ಮಳೆ, ಪ್ರವಾಹದಲ್ಲಿ ಜನ ತತ್ತರ, ಇತ್ತ ಜನಪ್ರತಿನಿಧಿಗಳಿಗೆ ಜ್ವರ!
Recommended Video
ಬೆಂಗಳೂರು, ಆಗಸ್ಟ್ 9: ಉತ್ತರ ಕರ್ನಾಟಕದ ಜಿಲ್ಲೆಗಳು ಮತ್ತು ಉತ್ತರ ಕನ್ನಡದ ಅನೇಕ ಪ್ರದೇಶಗಳಲ್ಲಿ ಮಳೆ ಅನಾಹುತ ಸೃಷ್ಟಿಸಿದೆ. ಇಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಜನರೇ ಮುಂದಾಳತ್ವ ವಹಿಸುವಂತಾಗಿದೆ. ಇಷ್ಟು ದಿನ ರಾಜಕೀಯ ಜಗ್ಗಾಟಗಳಿಂದ ಸದಾ ಸುದ್ದಿಯಲ್ಲಿದ್ದ ಜನಪ್ರತಿನಿಧಿಗಳು ಜನರ ಕಷ್ಟಕ್ಕೆ ಮುಂದಾಗಬೇಕಾದ ಸಂದರ್ಭದಲ್ಲಿ ಒಬ್ಬರೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಸರ್ಕಾರಲ್ಲಿ ಮಂತ್ರಿಮಂಡಲ ಇಲ್ಲದ ಕಾರಣ ಪರಿಹಾರ ಕಾರ್ಯಗಳಿಗೆ ಭಾರಿ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಮಂತ್ರಿ ಮಂಡಲ ಇಲ್ಲದೆ ಇದ್ದರೂ ಶಾಸಕರಾಗಿ ತಮ್ಮ ಕರ್ತವ್ಯಗಳನ್ನು ನಿಭಾಯಿಸದೆ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ಕೆಲವೇ ಮುಖಂಡರು ಪ್ರವಾಹದಲ್ಲಿ ಸಿಲುಕಿರುವ ಜನರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
3 ತಿಂಗಳಲ್ಲಿ ಮಹಾ ಮಳೆಗೆ ಬಲಿಯಾದವರೆಷ್ಟು? ಇಲ್ಲಿದೆ ಮಾಹಿತಿ
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪ್ರವಾಹದ ಸಂಕಷ್ಟಕ್ಕೆ ಒಳಗಾಗಿರುವ ಜನಸಾಮಾನ್ಯರ ಸಮಸ್ಯೆಗೆ ಮಿಡಿಯುತ್ತಿಲ್ಲ ಎಂದು ವಿರೋಧಪಕ್ಷಗಳು ಆರೋಪಿಸುತ್ತಿವೆ. ಈ ಪಕ್ಷಗಳು ಟ್ವಿಟ್ಟರ್ನಲ್ಲಿ ಮಾತ್ರ ಜನಪರ ಕಾಳಜಿ ತೋರಿಸುತ್ತಿವೆ ಎಂದು ಬಿಜೆಪಿ ಪ್ರತ್ಯುತ್ತರ ನೀಡಿದೆ.
ಈ ನಡುವೆ ಕೆಲವು ಜನಪ್ರತಿನಿಧಿಗಳು ಪ್ರವಾಹದ ಸಂದರ್ಭದಲ್ಲಿ ಜನರ ಸಹಾಯಕ್ಕೆ ಧಾವಿಸದೆ ಇರಲು ಕಾರಣ ಅನಾರೋಗ್ಯದ ಕಾರಣಗಳನ್ನು ಮುಂದಿಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್ ಡಿ ಕುಮಾರಸ್ವಾಮಿ ಇಬ್ಬರೂ ಪ್ರವಾಹದಲ್ಲಿ ತೊಂದರೆಗೆ ಒಳಗಾಗಿರುವ ಸ್ಥಳಗಳಿಗೆ ಭೇಟಿ ನೀಡಿಲ್ಲ. ಇಬ್ಬರೂ ಅನಾರೋಗ್ಯದ ಕಾರಣದಿಂದ ಜನರತ್ತ ಹೋಗಲು ಆಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಅದನ್ನು ಬಿಜೆಪಿ ಬೆಂಬಲಿಗರು 'ಪ್ರವಾಹದ ವಿಚಾರದಲ್ಲಿಯೂ ಮೈತ್ರಿ ಮುಂದುವರಿದಿದೆ' ಎಂದು ಲೇವಡಿ ಮಾಡಿದ್ದಾರೆ.
ಕೆ.ಆರ್.ಪೇಟೆ ಹೇಮಾವತಿ ನದಿ ಪಾತ್ರದ ಜನಕ್ಕೆ ಪ್ರವಾಹದ ಎಚ್ಚರಿಕೆ!
ಆದರೆ, ಬಿಜೆಪಿ ಮುಖಂಡರೂ ಅನಾರೋಗ್ಯದ ಕಾರಣ ನೀಡಿ ಪರಿಹಾರ ಕಾರ್ಯದಿಂದ ದೂರ ಉಳಿದಿದ್ದಾರೆ. ತಮ್ಮ ಮೇಲೆ ಅಪವಾದ ಬರಬಾರದೆಂಬ ಕಾರಣಕ್ಕೆ ಟ್ವಿಟ್ಟರ್ನಲ್ಲಿ ಸಮಜಾಯಿಷಿಗಳನ್ನು ನೀಡುತ್ತಿದ್ದಾರೆ.
ಕೆಲವು ದಿನಗಳಿಂದ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣ ತಮಗೆ ಪ್ರಯಾಣ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಕಾರಣದಿಂದ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಬಾದಾಮಿ ಕ್ಷೇತ್ರಕ್ಕೆ ಹೋಗಲು ಆಗುತ್ತಿಲ್ಲ. ಹೀಗಾಗಿ ಮಗ ಯತೀಂದ್ರ ಬಾದಾಮಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕುಮಾರಸ್ವಾಮಿಗೆ ಜ್ವರ
'ಜ್ವರದಿಂದ ಬಳಲುತ್ತಿರುವ ಕಾರಣ ನಾನು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ತೆರಳಿ ಜನರ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಸುರೇಶ್ ಕುಮಾರ್ 'ಗೃಹಬಂಧನ'
'ನನ್ನನ್ನು ನಾನೇ ಶಪಿಸಿಕೊಳ್ಳುವಂತಾಗಿದೆ. ವೈರಲ್ ಜ್ವರ ನನ್ನನ್ನು ಇಂತಹ ಅತಿವೃಷ್ಟಿ ಸಮಯದಲ್ಲಿ ಪ್ರವಾಹಪೀಡಿತ ಜನತೆಯ ಬಳಿ ಹೋಗದಂತೆ "ಗೃಹಬಂಧನ" ದಲ್ಲಿಟ್ಟಿದೆ' ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಮಹಾಮಳೆಗೆ ಧುಮ್ಮಿಕ್ಕುತ್ತಿವೆ ಕಾವೇರಿ ಕೊಳ್ಳದ ಅಣೆಕಟ್ಟೆಗಳು
ಒಂದು ತಿಂಗಳ ಸಂಬಳ
'ಅತಿವೃಷ್ಟಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ಪರಿಹಾರ ಕಾರ್ಯಕ್ಕಾಗಿ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ನಮ್ಮ ಒಂದು ತಿಂಗಳ ಸಂಬಳವನ್ನು ನೀಡುತ್ತಿದ್ದೇವೆ. ಕಷ್ಟದ ಸಂದರ್ಭದಲ್ಲಿ ನಮ್ಮ ಅಣ್ಣ-ತಮ್ಮಂದಿರೊಂದಿಗೆ ನಿಲ್ಲೋಣ' ಎಂದು ಕುಮಾರಸ್ವಾಮಿ ಅವರು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
ಸಂಕಷ್ಟಕ್ಕೆ ನೆರವಾಗುವುದು ಆದ್ಯ ಕರ್ತವ್ಯ
'ನಾನು ಆಡಳಿತ ಪಕ್ಷದಲ್ಲಿಯೇ ಇರಲಿ, ವಿರೋಧ ಪಕ್ಷದಲ್ಲಿಯೇ ಇರಲಿ ಜನರ ಸಂಕಷ್ಟಕ್ಕೆ ನೆರವಾಗುವುದು ಆದ್ಯ ಕರ್ತವ್ಯವೆಂದು ನಂಬಿ ರಾಜಕಾರಣ ಮಾಡುತ್ತ ಬಂದವನು. ಈ ಕಾರಣಕ್ಕಾಗಿಯೇ ನನ್ನ ಬದಲು ನನ್ನ ಮಗ, ವರುಣಾ ಕ್ಷೇತ್ರದ ಶಾಸಕರಾದ ಯತೀಂದ್ರ ಅವರನ್ನು ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಕಳುಹಿಸಿದ್ದೇನೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.