ಕರ್ನಾಟಕಕ್ಕೆ ಕಾಡಾಟ: ಅಕ್ಟೋಬರ್ ತಿಂಗಳಿನಲ್ಲಿ ಕೊರೊನಾ 3ನೇ ಅಲೆ ಆತಂಕ!
ಬೆಂಗಳೂರು, ಮೇ 2: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯು ಜನರಲ್ಲಿ ಈಗಾಗಲೇ ನಡುಕ ಹುಟ್ಟಿಸಿದೆ. ರಾಜ್ಯದಲ್ಲಿ ಪ್ರತಿನಿತ್ಯ 40,000ಕ್ಕೂ ಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ.
ಎರಡನೇ ಅಲೆಯನ್ನು ಎದುರಿಸುತ್ತಿರುವ ರಾಜ್ಯದಲ್ಲಿ 2021ರ ಅಕ್ಟೋಬರ್ ವೇಳೆಗೆ ಕೊರೊನಾವೈರಸ್ ಸೋಂಕಿನ 3ನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ತಾಂತ್ರಿಕ ಸಲಹಾ ಸಮಿತಿಯ ವಿಶ್ಲೇಷಕರ ತಂಡ ನೀಡಿರುವ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಪ್ರಮುಖ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಿಎಂ ಸಭೆ: ಪ್ರಮುಖಾಂಶಗಳು
ಕರ್ನಾಟಕದಲ್ಲಿ ಮೇ ತಿಂಗಳಿನಿಂದ ಜುಲೈ ತಿಂಗಳವರೆಗೂ ಕೊವಿಡ್-19 ಎರಡನೇ ಅಲೆಯು ಭೀಕರವಾಗಿರಲಿದೆ. ಇದಾದ ಬಳಿಕ ಸ್ವಲ್ಪ ಸಮಯದಲ್ಲೇ ಕೊರೊನಾವೈರಸ್ 3ನೇ ಅಲೆಯು ಅಕ್ಟೋಬರ್ ವೇಳೆಗೆ ರಾಜ್ಯದಲ್ಲಿ ಹರಡುವಿಕೆಯನ್ನು ಆರಂಭಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾವೈರಸ್ 3ನೇ ಅಲೆಯ ವೇಗ
ಯುರೋಪಿಯನ್ ರಾಷ್ಟ್ರಗಳಲ್ಲಿ ಕೊವಿಡ್-19 ಪರಿಸ್ಥಿತಿಯನ್ನು ಪರಿಗಣಿಸಿದಾಗ ರಾಜ್ಯದಲ್ಲೂ ಕೊರೊನಾವೈರಸ್ ಸೋಂಕಿನ ಮೂರನೇ ಅಲೆ ಖಂಡಿತಾಗಿಯೂ ಕಾಣಿಸಿಕೊಳ್ಳುತ್ತದೆ. ಈ ಅಲೆಯನ್ನು ನಿಭಾಯಿಸಲು ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳುವುದರ ನಡುವೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುದ್ಧವಾಗಿ ತೊಳೆಯುವುದು ಸೇರಿದಂತೆ ಕೊವಿಡ್-19 ಶಿಷ್ಟಾಚಾರ ಪಾಲನೆಗೆ ಆದ್ಯತೆ ನೀಡುವಂತೆ ತಜ್ಞರ ಸಲಹೆ ನೀಡಿದೆ.
ರಾಜ್ಯದಲ್ಲಿ ಒಂದೇ ದಿನ 40990 ಕೊವಿಡ್-19 ಪ್ರಕರಣ
ಕರ್ನಾಟಕದಲ್ಲಿ ಒಂದು ದಿನದಲ್ಲಿ 40990 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿನಿಂದ 271 ಮಂದಿ ಪ್ರಾಣ ಬಿಟ್ಟಿದ್ದು, ಇದೇ ಅವಧಿಯಲ್ಲಿ 18,341 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1564132 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಈವರೆಗೂ 11,24,909 ಸೋಂಕಿತರು ಗುಣಮುಖರಾಗಿದ್ದು, 15,794 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಉಳಿದಂತೆ 4,05,068 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಪರಿಸ್ಥಿತಿ
ಕರ್ನಾಟಕದಲ್ಲಿ ಪತ್ತೆಯಾದ ಒಟ್ಟು ಹೊಸ ಪ್ರಕರಣಗಳ ಪೈಕಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ಬೆಂಗಳೂರಿನಲ್ಲೇ ದೃಢಪಟ್ಟಿವೆ. ಒಂದು ದಿನದಲ್ಲಿ ಸಿಲಿಕಾನ್ ಸಿಟಿಯಲ್ಲೇ 19353 ಮಂದಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಮಹಾಮಾರಿಗೆ 162 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 6537ಕ್ಕೆ ಏರಿಕೆಯಾಗಿದೆ. 2,70,993 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.
Recommended Video
ಯಾವ ರಾಜ್ಯದಲ್ಲೂ ಕೊರೊನಾ ಏನೂ ಕಡಿಮೆಯಿಲ್ಲ!
ರಾಜ್ಯದಲ್ಲಿ ಒಟ್ಟು 40990 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 319, ಬಳ್ಳಾರಿ 1163, ಬೆಳಗಾವಿ 532, ಬೆಂಗಳೂರು ಗ್ರಾಮಾಂತರ 940, ಬೆಂಗಳೂರು 19353, ಬೀದರ್ 360, ಚಾಮರಾಜನಗರ 548, ಚಿಕ್ಕಬಳ್ಳಾಪುರ 820, ಚಿಕ್ಕಮಗಳೂರು 500, ಚಿತ್ರದುರ್ಗ 103, ದಕ್ಷಿಣ ಕನ್ನಡ 933, ದಾವಣಗೆರೆ 386, ಧಾರವಾಡ 540, ಗದಗ 205, ಹಾಸನ 790, ಹಾವೇರಿ 168, ಕಲಬುರಗಿ 1407, ಕೊಡಗು 590, ಕೋಲಾರ 440, ಕೊಪ್ಪಳ 1019, ಮಂಡ್ಯ 1235, ಮೈಸೂರು 2529, ರಾಯಚೂರು 601, ರಾಮನಗರ 577, ಶಿವಮೊಗ್ಗ 661, ತುಮಕೂರು 2308, ಉಡುಪಿ 670, ಉತ್ತರ ಕನ್ನಡ 687, ವಿಜಯಪುರ 340, ಯಾದಗಿರಿ 266 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.