ಇದು ಪ್ರಜಾಪ್ರಭುತ್ವದ ಗೆಲುವು : ಬಿ.ಎಸ್.ಯಡಿಯೂರಪ್ಪ
ಬೆಂಗಳೂರು, ಜುಲೈ 23 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತ ಕಳೆದುಕೊಂಡಿದೆ. ಮಂಗಳವಾರ ನಡೆದ ವಿಶ್ವಾಸಮತಯಾಚನೆಯಲ್ಲಿ ಸರ್ಕಾರ 6 ಮತಗಳಿಂದ ಸೋಲು ಕಂಡಿತು.
ಮಂಗಳವಾರ ಸಂಜೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, "ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ. 14 ತಿಂಗಳ ಮೈತ್ರಿ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದರು" ಎಂದು ತಿಳಿಸಿದರು.
ವಿಶ್ವಾಸಮತದಲ್ಲಿ ಸೋಲು; ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಪತನ
"ಮುಂದಿನ ದಿನದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ರೈತ ನಮ್ಮ ಸರ್ಕಾರದ ಮೊದಲ ಆದ್ಯತೆ" ಎಂದು ಯಡಿಯೂರಪ್ಪ ಹೇಳಿದರು. ಬಿಜೆಪಿ ನಾಯಕರು ಕರ್ನಾಟಕ ಸರ್ಕಾರ ಬಹುಮತ ಕಳೆದುಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
Live Updates ವಿಶ್ವಾಸಮತದಲ್ಲಿ ಕುಮಾರಸ್ವಾಮಿ ಸರ್ಕಾರಕ್ಕೆ ಸೋಲು
2018 ಮೇ 23ರ ಬುಧವಾರ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. 2019 ಜುಲೈ 23 ಮಂಗಳವಾರ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಂಡಿದೆ. ಮತ್ತೊಮ್ಮೆ ಎಚ್. ಡಿ. ಕುಮಾರಸ್ವಾಮಿ ಪೂರ್ಣಾವಧಿ ಪೂರೈಸದೇ ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿ ನಾಯಕರು ರಾಜ್ಯಪಾಲರನ್ನು ಬುಧವಾರ ಭೇಟಿಯಾಗುವ ಸಾಧ್ಯತೆ ಇದೆ.
ರಾಮನಗರದಿಂದ ಬಂದ ಮುಖ್ಯಮಂತ್ರಿಗಳು; ಒಲಿಯದ ಪೂರ್ಣಾವಧಿ ಆಡಳಿತ
ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ
"ಈ ರಾಜ್ಯದ ಜನ ಮತ ನೀಡಿ ನಿಮ್ಮ ಮೇಲೆ ವಿಶ್ವಾಸ ಇಲ್ಲ ಅಂತ ಮತದಾನದ ಮೂಲಕ ಹೇಳಿದಾಗ ಅದನ್ನು ಧಿಕ್ಕರಿಸಿ ನಿಮ್ಮ ಅಪವಿತ್ರ ಮೈತ್ರಿ ಸರ್ಕಾರ ರಚಿಸಿದ್ರಿ. ಆದರೆ, ಅದು ಇಂದು ನಿಮಗೆ ಅರಿವಾಗಿದೆ. ಇದನ್ನೇ ಪ್ರಜಾಪ್ರಭುತ್ವ ಅನ್ನೋದು. ಗೆದ್ದೇ ಗೆಲ್ಲುವೆವು ಒಂದು ದಿನ ಗೆಲ್ಲಲೇಬೇಕು ಒಳ್ಳೆತನ" ಎಂದು ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಆರ್.ಅಶೋಕ್ ಹೇಳಿಕೆ
"ಕಳೆದ 14ತಿಂಗಳುಗಳಿಂದ ಹಿಡಿದಿದ್ದ ಗ್ರಹಣದಿಂದ ನಮ್ಮ ರಾಜ್ಯ ಕೊನೆಗೂ ಮುಕ್ತವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಸಿರಿಗನ್ನಡಂ ಗೆಲ್ಗೆ. ಜಯ್ ಹಿಂದ್" ಎಂದು ಆರ್.ಅಶೋಕ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾಪ್ರಭುತ್ವದ ಗೆಲುವು
"ಮೈತ್ರಿ ಸರ್ಕಾರ ಪತನ ಪ್ರಜಾಪ್ರಭುತ್ವದ ಗೆಲವು. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಯಾಗಲಿದೆ" ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.
ತೇಜಸ್ವಿಸೂರ್ಯ ಟ್ವೀಟ್
2018ರಲ್ಲಿ ಕನ್ನಡಿಗರು ನಮ್ಮ ಪರವಾಗಿ ತೀರ್ಪು ನೀಡಿದ್ದರು. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ಹೊಸ ಮೈಲುಗಲ್ಲು ಸ್ಥಾಪನೆ ಮಾಡಲಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ ಟ್ವೀಟ್ ಮಾಡಿದ್ದಾರೆ.