ಅಬಕಾರಿ ಇಲಾಖೆಯಲ್ಲಿ ಶೀಘ್ರವೇ 2200 ಹುದ್ದೆ ಭರ್ತಿ
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಅಬಕಾರಿ ಗಾರ್ಡ್, ಇನ್ಸ್ ಪೆಕ್ಟರ್ ಸೇರಿದಂತೆ 2200 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಇಲಾಖೆ ಒಪ್ಪಿಗೆ ಕೊಟ್ಟಿದೆ ಎಂದು ಅವರು ತಿಳಿಸಿದರು.
ತಮ್ಮ ಇಲಾಖೆಗೆ ಈ ವರ್ಷ 12,600 ಕೋಟಿ ರೂ. ಆದಾಯ ಸಂಗ್ರಹ ಗುರಿ ನೀಡಲಾಗಿದೆ. ಈಗಾಗಲೇ 6000 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷ ಇಲಾಖೆ ವತಿಯಿಂದ 11,4೦೦ ಕೋಟಿ ರೂ. ಆದಾಯ ಸಂಗ್ರಹವಾಗಿತ್ತು ಎಂದು ಸಚಿವರು ಅಂಕಿ-ಅಂಶಗಳ ವಿವರ ನೀಡಿದರು.
ರಾಜ್ಯದಲ್ಲಿ ಹೊಸ ವೈನ್ ಶಾಪ್ ಮತ್ತು ಬಾರ್ ಗಳನ್ನು ತೆರೆಯಲು ಅನುಮತಿ ಕೊಡುತ್ತಿಲ್ಲ. 136 ತಾಲ್ಲೂಲಕುಗಳಲ್ಲೂ ವೈನ್ ಶಾಪ್ ತೆರೆಯಬೇಕು ಎಂಬ ಬೇಡಿಕೆ ಬಂದಿದೆ. ಕೆಲವು ಕಡೆ ವೈನ್ ಶಾಪ್ ಇಲ್ಲದ ಕಾರಣ ಅಕ್ರಮವಾಗಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ ಎಂದರು.
ವೈನ್ ಶಾಪ್ ಗಳಿಗೆ ಅನುಮತಿ ನೀಡುವ ಸಂಬಂಧ ಕೂಡಲೇ ಸರ್ವಪಕ್ಷ ಸಭೆ ಕರೆದು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಆನಂತರ ನಿರ್ಧಾರ ಮಾಡಲಾಗುವುದು. ತೀರಾ ಅಗತ್ಯವಿರುವ ಕಡೆ MSIL ವತಿಯಿಂದಲೇ ಮದ್ಯ ಮಾರಾಟ ಮಳಿಗೆ ಆರಂಭಿಸಲಾಗುವುದು ಎಂದು ಅಚರು ಹೇಳಿದರು.
ರಾಜ್ಯದಲ್ಲಿ 95ರಷ್ಟು ಕಳ್ಳಭಟ್ಟಿ ಹಾವಳಿ ನಿಂತು ಹೋಗಿದೆ. ಬೆಳಗಾವಿ, ಬಿಜಾಪುರ, ಗದಗ ಜಿಲ್ಲೆಯಲ್ಲಿ ಕಳ್ಳಭಟ್ಟಿ ವೃತ್ತಿಯಲ್ಲಿದ್ದ 2,000 ಕುಟುಂಗಳಿಗೆ ಹಸು, ಮನೆ, ಸ್ವಯಂ ಉದ್ಯೋಗಕ್ಕೆ ಸಾಲ ಕೊಡುವ ಮೂಲಕ ಅವರನ್ನು ಆ ವೃತ್ತಿಯಿಂದ ಹೊರಗೆ ತರಲಾಗಿದೆ ಎಂದು ಸಚಿವರು ತಿಳಿಸಿದರು.
ಅಬಕಾರಿ ಇಲಾಖೆ ಕಮಿಷನ್ ಅನ್ನು ಕಳೆದ ಸರ್ಕಾರ ಶೇ. 20ರಿಂದ 10ಕ್ಕೆ ಇಳಿಸಿದೆ. ಅದನ್ನು ಮತ್ತೆ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಇಂದು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.