆ ಆಗಲ್ಲಾ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಿದ್ದರೆ, ಐದು ವರ್ಷ ನೀವೇ ಸಿಎಂ ಎಂದು ಕಾಂಗ್ರೆಸ್ ಲಿಖಿತ ಭರವಸೆ ಕೊಟ್ಟಿದ್ದು ಏನಾಯಿತು? ಗೊತ್ತಿಲ್ಲಾ..
ಮೋದಿ ನೇತೃತ್ವದ 'ನೀತಿ' ಸಭೆಯಲ್ಲಿ ಗಮನಸೆಳೆದ ಕುಮಾರಸ್ವಾಮಿ ಭಾಷಣ
ಇದೀಗ, ಸಮನ್ವಯ ಸಮಿತಿಯ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ಬಜೆಟ್ ಮಂಡಿಸುವ ಅವಶ್ಯಕತೆಯಿಲ್ಲ, ಪೂರಕ ಬಜೆಟ್ ಮಂಡಿಸಿದರೆ ಸಾಕು ಎಂದು ಸಿದ್ದರಾಮಯ್ಯ ಹೇಳಿರುವುದು, ಸಮ್ಮಿಶ್ರ ಸರಕಾರದಲ್ಲಿ ಹೊಸ ಶೀತಲ ಸಮರಕ್ಕೆ ಕಾರಣವಾಗಿದೆ.
ಸಚಿವ ಸಂಪುಟ ವಿಸ್ತರಣೆಯ ವೇಳೆ ಕಾಂಗ್ರೆಸ್ಸಿನಲ್ಲಿ ಅಸಮಾಧಾನದ ಹೊಗೆ ಹೊತ್ತಿ ಉರಿಯುತ್ತಿದ್ದರೂ ಐದು ದಿನ ಬಾದಾಮಿ ಪ್ರವಾಸಕ್ಕೆ ಹೋಗಿ, ಹೈಕಮಾಂಡ್ ಬೇಸರಕ್ಕೆ ಕಾರಣವಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಈಗ ಮತ್ತು ಹನ್ನೆರಡು ದಿನ ಧರ್ಮಸ್ಥಳಕ್ಕೆ ಹೊರಟಾಗಿದೆ. ಹೋಗುವ ಮುನ್ನ, ಪ್ರತ್ಯೇಕ ಬಜೆಟ್ ಮಂಡಿಸುವ ಅವಶ್ಯಕತೆಯಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ವಿವರಿಸಿ ಹೋಗಿದ್ದಾರೆ.
ಸಾಲ ಮನ್ನಾ ಮಾಡಲು ಸಂಪೂರ್ಣ ಬದ್ಧ: ಕುಮಾರಸ್ವಾಮಿ ಪುನರುಚ್ಚಾರ
ಇದು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಇನ್ನೊಂದು ಬಜೆಟ್ ಮಂಡಿಸಲಿ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿರುವುದು, ಸಮಿಶ್ರ ಸರಕಾರದಲ್ಲಿ ಇನ್ನೂ ಹಲವು ಸಮಸ್ಯೆಗಳಿವೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಮುಸುಕಿನ ಗುದ್ದಾಟಕ್ಕೆ ಕಾರಣ ಏನು, ಮುಂದೆ ಓದಿ..
ಕುಮಾರಸ್ವಾಮಿ Vs ಸಿದ್ದರಾಮಯ್ಯ 'ಬಜೆಟ್' ಜಟಾಪಟಿ
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಬಜೆಟ್ ಸಂಬಂಧಿಸಿದಂತೆ ಮೇಲಾಟಕ್ಕೆ ಕಾರಣವಾದ ಅಂಶವೇನಾದರೂ ಏನು ಎಂದು ಅವಲೋಕಿಸಿದಾಗ ಕಾಣಬರುವುದು ಏನಂದರೆ, ಒಂದು ವೇಳೆ ಕುಮಾರಸ್ವಾಮಿ ಜನಪ್ರಿಯ ಬಜೆಟ್ ಮಂಡಿಸಿದರೆ, ಕಾಂಗ್ರೆಸ್ ಪ್ರಣಾಳಿಕೆಯ ಗತಿ ಏನು ಎನ್ನುವುದು. ಹಾಗಾಗಿ, ಸಿದ್ದರಾಮಯ್ಯ ಹೊಸ ಬಜೆಟಿಗೆ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದರೆ, ಬಜೆಟ್ ಮಂಡಿಸುವುದು ನನ್ನ ಹಕ್ಕು ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ.
ರಾಹುಲ್ ಭೇಟಿಯಾಗಿ ಗೊಂದಲವನ್ನು ಕ್ಲಿಯರ್ ಮಾಡಿಕೊಳ್ಳುತ್ತೇನೆ
ನಾನು ಬಜೆಟ್ ಮಂಡಿಸಿಯೇ ತೀರುತ್ತೇನೆ, ಅವಶ್ಯಕತೆ ಬಿದ್ದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಇರುವ ಗೊಂದಲವನ್ನು ಕ್ಲಿಯರ್ ಮಾಡಿಕೊಳ್ಳುತ್ತೇನೆ. ಸಮ್ಮಿಶ್ರ ಸರಕಾರದಲ್ಲಿ ಏನಾದರೂ ತೊಂದರೆಯಿದ್ದರೆ, ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ರಾಹುಲ್ ಹೇಳಿರುವುದರಿಂದ, ಒಂದೆರಡು ದಿನದಲ್ಲಿ ಅವರ ಜೊತೆ ಮಾತುಕತೆ ನಡೆಸಿ ಬಜೆಟ್ ಮಂಡಿಸಲು ತಯಾರು ನಡೆಸುವುದಾಗಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಜೆಡಿಎಸ್ ನಿಲುವು ಸರಿಯಾಗಿಯೇ ಇದೆ ಎಂದು ಉಪ ಮುಖ್ಯಮಂತ್ರಿ
ಹೊಸ ಬಜೆಟ್ ಮಂಡಿಸುವ ಕುಮಾರಸ್ವಾಮಿಯವರ ಉದ್ದೇಶ ಸರಿಯಾಗಿಯೇ ಇದೆ. ಕಳೆದ ಸರಕಾರ ಮಂಡಿಸಿದ್ದು ಸಂಪೂರ್ಣ ಕಾಂಗ್ರೆಸ್ ಸರಕಾರದ್ದು. ಈಗಿರುವುದು ಸಮ್ಮಿಶ್ರ ಸರಕಾರ, ಹಾಗಾಗಿ ಜೆಡಿಎಸ್ ತಾನೇನು ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆಯೋ, ಅದನ್ನು ಬಜೆಟ್ ನಲ್ಲಿ ಸೇರಿಸಬೇಕು ಎನ್ನುವ ಜೆಡಿಎಸ್ ನಿಲುವು ಸರಿಯಾಗಿಯೇ ಇದೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.
ಇನ್ನೊಂದು ಬಜೆಟಿನ ಅವಶ್ಯಕತೆ ಕಾನೂನಾತ್ಮಕವಾಗಿ ಬರುವುದಿಲ್ಲ
2018-19ರ ಸಾಲಿನ ಬಜೆಟ್ ನಾನು ಈಗಾಗಲೇ ಮಂಡಿಸಿಯಾಗಿದೆ, ಅದಕ್ಕೆ ಸದನದ ಅನುಮತಿಯೂ ಸಿಕ್ಕಾಗಿದೆ. ಪ್ರಸಕ್ತ ಹಣಕಾಸು ಅವಧಿಯಲ್ಲಿ ಇನ್ನೊಂದು ಬಜೆಟಿನ ಅವಶ್ಯಕತೆ ಕಾನೂನಾತ್ಮಕವಾಗಿ ಬರುವುದಿಲ್ಲ. ಜೆಡಿಎಸ್ ಹೊಸದಾಗಿ ಯೋಜನೆಗಳನ್ನು ಸೇರ್ಪಡೆ ಮಾಡುವುದಿದ್ದರೆ, ಪೂರಕ ಬಜೆಟ್ ಮಂಡಿಸಲಿ. ಮತ್ತೊಂದು ಬಜೆಟ್ ಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಾಲಮನ್ನಾದ ವಿಚಾರದಲ್ಲಿ ಮಾತಿಗೆ ತಪ್ಪಿದೆ ಎನ್ನುವ ಅಪವಾದ
ಸಾಲಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಈಗಾಗಲೇ ಸಾಲಮನ್ನಾದ ವಿಚಾರದಲ್ಲಿ ಮಾತಿಗೆ ತಪ್ಪಿದೆ ಎನ್ನುವ ಅಪವಾದ ಎದುರಾಗುತ್ತಿದೆ. ಹೀಗಾಗಿ, ಕುಮಾರಸ್ವಾಮಿ ಹೊಸ ಬಜೆಟ್ ನೀಡುವುದಾಗಿ ಹೇಳುತ್ತಿದ್ದಾರೆ, ಅದಕ್ಕೆ ಸಮನ್ವಯ ಸಮಿತಿಯಲ್ಲಿ ಅಪಸ್ವರ ಎದುರಾಗುತ್ತಿದೆ. ಸಮ್ಮಿಶ್ರ ಸರಕಾರದಲ್ಲಿ ಮುಂದೆ ಏನೇನು ಆಗುತ್ತೋ.. ಕಾದು ನೋಡಬೇಕಿದೆ....