ಕರ್ನಾಟಕದಲ್ಲಿ ಮಹಾ ಪ್ರವಾಹ : ಯಡಿಯೂರಪ್ಪಗೆ ದೇವೇಗೌಡರ ಪತ್ರ
Recommended Video
ಬೆಂಗಳೂರು, ಆಗಸ್ಟ್ 13 : ಕರ್ನಾಟಕದ ಪ್ರವಾಹ ಪರಿಸ್ಥಿತಿ ಬಗ್ಗೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ನನ್ನ ಮತ್ತು ಪಕ್ಷದ ಸಂಪೂರ್ಣ ಸಹಕಾರ ನಿಮಗೆ ಇರುತ್ತದೆ ಎಂದು ಭರವಸೆ ನೀಡಿದ್ದಾರೆ.
ಮಂಗಳವಾರ ಎಚ್. ಡಿ. ದೇವೇಗೌಡರು ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. "ತಾವು ಏಕಾಂಗಿಯಾಗಿ ನೆರೆ ಪೀಡಿತ ಪದೇಶಗಳಿಗೆ ಭೇಟಿ ಕೊಟ್ಟಿರುವುದನ್ನು ಮಾಧ್ಯಮಗಳ ಮೂಲಕ ನಾನು ಸಹ ಗಮನಿಸಿದ್ದೇನೆ. ಜೊತೆಗೆ ಅಧಿಕಾರಿಗಳು ಸಹಕರಿಸುತ್ತಿರುವುದನ್ನು ಸೂಕ್ಷ್ಮವಾಗಿ ಗ್ರಹಿಸಿದ್ದೇನೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಾಗಲಕೋಟೆ : ಪ್ರವಾಹ ಸಂತ್ರಸ್ತರಿಗೆ 30 ಸಾವಿರ ಆಹಾರ ಕಿಟ್
"ಈ ರಾಜ್ಯ ಸರ್ಕಾರ ನೆರೆಹಾವಳಿಯಿಂದ ನೊಂದಿರುವ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಮತ್ತು ಪರಿಹಾರ ಒದಗಿಸುವ ಕಾರ್ಯಗಳ ಬಗ್ಗೆ ಮಾಧ್ಯಮಗಳ ಮೂಲಕ ಮತ್ತು ಭಾದಿತ ಜಿಲ್ಲೆಯಲ್ಲಿರುವ ನಮ್ಮ ಪಕ್ಷದ ಮುಖಂಡರುಗಳಿಂದ ವಿವರಗಳನ್ನು ಪಡೆದಿದ್ದೇನೆ" ಎಂದು ದೇವೇಗೌಡರು ಹೇಳಿದ್ದಾರೆ.
ಚಿತ್ರಗಳು : ಶಿವಮೊಗ್ಗದಲ್ಲಿ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿ ವೀಕ್ಷಣೆ
ಕರ್ನಾಟಕದ 17 ಜಿಲ್ಲೆಗಳ ಜನರು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳ ಲಕ್ಷಾಂತರ ಜನರು ಮಳೆ, ಪ್ರವಾಹದಿಂದಾಗಿ ಸಂತ್ರಸ್ತರಾಗಿದ್ದಾರೆ.
17 ಜಿಲ್ಲೆಗಳ 80 ತಾಲೂಕು ಪ್ರವಾಹ ಪೀಡಿತ, ಸರ್ಕಾರದ ಘೋಷಣೆ
ಯಡಿಯೂರಪ್ಪಗೆ ಪತ್ರ
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಬಗ್ಗೆ ಪತ್ರ ಬರೆದಿದ್ದಾರೆ. ನೆರೆ ಸಂತ್ರಸ್ತರಿಗೆ ಶಿಬಿರಗಳನ್ನು ತೆರೆದು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಕೂಡಾ ಆಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನೆರವು ನೀಡುವುದು ಪ್ರಥಮ ಆದ್ಯತೆ
ನೊಂದ ಸಂತ್ರಸ್ತರನ್ನು ಸಕಾಲದಲ್ಲಿ ಕಾಪಾಡುವುದು, ಅವರ ನೆರವಿಗೆ ದಾವಿಸುವುದು ಮತ್ತು ಪರಿಹಾರ ನೀಡುವುದು ಸರ್ಕಾರದ ಪ್ರಥಮ ಮತ್ತು ಆದ್ಯ ಕರ್ತವ್ಯ. ಆದರೆ, ಈ ಆಗಾದ ಪ್ರಮಾಣದ ದುರಂತವನ್ನು ನಿಭಾಯಿಸುವುದು ಕಷ್ಟ ಸಾಧ್ಯ. ಇದರಲ್ಲಿ ಕೆಲವೊಮ್ಮೆ ಲೋಪ-ದೋಷ ಮತ್ತು ನ್ಯೂನತೆಗಳು ಬರುತ್ತವೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಯಾವುದೇ ರಾಜಕಾರಣ ಬೆರೆಸದೆ ಸಂತ್ರಸ್ತರ ನೆರವಿಗೆ ಧಾವಿಸುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಎಂದು ದೇವೇಗೌಡರು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ನಿಭಾಯಿಸುವುದು ಕಷ್ಟ
ಈ ಬೃಹತ್ ಪ್ರಮಾಣದ ಪರಿಹಾರ ಕಾರ್ಯಗಳನ್ನು ರಾಜ್ಯ ಸರ್ಕಾರ ಒಂದೇ ನಿಭಾಯಿಸುವುದು ಕಷ್ಟ ಸಾಧ್ಯ. ಈ ಹಿನ್ನಲೆಯಲ್ಲಿ ನಾನು ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ರಾಜ್ಯದಲ್ಲಿ ತಲೆದೋರಿರುವ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಮತ್ತು ತುರ್ತು ಪರಿಹಾರ ಕಾರ್ಯಗಳಿಗೆ ಕನಿಷ್ಠ 5000 ಕೋಟಿ ರೂ.ಗಳನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ದಿನಾಂಕ 11/8/2019ರಂದು ಪತ್ರ ಬರೆದಿದ್ದೇನೆ. ಅದರ ಪ್ರತಿಯನ್ನು ಲಗತ್ತಿಸಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ಬೆಂಬಲ ಸದಾ ಇದೆ
ನೊಂದ ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ, ಸಾಂತ್ವನ ನೀಡುವಲ್ಲಿ ಮತ್ತು ನೊಂದ ಕುಟುಂಬಗಳು ಮತ್ತೊಮ್ಮೆ ತಮ್ಮ ಜೀವನವನ್ನು ಪುನಃ ರೂಪಿಸುವಲ್ಲಿ ನನ್ನ ಮತ್ತು ನಮ್ಮ ಪಕ್ಷದ ಸಹಕಾರ ಮತ್ತು ಬೆಂಬಲವಿದೆಯೆಂದು ತಿಳಿಸಬಯಸುತ್ತೇನೆ. ಈ ನಿಟ್ಟಿನಲ್ಲಿ ನಿಮ್ಮ ಸರ್ಕಾರ ಕೈಗೊಳ್ಳುವ ಯೋಜನೆಗಳು ಯಶಸ್ವಿಯಾಗಲೆಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.