ವಿಶ್ವಾಸಮತದ ಗೆಲುವಿಗಾಗಿ ಲಿಂಗಾಯತ ಮಠಗಳ ಮೊರೆಹೊಕ್ಕ ಬಿಜೆಪಿ
ಬೆಂಗಳೂರು, ಮೇ 18 : ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚು ಸ್ಥಾನ ಸಿಗುವಲ್ಲಿ ಮಹತ್ವದ ಪಾತ್ರ ವಹಿಸಿರುವ ಕರ್ನಾಟಕದ ಲಿಂಗಾಯತ ಮತ್ತು ವೀರಶೈವ ಮಠಮಾನ್ಯಗಳು, ವಿಶ್ವಾಸಮತ ಯಾಚನೆಯಲ್ಲಿಯೂ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ.
104 ಸ್ಥಾನಗಳಿರುವ ಬಿಜೆಪಿ ಬಹುಮತಕ್ಕೆ ಬೇಕಾದ 112 ಸಂಖ್ಯೆಯನ್ನು ತಲುಪುವುದು ಹೇಗೆಂದು ತಲೆಯನ್ನು ಭಾರೀ ಬಿಸಿ ಮಾಡಿಕೊಂಡಿದೆ. ಕುದುರೆ ವ್ಯಾಪಾರ ಮಾಡದೆ ಅನ್ಯ ದಾರಿಯಿಲ್ಲ. ಆದರೆ, ಕುದುರೆ ವ್ಯಾಪಾರ ಮಾಡುವಂತಿಲ್ಲ. 'ಅನ್ಯ' ಮಾರ್ಗದ ಮೂಲಕ ಪ್ರಯತ್ನಿಸಿದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಲೆಗೆ ಬೀಳುತ್ತಿಲ್ಲ.
ಸದನದಲ್ಲಿ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ಏನ್ಮಾಡ್ಬೇಕು?
ಈಗ ಕಂಡುಕೊಂಡಿರುವ ಅಂತಿಮ ಮಾರ್ಗವೆಂದರೆ, ಕರ್ನಾಟಕದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವ ಲಿಂಗಾಯತ ಮತ್ತು ವೀರಶೈವ ಮಠಗಳ ಸ್ವಾಮೀಜಿಗಳನ್ನು ಬಳಸಿಕೊಂಡು ಕಾಂಗ್ರೆಸ್ ನಲ್ಲಿ ಇರುವ ಶಾಸಕರು ಬಿಜೆಪಿಗೆ ಬೆಂಬಲ ನೀಡುವಂತೆ ಮನವೊಲಿಸುವುದು. ಈ ಪ್ರಯತ್ನ ಹೆಚ್ಚೂಕಡಿಮೆ ಯಶಸ್ವಿಯಾಗುವಂತೆ ಕಂಡುಬರುತ್ತಿದೆ.
ರಂಭಾಪುರಿ ಮಠದಿಂದ ಹಿಡಿದುಕೊಂಡು ಸಿದ್ದಗಂಗಾ ಮಠದವರೆಗೆ ಎಲ್ಲ ಮಠದ ಕದವನ್ನೂ ಅಮಿತ್ ಶಾ ಮತ್ತು ಗ್ಯಾಂಗ್ ತಟ್ಟುತ್ತಿದೆ. ಕಾಂಗ್ರೆಸ್ ನಾಯಕರಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ಈಗಾಗಲೆ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಇನ್ನು ನಾಗೇಂದ್ರ, ರಾಜಶೇಖರ ಬಿ ಪಾಟೀಲ ಮತ್ತು ಎಂವೈ ಪಾಟೀಲರು ಕೂಡ ಕಾಂಗ್ರೆಸ್ಸಿಗೆ ಟಾಟಾ ಹೇಳಲು ಅಣಿಯಾದಂತಿದೆ. ಇವರ ಜೊತೆ ಇನ್ನೂ ಕೆಲ ಲಿಂಗಾಯತ ನಾಯಕರು ಕೈಗೆ ಕೈಕೊಟ್ಟರೂ ಅಚ್ಚರಿಯಿಲ್ಲ.
ಸಸ್ಪೆನ್ಸ್ ಥ್ರಿಲ್ಲರ್ : ಬಹುಮತ ಸಾಬೀತುಪಡಿಸಲು ಬಿಜೆಪಿ ಮಾಸ್ಟರ್ ಪ್ಲಾನ್
ಈ ಎಲ್ಲಾ ಪ್ರಯತ್ನಗಳಿಗೆ, ಮುಂದಾಗಬೇಕಾದ ಕಾರ್ಯಗಳಿಗೆ ಪೂರಕವಾಗುವಂತೆ ಹಂಗಾಮಿ ಸಭಾಧ್ಯಕ್ಷರಾಗಿ ಮಾಜಿ ಸ್ಪೀಕರ್ ಕೆಜಿ ಬೋಪಯ್ಯ ಅವರನ್ನು ನೇಮಕ ಮಾಡಲಾಗಿದೆ. 2010ರಲ್ಲಿ ಕೆಜಿ ಬೋಪಯ್ಯ ಅವರು ಸಭಾಧ್ಯಕ್ಷರಾಗಿದ್ದಾಗ ಏನೇನಾಗಿತ್ತು ಎಂಬುದನ್ನು ಇತಿಹಾಸದ ಪುಟಗಳಿಗೆ ಹೋಗಿ ಬೇಕಿದ್ದರೆ ನೋಡಬಹುದು. ಈ ನಡುವೆ, ಕೆಜಿ ಬೋಪಯ್ಯ ಅವರ ನೇಮಕಾತಿ ವಿರುದ್ಧ ಕಾಂಗ್ರೆಸ್ ಮಧ್ಯರಾತ್ರಿ ಸುಪ್ರೀಂ ಕೋರ್ಟ್ ಕದ ತಟ್ಟಿದರೂ ಅಚ್ಚರಿಯಿಲ್ಲ.
ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸದನದಲ್ಲಿ ಏನೆಲ್ಲ ನಡೆಯಲಿದೆ?
ಇವರು ವ್ಹಿಪ್ ಜಾರಿಯಾಗುವ ಮೊದಲೇ ರಾಜೀನಾಮೆ ನೀಡುತ್ತಾರೋ ಅಥವಾ ಮತ ಚಲಾವಣೆಯಿಂದ ಹಿಂದೆ ಸರಿದುಕೊಳ್ಳುತ್ತಾರೋ ಅಥವಾ ತಮ್ಮ ಆತ್ಮಸಾಕ್ಷಿಗೆ ಬದ್ಧವಾಗಿ ತಾವಿರುವ ಪಕ್ಷಕ್ಕೆ ನ್ಯಾಯ ಸಲ್ಲಿಸುತ್ತಾರೋ ಶನಿವಾರವೇ ತಿಳಿದುಬರಲಿದೆ. ಇದಾವುದೂ ಕೈಗೂಡದಿದ್ದರೆ, ಮುಂದೆ ಏನಾಗುತ್ತೋ ಆಗಲಿ ಎಂದು ಒಂದು ನಮಸ್ಕಾರ ಹಾಕಿ ಹೊರಬರುವ ಅವಕಾಶವಂತೂ ಯಡಿಯೂರಪ್ಪನವರಿಗೆ ಇದ್ದೇ ಇದೆ. ಸಾಧ್ಯವಾದರೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಯಡಿಯೂರಪ್ಪನವರು ಒಂದು ಬಾರಿ ನೆನೆಸಿಕೊಳ್ಳಲಿ.
ಎಲ್ಲರೂ ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ. ಇಲ್ಲಿ ಅಧಿಕಾರದ ಗದ್ದುಗೆಗೇರಲು ಇದು ನೈತಿಕವಾದದ್ದು, ಅದು ಅನೈತಿಕವಾದದ್ದು ಎಂದು ವಿಭಾಗೀಕರಿಸುವ ಅಗತ್ಯವೇ ಇಲ್ಲ. ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸಬಹುದು. ಒಬ್ಬರು ಇನ್ನೊಬ್ಬರ ಮೇಲೆ ಬೆರಳು ತೋರಿಸುವಂತೆಯೂ ಇಲ್ಲ. ಏಕೆಂದರೆ, ಅವರು ಕೂಡ ಇಂಥದೇ ಕ್ರಮವನ್ನು ಅನುಸರಿಸಿ ಬಂದವರೆ. ಹಾಗಾಗಿ, ಶನಿವಾರ ನಡೆಯುವ ನಾಟಕ, ಹಂಗಾಮಾವನ್ನು ನಿರೀಕ್ಷಿಸಲು ಅಡ್ಡಿಯಿಲ್ಲ.