ಸರಕಾರಕ್ಕೆ ನಾಡಧ್ವಜ ಸಮಿತಿಯಿಂದ ವರದಿ ಸಲ್ಲಿಕೆ, ಅಧಿವೇಶನದಲ್ಲಿ ಚರ್ಚೆ
ಬೆಂಗಳೂರು, ಫೆಬ್ರವರಿ 6: ನಾಡಧ್ವಜ ಸಮಿತಿ ಇಂದು ಸರಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಪ್ರತ್ಯೇಕ ಕರ್ನಾಟಕ ನಾಡಧ್ವಜಕ್ಕೆ ಸಂಬಂಧಿಸಿದಂತೆ ಸಮಿತಿಯು ವರದಿ ಸಲ್ಲಿಸಿದ್ದು ವಿಧಾನಸಭೆಯಲ್ಲಿ ಮುಂದಿನ ವಾರ ಈ ಸಂಬಂಧ ಚರ್ಚೆ ನಡೆಯಲಿದೆ.
ಕಳೆದ ವರ್ಷದ ಜೂನ್ ನಲ್ಲಿ ಕರ್ನಾಟಕದ ಪ್ರತ್ಯೇಕ ನಾಡಧ್ವಜ ವಿಚಾರ ರಾಷ್ಟ್ರದಾದ್ಯಂತ ವಿವಾದಕ್ಕೆ ಕಾರಣವಾಗಿತ್ತು. ಈ ಸಂದರ್ಭ ಪ್ರತ್ಯೇಕ ನಾಡಧ್ವಜದ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಸರಕಾರ 9 ಸದಸ್ಯರ ಸಮಿತಿ ರಚಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಈ ಸಮಿತಿ ರಚನೆ ಮಾಡಲಾಗಿತ್ತು.
ಪ್ರತ್ಯೇಕ ನಾಡಧ್ವಜದ ವಿನ್ಯಾಸ ಅಂತಿಮಗೊಳಿಸಿದ ಸಮಿತಿ
ಕೆಂಪು, ಹಳದಿ ವರ್ಣದ ಧ್ವಜ ಈಗಾಗಲೇ 'ಕನ್ನಡ ಧ್ವಜ'ವಾಗಿ ಅನಧಿಕೃತವಾಗಿ ಬಳಕೆಯಲ್ಲಿದೆ. ಆದರೆ ಈಗ ರಾಜ್ಯಕ್ಕೆ ಪ್ರತ್ಯೇಕ ಅಧಿಕೃತ ಧ್ವಜ ರೂಪಿಸಿ ಕಾನೂನಿನ ಮಾನ್ಯತೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿ, ಈ ಸಂಬಂಧ ವರದಿ ನೀಡಲು ಸಮಿತಿ ರಚನೆ ಮಾಡಲಾಗಿತ್ತು.
ನಂತರ ಸಮಿತಿಯು ಸರಣಿ ಸಭೆಗಳನ್ನು ನಡೆಸಿ ಬಳಿಕ ನಾಡಧ್ವಜದ ವಿನ್ಯಾಸವನ್ನು ಅಂತಿಮಗೊಳಿಸಿತ್ತು. ಇದೀಗ ಈ ಸಂಬಂಧ ಸರಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಧ್ವಜದ ವಿನ್ಯಾಸ ಮತ್ತು ಧ್ವಜಕ್ಕೆ ಕಾನೂನಿನ ಮಾನ್ಯತೆ ನೀಡುವ ಕುರಿತು ವರದಿಯಲ್ಲಿ ಉಲ್ಲೇಖಗಳಿವೆ.
ಈ ಸಮಿತಿಯ ವರದಿಯ ಅನ್ವಯ ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ.