ಥ್ಯಾಂಕ್ ಯು ಮಾಮ್ ಡ್ಯಾಡ್, ನೀವಿಂದು ಪ್ರಜಾಪ್ರಭುತ್ವವನ್ನು ಉಳಿಸಿದ್ದೀರಿ
ಬೆಂಗಳೂರು, ಮೇ 11 : "ನನ್ನ ತಾಯಿಯದು ಇದು 55ನೇ ವರ್ಷದ ಮತದಾನ. ಅವರು ತಮ್ಮಷ್ಟಕ್ಕೆ ತಾವು ನಡೆಯುವಂತಾಗಲು ಒಂದು ವಾರ ಮೊದಲೇ ಅವರಿಗೆ ಇಂಜೆಕ್ಷನ್ ಕೊಡಬೇಕಾಯಿತು, ಸಾಕಷ್ಟು ಮಾತ್ರೆಗಳನ್ನು ನುಂಗಿಸಬೇಕಾಯಿತು. ಅವರು ಮತದಾನ ಮಾಡಿ ಸಾಧಿಸಿ ತೋರಿಸಿದರು!"
ಒಬ್ಬ ವಯಸ್ಸಾಗಿರುವ ವ್ಯಕ್ತಿಯನ್ನು ಮತಗಟ್ಟೆಗೆ ತರಲು ಎಷ್ಟೊಂದು ಕಷ್ಟಪಡಬೇಕಾಗುತ್ತದೆ ಅಥವಾ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದಕ್ಕಿಂತ ಇಂಥ ಇಳಿ ವಯಸ್ಸಿನಲ್ಲಿಯೂ ಎಷ್ಟು ಉತ್ಸಾಹ ತುಂಬಿರುತ್ತದೆ ಎಂಬುದು ಕಿರಣ್ ಕುಮಾರ್ ಎಸ್ ಅವರ ಮಾತುಗಳಲ್ಲಿ ವೇದ್ಯವಾಗುತ್ತದೆ.
ಚಿತ್ರಸುದ್ದಿ: ಮತದಾನ ಹಬ್ಬದಲ್ಲಿ ವೋಟ್ ಮಾಡಿ ಸಂಭ್ರಮಿಸಿದವರು
ಮತ ಚಲಾವಣೆಯಲ್ಲಿ ಮುಗಿದ ನಂತರ ಲೆಕ್ಕಹಾಕಿ ನೋಡಿ ಬೇಕಿದ್ರೆ, ಹದಿನೆಂಟರಿಂದ ಇಪ್ಪತ್ತೈದು ವರ್ಷದೊಳಗಿನ ಹದಿಹರೆಯದ ವ್ಯಕ್ತಿಗಳಿಗಿಂತ ಅರವತ್ತು ದಾಟಿದ ವಯೋವೃದ್ಧ ಮತದಾರರ ಸಂಖ್ಯೆ ಹೆಚ್ಚಿಲ್ಲದಿದ್ದರೆ ಹೇಳಿ. ಇದು ಉತ್ಪ್ರೇಕ್ಷೆಯ ಮಾತಂತೆ ಕಂಡರೂ ನಿಜಾಂಶ ಸಾಕಷ್ಟಿದೆ.
ಅಂದುಕೊಂಡಷ್ಟು ಯುವಜನತೆ ಮತದಾನ ಮಾಡಲು ಬರುತ್ತಿಲ್ಲ. ಹಲವರಿಗೆ ಆಸಕ್ತಿಯಾಗಲಿ, ಚುನಾವಣೆಯ ಬಗ್ಗೆ ಕುತೂಹಲವಾಗಲಿ, ತಿಳಿವಳಿಕೆಯಾಗಲಿ ಇಲ್ಲದಿರುವುದೇ ಮತದಾನದ ಪ್ರಮಾಣ ಕಡಿಮೆಯಾಗಲು ಕಾರಣವೆ? ಅಥವಾ ಇಂದಿನ ಜಮಾನಾದ ಹುಡುಗ ಹುಡುಗಿಯರ ಕೇರ್ಲೆಸ್ ಮನೋಭಾವವೇ ಕಾರಣವೆ?
LIVE: ಕರ್ನಾಟಕ ಚುನಾವಣೆ: ಇದುವರೆಗೂ ಶೇ.56 ರಷ್ಟು ಮತದಾನ ದಾಖಲೆ
ನೂರಾ ಎಂಟು ವಯಸ್ಸಿನ ಸಿದ್ದಗಂಗಾ ಶ್ರೀಗಳು, ತೊಂಬತ್ತರ ಆಸುಪಾಸಿನಲ್ಲಿರುವ ಪೇಜಾವರ ಶ್ರೀಗಳು, ತೊಂಬತ್ತೇಳರ ಪ್ರಾಯದ ಪಾಟೀಲ ಪುಟ್ಟಪ್ಪ, ನೂರಾನಾಲ್ಕು ವಯಸ್ಸಿನ ಜಿ ವೆಂಕಟಸುಬ್ಬಯ್ಯ, ನೂರು ದಾಟಿರುವ ದೊರೆಸ್ವಾಮಿ ಉತ್ಸಾಹದಿಂದ ಮತ ಚಲಾಯಿಸಿರಬೇಕಾದರೆ ಇಂದಿನ ಯುವಪೀಳಿಗೆಗೆ ಏಕೆ ಸಾಧ್ಯವಾಗುತ್ತಿಲ್ಲ.
In Pics: ಕರ್ನಾಟಕದ ಭವ್ಯ ಭವಿತವ್ಯಕ್ಕಾಗಿ ಮತದಾನದ ಯಜ್ಞ
ಯುವಕ ಯುವತಿಯರನ್ನು ನಾಚಿಸುವಂತೆ ವಯೋವೃದ್ಧರು ಈ ಪ್ರಜಾಪ್ರಭುತ್ವದ ಉತ್ಸವದಲ್ಲಿ ಪಾಲ್ಗೊಂಡಿರುವ ಕಥೆಗಳನ್ನು ಕೇಳಿಯಾದರೂ ಅವರು ಮುಂದಿನ ಚುನಾವಣೆಗಳಲ್ಲಾದರೂ ಉತ್ಸಾಹದಿಂದ ಪಾಲ್ಗೊಳ್ಳಲಿ.
|
ನೆಹರೂರಿಂದ ಹಿಡಿದು ಮೋದಿಯವರೆಗೆ
ಕಿರಣ್ ಕುಮಾರ್ ಅವರ ತಾಯಿಯವರು ಸ್ವಾತಂತ್ರ್ಯದ ನಂತರ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಹಿಡಿದುಕೊಂಡು ಇಂದಿನ ಪ್ರಧಾನಿ ನರೇಂದ್ರ ಮೋದಿಯವರವರೆಗೆ ಎಲ್ಲ ಚುನಾವಣೆಗಳಲ್ಲಿಯೂ ಅವರು ಮತ ಚಲಾಯಿಸಿದ್ದಾರೆ, ಒಂದು ಚುನಾವಣೆ ಮಾತ್ರ ಬಿಟ್ಟು. ಇಂದಿನ ಯುವಕರಿಗೆ ಕಲಿಯಲು ಇದಕ್ಕಿಂತ ಇನ್ನೆಂಥ ಪಾಠ ಬೇಕು ಹೇಳಿ?
|
ತಂದೆಗೆ 96 ವರ್ಷ ವಯಸ್ಸು, ತಾಯಿಗೆ 88
ನನ್ನ ತಂದೆಗೆ 96 ವರ್ಷ ವಯಸ್ಸು, ತಾಯಿಗೆ 88 ವಯಸ್ಸು. ಅವರು ಯಾರಿಗೆ ಮತ ಹಾಕಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಆದರೆ ಅವರಿಬ್ಬರೂ ತಮ್ಮ ಅತ್ಯಮೂಲ್ಯವಾದ ಮತ ಚಲಾಯಿಸಿದ್ದಾರೆ. ಥ್ಯಾಂಕ್ ಯು ಡ್ಯಾಡ್, ಥ್ಯಾಂಕ್ ಯು ಮಾಮ್. ನೀವಿಂದು ಪ್ರಜಾಪ್ರಭುತ್ವವನ್ನು ಉಳಿಸಿದ್ದೀರಿ. ಎಂದು ಕೋಟೆಕರ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಇನ್ನೇನು ಹೇಳುವ ಅವಶ್ಯಕತೆಯಿದೆ?
|
ಯುವಕರು ನಾಚಿಕೆಯಿಂದ ತಲೆತಗ್ಗಿಸಬೇಕು
ಮೊದಲು ಒಂದು ಈ ಮಹಾನ್ ಚೇತನಕ್ಕೆ ಸಾಷ್ಟಾಂಗ ನಮಸ್ಕಾರಗಳು. ಅವರ ವ್ಯಕ್ತಿತ್ವವೇ ಅಂತಹುದು, ಮೇರು ಪರ್ವತದಂಥದ್ದು. ನಡೆದಾಡುವ ದೇವರೆಂದೇ ಖ್ಯಾತರಾಗಿರುವ ತುಮಕೂರಿನ ಸಿದ್ದಗಂಗಾ ಶ್ರೀಗಳು ತಮ್ಮ 108ನೇ ವಯಸ್ಸಿನಲ್ಲಿ ತಾವೇ ಸ್ವತಃ ಮತಗಟ್ಟೆಗೆ ಬಂದು ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಇಂದಿನ ಮತ ಚಲಾಯಿಸದ ಯುವಜನರು ಇವರನ್ನು ನೋಡಿ ನಾಚಿಕೆಯಿಂದ ತಲೆತಗ್ಗಿಸಬೇಕು ಎಂದು ಶಕುಂತಲಾ ಅಯ್ಯರ್ ಅವರು ಟ್ವೀಟ್ ಮಾಡಿದ್ದಾರೆ.
|
ಬಾಗಲಕೋಟೆಯಿಂದ ಬೆಂಗಳೂರಿನಲ್ಲಿ ಮತ
ಮತ್ತೊಬ್ಬ ಉತ್ಸಾಹಿಯೊಬ್ಬರು ಬಾಗಲಕೋಟೆಯಿಂದ ಬೆಂಗಳೂರಿನವರೆಗೆ 530 ಕಿ.ಮೀ. ಪ್ರಯಾಣ ಮಾಡಿ ಬೆಂಗಳೂರಿನಲ್ಲಿ ಬಂದು ಮತ ಚಲಾಯಿಸಿದ್ದಾರೆ. ಅವರು ಯಾವ ಪಕ್ಷಕ್ಕೆ ಮತ ಹಾಕಿದ್ದಾರೆ, ಅವರ ಉದ್ದೇಶವೇನು, ಅವರ ಬೇಡಿಕೆಗಳೇನು, ಅವರ ಆಶಯಗಳೇನು ಎಂಬುದು ಇಲ್ಲಿ ಮುಖ್ಯವಲ್ಲ. ಎಷ್ಟೇ ದೂರವಿದ್ದರೂ ಮತ ಚಲಾಯಿಸಬೇಕು ಎಂಬ ಹುಮ್ಮಸ್ಸಿದೆಯಲ್ಲ ಅದು ಇಂದಿನ ಯುವಜನತೆಯಲ್ಲಿ ತುಂಬಬೇಕು.