ಲೋಕಾಯುಕ್ತದಿಂದ ಜಾತಿಗಣತಿವರೆಗೆ ಸೋರಿಕೆ ಸಾಮ್ರಾಜ್ಯ!
ಬೆಂಗಳೂರು, ಏಪ್ರಿಲ್, 12: ಸೋರಿಕೆ ರಾಜ್ಯ ಕರ್ನಾಟಕದಲ್ಲಿ ಮತ್ತೊಂದು ಸೋರಿಕೆಯಾಗಿದೆ. ಹಿಂದಿನ ಸೋರಿಕೆಗಳಿಗೆ ಹೋಲಿಕೆ ಮಾಡಿದರೆ ಇದು ಅಂಥ ಮಹಾ ಅಪರಾಧವೇನಿಲ್ಲ ಬಿಡಿ ಅಂದುಕೊಂಡು ಸುಮ್ಮನಾಗಬಹುದು. ಅಂತೂ ಇಂತು ಮಂಗಳವಾರ ದ್ವಿತೀಯ ಪಿಯುಸಿ ಮಕ್ಕಳು ರಸಾಯನಶಾಸ್ತ್ರ ಪರೀಕ್ಷೆ ಬರೆದು ಮುಗಿಸಿ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಸೋರಿಕೆ, ಪೋನ್ ಕದ್ದಾಲಿಕೆಗೆ ಅದರದ್ದೇ ಆದ ಇತಿಹಾಸವೇ ನಿರ್ಮಾಣವಾಗಿಹೋಗಿದೆ. ಲೋಕಾಯುಕ್ತ ವರದಿ ಸೋರಿಕೆ, ಗಣಿಗಾರಿಕೆ ತನಿಖಾ ವರದಿ ಸೋರಿಕೆ, ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ, ಸಚಿವ ಸಂಪುಟ ವಿಸ್ತರಣೆ ಮಾಹಿತಿ ಸೋರಿಕೆ, ನಿಮ್ಮ ಮನೆಯ ನಲ್ಲಿ ಸೋರಿಕೆ, ಮನೆ ಮೇಲ್ಛಾವಣಿ ಸೋರಿಕೆ..ಹೀಗೆ ಪಟ್ಟಿಯನ್ನು ಉದ್ದಕ್ಕೆ ಬೆಳೆಸಿಕೊಂಡು ಹೊಗಬಹುದು. ಈಗ ಅದೇ ಸಾಲಿಗೆ ಜಾತಿ ಗಣತಿ ವರದಿ ಸೋರಿಕೆ ಸಹ ಸೇರಿಕೊಳ್ಳುತ್ತದೆ. [ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?]
ಒಂದೆಡೆ ಸಚಿವ ಆಂಜನೇಯ ವರದಿ ಸೋರಿಕೆಯಾಗಿಲ್ಲ, ಎಲ್ಲ ಸರಿಯಾಗಿದೆ ಎಂದು ಸರ್ಕಾರವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇವೆಲ್ಲಾ ಏನೇ ಇರಲಿ ರಾಜ್ಯ ಮತ್ತು ದೇಶದ ಗಮನ ಸೆಳೆದ ಸೋರಿಕೆಗಳ ಮೇಲೆ ಒಂದು ರೌಂಡಪ್ ಮಾಡಿಕೊಂಡು ಬರೋಣ..[ವರದಿ ಸೋರಿಕೆಯಾಗಿದೆ ನಿಜ, ಕ್ಷಮಿಸಿ: ಲೋಕಾಯುಕ್ತ ಹೆಗ್ಡೆ]
ಲೋಕಾಯುಕ್ತ ವರದಿ ಸೋರಿಕೆ
2011 ರ ಜುಲೈನಲ್ಲಿ ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತ ಸಂಸ್ಥೆ ಸಿದ್ಧ ಮಾಡಿದ್ದ ವರದಿ ಸೋರಿಕೆಯಾಗಿತ್ತು. ಇದನ್ನು ನಿಜ ಎಂದು ಸ್ವತಃ ಅಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಒಪ್ಪಿಕೊಂಡಿದ್ದರು.
ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ
ಕರ್ನಾಟಕ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ತಂದಿಟ್ಟ ದ್ವಿತೀಯ ಪಿಯು ರಸಾಯನಶಾಸ್ತ್ರ ಪರೀಕ್ಷೆ ಸೋರಿಕೆ ಪ್ರಕರಣ ಇನ್ನು ಹಸಿಯಾಗೇ ಇದೆ. ಅಂತಿಮವಾಗಿ ಸರ್ಕಾರ ಏಪ್ರಿಲ್ 12 ರಂದು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಇದಕ್ಕೂ ಮುನ್ನ ಎರಡು ಸಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು.
ಸಿಬಿ ಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ
ಕಳೆದ ಮಾರ್ಚ್ ನಲ್ಲಿ ನಡೆದ ಸಿಬಿಎಸ್ ಇ(ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗುಲ್ಲು ಎದ್ದಿತ್ತು.
ಕಲ್ಲಿದ್ದಲು ಹಗರಣ
ಸಾವಿರಾರು ಕೋಟಿಯ ಕಲ್ಲಿದ್ದಲು ಹಗರಣದ ಆರೋಪಿಗಳ ಪಟ್ಟಿ ಸೋರಿಕೆಯಾಗಿತ್ತು ಎಂಬ ಮಾತು ಸಹ ಕೇಳಿಬಂದಿತ್ತು.
ವಿಕಿಲೀಕ್ಸ್
ಇದರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟವರ ಪಟ್ಟಿ ಪ್ರಪಂಚದಾದ್ಯಂತ ಸುದ್ದಿಯಾಗಿತ್ತು. ಭಾರತದಲ್ಲೂ ಸಂಚಲನ ಸೃಷ್ಟಿಯಾಗಿತ್ತು.
ಪನಾಮಾ ಲೀಕ್ಸ್
ಅಮೆರಿಕದ ಪನಾಮಾದ ಸಂಸ್ಥೆಯೊಂದು ಗುಪ್ತನಿಧಿ ಇಟ್ಟ ಗಣ್ಯರ ಪಟ್ಟಿಯನ್ನು ಕಳೆದ ವಾರ ಬಿಡುಗಡೆ ಮಾಡಿದ್ದು ಸುದ್ದಿಯಾಗಿತ್ತು. ನಟ ಅಮಿತಾಬ್ ಬಚ್ಚನ್, ನಟಿ ಐಶ್ವರ್ಯಾ ರೈ ಹೆಸರು ಕಾಣಿಸಿಕೊಂಡಿತ್ತು.