ಪ್ರವಾಹ ಸ್ಥಿತಿ: ಸುವರ್ಣಸೌಧಕ್ಕೆ ರಾಜ್ಯಾಡಳಿತ ಶಿಫ್ಟ್ ಆಗಲಿ
ಬೆಂಗಳೂರು, ಆಗಸ್ಟ್ 08: "ಉತ್ತರ ಕರ್ನಾಟಕ ಪ್ರವಾಹ ಪರಿಸ್ಥಿತಿ ನಿಭಾಯಿಸುವುದು ರಾಜ್ಯದ ಸರ್ಕಾರದ ಜವಾಬ್ದಾರಿಯಾಗಿದ್ದು, ಪರಿಹಾರ ಕಾರ್ಯದ ನಿಮಿತ್ತ ಮುಂದಿನ ಒಂದು ವಾರದ ಕಾಲ ರಾಜ್ಯಾಡಳಿತ ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರವಾಗಲಿ" ಎಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಗಂಭೀರವಾದ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಅದರಲ್ಲಿಯೂ ಉತ್ತರ ಕರ್ನಾಟಕದ ಬಹುತೇಕ ಕಡೆ ಲಕ್ಷಾಂತರ ಜನ ನೆರೆಯಲ್ಲಿ ಸಿಲುಕಿದ್ದಾರೆ ಹಾಗೂ ಆಸ್ತಿ-ಪಾಸ್ತಿ-ಜೀವನೋಪಾಯಗಳನ್ನು ಕಳೆದುಕೊಂಡಿದ್ದಾರೆ. ದುರದೃಷ್ಟವಶಾತ್ ಹಲವರ ಪ್ರಾಣಹಾನಿಯೂ ಆಗಿದೆ. ರಾಜ್ಯದಲ್ಲಿ ಪೂರ್ಣಪ್ರಮಾಣದ ಮಂತ್ರಿಮಂಡಲ ಇಲ್ಲದಿರುವ ಕಾರಣ ಇಂತಹ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ಮೇಲುಸ್ತುವಾರಿ ವಹಿಸಬಹುದಾಗಿದ್ದ ಮಂತ್ರಿಗಳೂ ಇಲ್ಲದಿರುವುದು ಪ್ರವಾಹದ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.
ಕರಾವಳಿಯಲ್ಲಿ ಭಾರೀ ಮಳೆ, ತುಂಬಿಹೋಗುತ್ತಿವೆ ತಗ್ಗು ಪ್ರದೇಶಗಳು
ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳು ತಮಗೆ ಅನುಕೂಲವಾದಾಗ ನೆರೆಪ್ರವಾಹ ಬಂದಿರುವ ಭಾಗಕ್ಕೆ ವಿಮಾನದಲ್ಲಿ ಹೋಗಿ ಪರಿಹಾರ ಕಾರ್ಯದಲ್ಲಿ ಮತ್ತು ಮೇಲುಸ್ತುವಾರಿಯಲ್ಲಿ ತೊಡಗುವುದು ಬೇಜವಾಬ್ದಾರಿತನ. ಹಾಗೆಯೇ ಅಗತ್ಯವಿದ್ದಲ್ಲಿ ಪ್ರವಾಹ ಇಲ್ಲದ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಪ್ರವಾಹಪೀಡಿತ ಸ್ಥಳಗಳಿಗೆ ಪ್ರವಾಹ ಪರಿಹಾರ ಕಾರ್ಯಕ್ಕೆ ನಿಯೋಜಿಸಲು ಆಗ್ರಹಿಸುತ್ತದೆ.
ಒಂದು ವಾರದ ಕಾಲ ಬೆಳಗಾವಿಯಿಂದ ಕಾರ್ಯ ನಿರ್ವಹಣೆ
ಮುಂದಿನ ಒಂದು ವಾರದ ಕಾಲ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ಮುಖ್ಯಕಾರ್ಯದರ್ಶಿಗಳು ಹಾಗೂ ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ, ನೀರಾವರಿ, ಲೋಕೋಪಯೋಗಿ ಮತ್ತಿತರ ಪ್ರಮುಖ ಇಲಾಖೆಗಳ ಎಲ್ಲಾ ಉನ್ನತಾಧಿಕಾರಿಗಳು ಬೆಳಗಾವಿಯ ಸುವರ್ಣಸೌಧದಿಂದ ಕಾರ್ಯನಿರ್ವಹಿಸಬೇಕು ಮತ್ತು ಅಗತ್ಯ ಸಮಯದಲ್ಲಿಯೆ ಜನರ ಸಂಕಷ್ಟ ಪರಿಹಾರಕ್ಕೆ ಮುಂದಾಗಬೇಕು ಎಂದು "ಕರ್ನಾಟಕ ರಾಷ್ಟ್ರ ಸಮಿತಿ" ಪಕ್ಷವು ಆಗ್ರಹಿಸುತ್ತದೆ.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
100 ಕೋಟಿ ರೂಪಾಯಿಗಳನ್ನು ನೆರೆಗೆ ಮೀಸಲಿಡಿ
ಇದೇ ಸಂದರ್ಭದಲ್ಲಿ, ರಾಜ್ಯದ ಲಕ್ಷಾಂತರ ಕನ್ನಡಿಗರು ಉತ್ತರ ಕರ್ನಾಟಕದ ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದಾರೆ. ಪರರ ಸಂಕಷ್ಟಕ್ಕೆ ಮತ್ತು ದುಃಖಕ್ಕೆ ಸಹಾನುಭೂತಿ ತೋರಿಸುವುದು ಮತ್ತು ಸಹಾಯ ಮಾಡುವುದು ಕನ್ನಡಿಗರ ರಕ್ತದಲ್ಲಿಯೇ ಇರುವ ಗುಣ. ಆದರೆ ಈಗಿನ ಸಮಸ್ಯೆಗೆ ಪರಿಹಾರ ನಾವು ತಲುಪಿಸುವ ವಸ್ತುಗಳಲ್ಲಿ ಇಲ್ಲ. ನಮ್ಮ ರಾಜ್ಯದ ಸರ್ಕಾರದ ಈ ವರ್ಷದ ಬಜೆಟ್ ಗಾತ್ರ ಎರಡು ಲಕ್ಷ ಮುವ್ವತ್ತನಾಲ್ಕು ಸಾವಿರ ಕೋಟಿ (2,34,00,00,00,00,000) ರೂಪಾಯಿಗಳು. ಈಗಿನ ಪ್ರವಾಹ ನಿಯಂತ್ರಣ ಮತ್ತು ತಕ್ಷಣದ ಪರಿಹಾರ ಕಾರ್ಯಗಳಿಗೆ ಬಹುಶಃ 100 ಕೋಟಿ ರೂಪಾಯಿಗಳು ಸಾಕಷ್ಟಾಗುತ್ತದೆ.
ಬೆಳಗಾವಿಯ ಐತಿಹಾಸಿಕ ಪ್ರವಾಹಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ...
ಸರ್ಕಾರದ ಮೇಲೆ ಒತ್ತಡ ತರುವ ಕೆಲಸವಾಗಲಿ
ಇದು ಸರ್ಕಾರಕ್ಕೆ ನಗಣ್ಯವಾದ ಮೊತ್ತ. ಬೇಕಾಗಿರುವುದು ಚಿತ್ತಶುದ್ಧಿ ಮತ್ತು ಇಚ್ಛಾಶಕ್ತಿ. ಬೃಹತ್ ಗಾತ್ರದ ನಮ್ಮ ಆಡಳಿತ ಯಂತ್ರಾಂಗ ಪ್ರಾಮಾಣಿಕವಾಗಿ ತೊಡಗಿಸಿಕೊಂಡರೆ ಎಲ್ಲರಿಗಿಂತಲೂ ಮೊದಲು ಅವರು ಸಂತ್ರಸ್ತರನ್ನು ಮುಟ್ಟಬಹುದು ಮತ್ತು ಅವರಿಗೆ ಆಸರೆಯಾಗಬಹುದು. ಈ ಹಿನ್ನೆಲೆಯಲ್ಲಿ ಕಾಳಜಿಯುಳ್ಳ ಎಲ್ಲಾ ಕನ್ನಡಿಗರು ಮಾಡಬೇಕಾದ ಕೆಲಸ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಸ್ಥಿತಿಯನ್ನು ಎಲ್ಲರ ಗಮನಕ್ಕೆ ತರುವುದು ಮತ್ತು ಆ ಮೂಲಕ ಸರ್ಕಾರದ ಮೇಲೆ ಒತ್ತಡ ತರುವುದು. ಜೊತೆಗೆ ಪರಿಹಾರ ಕಾರ್ಯದಲ್ಲಿ ಯಾವುದೇ ಬೇಜವಾಬ್ದಾರಿತನ ಹಾಗೂ ಭ್ರಷ್ಟಾಚಾರ ನುಸುಳದ ರೀತಿಯಲ್ಲಿ ಆಧುನಿಕ ಮಾಧ್ಯಮಗಳ ಮೂಲಕ ಹದ್ದಿನ ಕಣ್ಣಿಟ್ಟು ಕಾಯುವುದು. ನಂತರವೂ ಅಗತ್ಯವಿದ್ದಲ್ಲಿ ಪರಿಹಾರ ಸಾಮಗ್ರಿಗಳ ಸಂಗ್ರಹ ಮತ್ತು ವಿತರಣೆಯಲ್ಲಿ ತೊಡಗುವ ಕಾರ್ಯವಾಗಬೇಕಿದೆ.
ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳಲಾಗುವುದು
"ಕರ್ನಾಟಕ ರಾಷ್ಟ್ರ ಸಮಿತಿ" ಪಕ್ಷದ ಪದಾಧಿಕಾರಿಗಳು ಸಹ ಆದಷ್ಟು ಶೀಘ್ರದಲ್ಲಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲು ಹಾಗೂ ಸರ್ಕಾರ ನಿರ್ವಹಿಸುತ್ತಿರುವ ಪರಿಹಾರ ಕಾರ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳಲು ನಾನು ಈ ಮೂಲಕ ವಿನಂತಿಸುತ್ತೇನೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಬೆಳಗಾವಿ ಪ್ರವಾಹ: 48 ಗಂಟೆ ನಂತರ ಬಚಾವಾದ್ರು ಮರದ ಮೇಲೆ ಕುಳಿತಿದ್ದ ದಂಪತಿ