2017ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಜನಪದ ಹೆಜ್ಜೆ
ಈ ಬಾರಿಯ ಗಣರಾಜ್ಯೋತ್ಸವ ಅಂಗವಾಗಿ ರಾಜಪಥದಲ್ಲಿ ನಡೆಯಲಿರುವ ಪರೇಡ್ ನಲ್ಲಿ ಕರ್ನಾಟಕದ ಜನಪದ ನೃತ್ಯದ ವಿವಿಧ ಭಂಗಿಗಳು ಪ್ರದರ್ಶನಗೊಳ್ಳಿವೆ. ಇನ್ನು ರಾಜಪಥ ಪರೇಡ್ ಗೆ ಆಯ್ಕೆಯಾಗಲು ಏನೆಲ್ಲ ಮಾನದಂಡಗಳಿರುತ್ತವೆಂಬುವುದನ್ನು ಇಲ್ಲಿ ತಿಳಿಸಲಾಗಿದೆ.
ಬೆಂಗಳೂರು ಜನವರಿ.24 : ಕಳೆದ ಬಾರಿ ಜನವರಿ 26 ಗಣರಾಜ್ಯೋತ್ಸವದ ಪ್ರಯುಕ್ತ ದೆಹಲಿಯ ರಾಜಪಥದಲ್ಲಿ ಘಮ-ಘಮ ಎನಿಸಿದ್ದ ಕೊಡಿಗನ ಕಾಫಿಯ ನಂತರ ಈ ಬಾರಿಯ ರಾಜಪಥದಲ್ಲಿ ನಡೆಯಲಿರುವ ಪಥ ಸಂಚಲನದಲ್ಲಿ ಜನಪದ ನೃತ್ಯ ಪ್ರಕಾರಗಳ ಸ್ತಬ್ಧಚಿತ್ರ ರಾಜ್ಯವನ್ನು ಪ್ರತಿನಿಧಿಸಲಿದೆ.
ರಾಜ್ಯ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ, ರಕ್ಷಣಾ ಸಚಿವಾಲಯದ ಬಿಗಿ ಕಾವಲಿನಲ್ಲಿ ಕಳೆದೊಂದು ತಿಂಗಳಿನಿಂದ ಸ್ತಬ್ಧಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. [2017 ಗಣರಾಜೋತ್ಸವ ಪರೇಡ್ ನಲ್ಲಿ ಮಂಗ್ಳೂರಿನ ನಿಷೆಲ್]
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶು ಕುಮಾರ್ ಅವರು ರಾಜ್ಯವನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರದ ಬಗ್ಗೆ ವಿವರಣೆ ನೀಡಿದರು. ರಕ್ಷಣಾ ಇಲಾಖೆಯ ಆಯ್ಕೆ ಸಮಿತಿ ಕರ್ನಾಟಕದ ಜನಪದ ನೃತ್ಯ ಪ್ರಕಾರಗಳನ್ನು ಆಯ್ಕೆ ಮಾಡಿದೆ. [ಗಣರಾಜೋತ್ಸವ ಪರೇಡ್ ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಪಂಚಮಿ]
ಈ ಸ್ತಬ್ಧಚಿತ್ರದಲ್ಲಿ ಗೊರವರ ಕುಣಿತ, ಡೊಳ್ಳು ಕುಣಿತ, ಸೋಮನ ಕುಣಿತ, ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಪಟ್ಟದ ಕುಣಿತ, ಜಗ್ಗಲಗೆ, ದಾಸರಪದ, ನಂದಿಧ್ವಜದಂತಹ ಜನಪದ ಪ್ರಕಾರಗಳು ಇರಲಿವೆ. ಇದಕ್ಕಾಗಿ ರಾಜ್ಯದಿಂದ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಕಳೆದ 15 ದಿನಗಳಿಂದ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ರಾಜ್ಯದ ಪ್ರಸಿದ್ಧ ಕಲಾವಿದರಾದ ಶಶಿಧರ ಅಡಪ ಅವರ ಕೈಚಳಕದಲ್ಲಿ ರಾಜ್ಯದ ಸ್ತಬ್ಧಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಒಂದು ತಿಂಗಳಿಂದ 25ಕ್ಕೂ ಹೆಚ್ಚು ಕಾರ್ಮಿಕರು ಇದಕ್ಕಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ವಿ. ಮನೋಹರ್ ಅವರು ಸ್ತಬ್ಧಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಇಲಾಖೆಯ ಉಪ ನಿರ್ದೇಶಕರಾದ ಗುರುಮೂರ್ತಿ, ಗಿರೀಶ್ ಎಲ್.ಪಿ. ಅವರು ಸ್ತಬ್ಧಚಿತ್ರದ ನಿರ್ಮಾಣದ ಉಸ್ತುವಾರಿ ವಹಿಸಿದ್ದು, ಅಮರೇಶ್ ದೊಡ್ಡಮನಿ ಕಲಾವಿದರ ಉಸ್ತುವಾರಿ ವಹಿಸಿದ್ದಾರೆ ಎಂದು ತಿಳಿಸಿದರು.
ಪ್ರತಿ ಗಣರಾಜ್ಯೋತ್ಸವದಲ್ಲಿ ಸ್ತಬ್ಧಚಿತ್ರಗಳನ್ನು ಕೇಂದ್ರ ಸಮಿತಿ ಹೇಗೆ ಆಯ್ಕೆಮಾಡಿಕೊಳ್ಳುತ್ತದೆ. ಅದರ ನೀತಿ-ನಿಯಮಗಳೇನು ಎಂಬುವುದರ ಬಗ್ಗೆ ಸ್ವಲ್ಪ ಮಾಹಿತಿ ನಿಮಗೆ ತಿಳಿದಿರಲಿ ಎಂಬ ಉದ್ದೇಶದಿಂದ ಇಲ್ಲಿ ತಿಳಿಸಲಾಗಿದೆ.
ಮೂರ್ನಾಲ್ಕು ವಿಷಯಯೊಂದಿಗೆ ನೀಲಿನಕ್ಷೆ
ರಾಜ್ಯಗಳು ತಾವು ಪ್ರದರ್ಶನಗೊಳಿಸಲು ಬಯಸುವ ಮೂರ್ನಾಲ್ಕು ವಿಷಯಗಳನ್ನು ಚಿತ್ರ ವಿನ್ಯಾಸದೊಡನೆ ಆಯ್ಕೆ ಸಮಿತಿಯ ಮುಂದೆ ಮಂಡಿಸಬೇಕು. ಈ ಸಮಿತಿ ಅದರಲ್ಲಿ ಒಂದೆರಡು ವಿಷಯಗಳನ್ನು ಆಯ್ಕೆ ಮಾಡಿ ಅದನ್ನು ಮತ್ತಷ್ಟು ಚೆಂದ ಮಾಡಿ ಪ್ರದರ್ಶಿಸುವಂತೆ ಹೇಳುತ್ತದೆ . ಇಲ್ಲಿ ಅಂತಿಮ ವಿಷಯ ಆಯ್ಕೆಯಾದ ನಂತರ ಅದರ ಮೂರು ಆಯಾಮದ ಕೀ ಮಾದರಿಯನ್ನು ಸಮಿತಿಯ ಮುಂದೆ ಪ್ರದರ್ಶಿಸ ಬೇಕು. ಇಲ್ಲಿ ಆಯ್ಕೆಯಾದ ನಂತರ ಸ್ತಬ್ದ ಚಿತ್ರ ಮಾದರಿಗೆ ಅನುಗುಣವಾದ ಒಂದು ನಿಮಿಷದ ಮೂರ್ನಾಲ್ಕು ಸಂಗೀತ ತುಣುಕುಗಳ ಜೊತೆ ಆಯ್ಕೆ ಸಮಿತಿಯ ಮುಂದೆ ತೋರಿಸಬೇಕು.
ಪರಿಣಿತರಿಂದ ಪರಿಶೀಲನೆ
ಈ ಆಯ್ಕೆ ಸಮಿತಿಯಲ್ಲಿ ರಾಷ್ಟ್ರ ಖ್ಯಾತಿಯ ಕಲಾಕಾರರು, ವಿನ್ಯಾಸಗಾರರು , ಸಂಗೀತ ಪರಿಣಿತರು , ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳು ಇರುತ್ತಾರೆ . ಅವರೆಲ್ಲರೂ ಕಣ್ಣಲ್ಲಿ ಕಣ್ಣಿಟ್ಟು ನಮ್ಮ ಸ್ತಬ್ದ ಚಿತ್ರ ಮಾದರಿಯನ್ನು ಪ್ರತೀ ಹಂತದಲ್ಲಿ ಪರಿಶೀಲಿಸುತ್ತಾರೆ. ಅವರ ಮುಂದೆ ನಮ್ಮ ಸ್ತಬ್ದ ಚಿತ್ರ ಮಾದರಿ ಪ್ರದರ್ಶಿಸುವಾಗ ನಮ್ಮ ಎದೆಯಲ್ಲಿ ಡವ ಡವ ಎನ್ನುತ್ತಿರುತ್ತದೆ. ಕಳೆದ ಹದಿನಾರು ವರ್ಷಗಳಿಂದ ನಮ್ಮ ಸ್ತಬ್ದ ಚಿತ್ರ ಮಾದರಿ ಪ್ರದರ್ಶಿಸುತ್ತಿರುವ ನಮಗೆ ಈ ಮಾದರಿಯ ಭಯ ಇರಬೇಕಾದರೆ ಮೊದಲ ಬಾರಿಗೆ ಪ್ರದರ್ಶಿಸುವ ಅಧಿಕಾರಿಗಳ ಪರಿಸ್ಥಿತಿ ಹೇಗಿರಬೇಡ ?
ಸಮಿತಿಯ ಅಂತಿಮ ತೀರ್ಮಾನ
ಈ ಅಂತಿಮ ಹಂತದ ಆಯ್ಕೆ ನಂತರವಷ್ಟೇ ನಮಗೆ ನಿರಾಳ . ಆದಾಗ್ಯೂ , ಅಂತಿಮ ಹಂತದ ನಂತರವೂ ಸ್ತಬ್ದ ಚಿತ್ರ ನಿರ್ಮಾಣ ನಿರೀಕ್ಷಿತ ಗುಣಮಟ್ಟದಲ್ಲಿ ಮೂಡಿಬರುತ್ತಿಲ್ಲ ಎಂದು ಅವರಿಗೆ ಅನಿಸಿದರೆ ಆಗ ಕೂಡ ಸ್ತಬ್ದಚಿತ್ರವನ್ನು ಹಿಂದಕ್ಕೆ ಕಳುಹಿಸುವ ನಿರ್ಧಾರವನ್ನು ಆಯ್ಕೆ ಸಮಿತಿ ತನ್ನ ಬಳಿ ಇಟ್ಟುಕೊಂಡಿರುತ್ತದೆ. ಇಷ್ಟೆಲ್ಲಾ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಳೆದ ಎಂಟು ವರ್ಷಗಳಿಂದ ದೆಹಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಸತತವಾಗಿ ಸಾಗಿ ಬರುತ್ತಿರುವ ನಮ್ಮ ರಾಜ್ಯದ ಸಾಧನೆಯ ಬಗ್ಗೆ ನಮಗಂತೂ ಹೆಮ್ಮೆಯಿದೆ. ನಿಮಗೂ ಹೆಮ್ಮೆ ಎನಿಸಿದರೆ ದಯವಿಟ್ಟು ನಿಮ್ಮ ಮೆಚ್ಚುಗೆಯನ್ನು ನಮ್ಮೊಡನೆ ಹಂಚಿಕೊಳ್ಳಿ.
ರಾಜ್ಯಕಲಾವಿದರ ಮನದ ಮಾತುಗಳು
ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ. ತಮಗೆ ಇದೊಂದು ಅವಿಸ್ಮರಣೀಯ ಸಮಯ. ನಡುಗುವ ಚಳಿಯಲ್ಲೂ ಮುಂಜಾನೆ ವೇಳೆ ರಾಜ್ಪಥ್ ನಲ್ಲಿ ಅಭ್ಯಾಸ ನಡೆಸುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸ್ಥಭ್ತ ಚಿತ್ರವನ್ನು ರಾಜಪಥ ಪರೇಡ್ ಗೆ ಆಯ್ಕೆ ಮಾಡಲಾಗುತ್ತದೆ. ಅದರ ನೀತಿ ನಿಯಮಗಳೇನು ಎಂಬುವುದನ್ನು ಸ್ವಲ್ಪ ನಿಮ್ಮಗೆ ತಿಳಿಸುವ ಪ್ರಯತ್ನ ನಮ್ಮದು.