ನೆರೆ ಪೀಡಿತ ರಾಯಚೂರು, ಬಾಗಲಕೋಟೆ ತಲುಪಿದ ಇನ್ಫಿ ನೆರವು
Recommended Video
ಬೆಂಗಳೂರು, ಆಗಸ್ಟ್ 08: ಇನ್ಫೋಸಿಸ್ನ ಅಂಗಸಂಸ್ಥೆಯಾಗಿರುವ ಸ್ವಯಂ ಸೇವಾ ಸಂಸ್ಥೆಯಾದ ಇನ್ಫೋಸಿಸ್ ಫೌಂಡೇಶನ್ ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಗಳಿಗೆ 10 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದೆ. ಇದಾದ ಬೆನ್ನಲ್ಲೇ ಪರಿಹಾರ ಕಾರ್ಯಕ್ಕೆ ತ್ವರಿತಗತಿ ಚಾಲನೆಯನ್ನು ಸ್ಥಾಪಕಿ ಸುಧಾಮೂರ್ತಿ ನೀಡಿದ್ದಾರೆ.
ಈಗಾಗಲೇ ರಾಯಚೂರು, ಬಾಗಲಕೋಟೆ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಫೌಂಡೇಶನ್ ಪರಿಹಾರ ಕಾರ್ಯಗಳನ್ನು ಆರಂಭಿಸಿದ್ದು, ಉಳಿದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತನ್ನ ಜಾಲಗಳು ಮತ್ತು ಸ್ವಯಂಸೇವಕರೊಂದಿಗೆ ಹಂತಹಂತವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಿದೆ. ಕುಡಿಯುವ ನೀರು, ಆಹಾರ ಉತ್ಪನ್ನಗಳು, ಬಟ್ಟೆ ಮತ್ತು ವೈದ್ಯಕೀಯ ಕಿಟ್ಗಳು ಸೇರಿದಂತೆ ಪ್ರವಾಹಪೀಡಿತ ಪ್ರದೇಶಗಳ ಜನರ ಅಗತ್ಯ ವಸ್ತುಗಳನ್ನು ವಿತರಣೆ ಕಾರ್ಯವನ್ನು ಫೌಂಡೇಶನ್ ಈಗಾಗಲೇ ಆರಂಭಿಸಿದೆ.
ನೆರೆ ಸಂತ್ರಸ್ತರಿಗೆ 10 ಕೋಟಿ ರೂ. ನೆರವು ನೀಡಲು ಮುಂದಾದ ಸುಧಾಮೂರ್ತಿ
ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅನಾಹುತಗಳು ಸಂಭವಿಸಿದ್ದು, ರಸ್ತೆ, ರೈಲು ಸಂಪರ್ಕಕ್ಕೆ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೌಂಡೇಶನ್ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಅಗತ್ಯ ಇರುವೆಡೆ ಪರಿಹಾರ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಇನ್ಫೋಸಿಸ್ ಫೌಂಡೇಶನ್ ಪ್ರಕೃತಿ ವಿಕೋಪಗಳಿಗೆ ತುತ್ತಾದ ಜನರಿಗೆ ನೆರವಾಗುತ್ತಾ ಬಂದಿದೆ. ಇತ್ತೀಚೆಗೆ ಒಡಿಶಾದಲ್ಲಿ ಸೈಕ್ಲೋನ್ನಿಂದ ಉಂಟಾದ ಅನಾಹುತಗಳಿಗೆ ತುತ್ತಾದ ಜನರಿಗೆ ಫೌಂಡೇಶನ್ ನೆರವಾಗಿತ್ತು. ಇದಲ್ಲದೇ, ಕಳೆದ ವರ್ಷ ಕೇರಳ ಮತ್ತು ಕರ್ನಾಟಕದ ಕೊಡಗು ಜಿಲ್ಲೆ, ಅಸ್ಸಾಂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ನೆರವಿನ ಹಸ್ತ ಚಾಚಿತ್ತು.