ಅತಂತ್ರ ವಿಧಾನಸಭೆಯಾದರೆ ಜೆಡಿಎಸ್ ಬೆಂಬಲ ಬಿಜೆಪಿಗೋ, ಕಾಂಗ್ರೆಸ್ ಗೋ?
Recommended Video
ಬೆಂಗಳೂರು, ಏಪ್ರಿಲ್ 25: ದಿನೇ ದಿನೇ ರಂಗೇರುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಕರ್ನಾತಕ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಚಾನೆಲ್ ಗಳು, ನ್ಯೂಸ್ ಏಜೆನ್ಸಿಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿವೆ. ಅವುಗಳಲ್ಲಿ ಬಹುಪಾಲು ಸಮೀಕ್ಷೆಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆಯೇ ಪಕ್ಕಾ ಎಂದು ಹೇಳಿವೆ.
ಕರ್ನಾಟಕದ ಜನಸಾಮಾನ್ಯನ ಮಾತುಗಳಲ್ಲಿ ಕೇಳುವುದಾದರೂ ಅಭಿಪ್ರಾಯ ಅದೇ. ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ. ಸಮ್ಮಿಶ್ರ ಸರ್ಕಾರವೇ ಗತಿ ಎಂಬುದು.
ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ: ಹೆಚ್ಚಿನ ವಿಭಾಗಗಳಲ್ಲಿ ಬಿಜೆಪಿ ಬಲವರ್ಧನೆ
ಅಕಸ್ಮಾತ್ ಇದು ಸತ್ಯೇ ಆಗಿ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆಯಾದರೆ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುವುದು ಸಹಜ. ಈಗಲೂ ಜೆಡಿಎಸ್ ಅದೇ ಹುಮ್ಮಸ್ಸಿನಲ್ಲಿದೆ. ಕಿಂಗ್ ಮೇಕರ್ ಜೆಡಿಎಸ್ ಅಂತಂತ್ರ ವಿಧಾನಸಭೆಯಾದರೆ ಬಿಜೆಪಿಗೆ ಬೆಂಬಲ ನೀಡುತ್ತದೋ, ಕಾಂಗ್ರೆಸ್ಸಿಗೋ ಎಂಬುದು ಈಗಿರುವ ಪ್ರಶ್ನೆ. ರಾಜಕೀಯ ತಜ್ಞ ಡಾ. ಸಂದೀಪ್ ಶಾಸ್ತ್ರಿ ಅವರ ಪ್ರಕಾರ ಅತಂತ್ರ ವಿಧಾನಸಭೆಯಾದರೆ ಏನಾದೀತು ಎಂಬ ವಿಶ್ಲೇಷಣೆ ಇಲ್ಲಿದೆ.
ಜೆಡಿಎಸ್ ನಿಲುವೇನು?
ಅತಂತ್ರ ವಿಧಾನಸಭೆಯಾದರೆ ಜೆಡಿಎಸ್ ನಿಲುವೇನು? ಅಂಥದೊಂದು ಪ್ರಶ್ನೆಗೆ ಉತ್ತರ ಸ್ವತಃ ಜೆಡಿಎಸ್ ನಾಯಕರಿಗೂ ಗೊತ್ತಿಲ್ಲ. ದೊಡ್ಡ ಗೌಡರ ಮನಸ್ಸಿನಲ್ಲಿ ಏನಿದೆ ಎಂಬುದು ಇಂದಿಗೂ ನಿಗೂಢವಾಗಿಯೇ ಇದೆ. ನಾವು ಬಿಜೆಪಿಗಾಗಲೀ, ಕಾಂಗ್ರೆಸ್ಸಿಗಾಗಲೀ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ಜೆಡಿಎಸ್ ನಾಯಕರು ಎಷ್ಟೇ ಬಾರಿ ಹೇಳಿದರೂ ಚುನಾವಣೆಯ ನಂತರದ ಚಿತ್ರಣ ಏನಾಗಲಿದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಬಿಜೆಪಿ ಜೊತೆಗಿನ ಸಮ್ಮಿಶ್ರ ಸರ್ಕಾರದ ಕತೆ ಏನಾಯತು ಎಂಬುದು ಕರ್ನಾಟಕದ ಜನರಿಗೆ ಇನ್ನೂ ಮರೆತಿಲ್ಲ. ಇತ್ತ ಸಿದ್ದರಾಮಯ್ಯಗೂ ದೇವೇಗೌಡ, ಕುಮಾರಸ್ವಾಮಿಗೂ ಎಣ್ಣೆ ಸೀಗೇಕಾಯಿ ಸಂಬಂಧ. ಹೀಗಿರುವಾಗ ಜೆಡಿಎಸ್ ಯಾರತ್ತ ಒಲವು ತೋರುತ್ತದೆ ಎಂಬುದು ನಿಗೂಢವಾಗಿಯೇ ಉಳಿದಿದೆ.
ಬಿಜೆಪಿಗೆ ಬೆಂಬಲ ನೀಡಿದರೆ ...
ಇತ್ತೀಚೆಗೆ ಹೊರಬಿದ್ದ ಲೋಕನೀತಿ ಮತ್ತು ಸಿಎಸ್ ಡಿಎಸ್ ಸಮೀಕ್ಷೆ ಬಿಜೆಪಿಗೆ ಬಹುಮತ ಬಾರದಿದ್ದರೂ ಕರ್ನಾಟಕದಲ್ಲಿ ಅತೀ ದೊಡ್ಡ ಪಕ್ಷವಾಗಿ ಬಿಜೆಪಿಯೇ ಹೊರಹೊಮ್ಮಲಿದೆ ಎಂದು ಹೇಳಿದೆ. ಹೀಗಿರುವಾಗ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡುತ್ತದೆಯೇ? 20:20 ಸರ್ಕಾರದ ಸಮಯದಲ್ಲಿ ಆದ ಮೋಸವನ್ನು ಬಿಜೆಪಿ ಮರೆತಿಲ್ಲ. ಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೂ ಮುಖ್ಯಮಂತ್ರಿ ಸ್ಥಾನವನ್ನು ಎಚ್ ಡಿ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಡಲು ಬಿಜೆಪಿ ಸುತಾರಾಂ ಸಿದ್ಧವಿಲ್ಲ. ಆದರೆ ಎಚ್ ಡಿ ರೇವಣ್ಣ ಉಪಮುಖ್ಯಮಂತ್ರಿಯಾಗಬೇಕಷ್ಟೇ. ಅದೂ ಸುಲಭವಿಲ್ಲ. ಈ ಎಲ್ಲವೂ ಗೊತ್ತೇ ಇರುವುದರಿಂದ ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳು ಕಡಿಮೆ.
ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ: ವಿಭಾಗವಾರು ಯಾರಿಗೆ ಹೆಚ್ಚು ಸ್ಥಾನ?
ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ?
ಅಕಸ್ಮಾತ್ ಕಾಂಗ್ರೆಸ್ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದೇ ಆದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಾರದು ಎಂಬ ಶರತ್ತಿನೊಂದಿಗೇ ಜೆಡಿಎಸ್ ಹೊಂದಾಣಿಕೆಗೆ ಮುಂದಾಗುತ್ತದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಸಹ ಸಿದ್ದರಾಮಯ್ಯ ನಾಯಕತ್ವಕ್ಕೆ ಈಗಾಗಲೇ ಪರೋಕ್ಷ ಬೆಂಬಲ ನೀಡಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಾರದು ಎಂದರೆ ಅದಕ್ಕೆ ಸಿದ್ದರಾಮಯ್ಯ ಮತ್ತು ಇನ್ನಿತರ ಬೆಂಬಲಿಗರು ವಿರೋಧ ವ್ಯಕ್ತಪಡಿಸುವುದು ಖಂದಿತ. ಅದೂ ಅಲ್ಲದೆ, ಜೆಡಿಎಸ್ ಅನ್ನು ಹತ್ತಿರ ಸೇರಿಸಿಕೊಳ್ಳಲು ಸಿದ್ದರಾಮಯ್ಯ ಮನಸ್ಸು ಮಾಡುವುದೇ ಕಷ್ಟದ ವಿಷಯ. ಆದ್ದರಿಂದ ಕಾಂಗ್ರೆಸ್ ಜೊತೆ ಮೈತ್ರಿಯ ಬಗ್ಗೆಯೂ ಗ್ಯಾರಂಟಿ ನೀಡುವಂತಿಲ್ಲ.
ಪಕ್ಷೇತರ ಅಭ್ಯರ್ಥಿಗಳೇ ಗತಿ?!
ಚುನಾವಣೆಯ ನಂತರ ಎಲ್ಲಿಲ್ಲದ 'ಬೆಲೆ' ಬಂದುಬಿಡುವುದು ಪಕ್ಷೇತರ ಅಭ್ಯರ್ಥಿಗಳಿಗೆ. ಆದ್ದರಿಂದ ಮ್ಯಾಜಿಕ್ ನಂಬರ್ ತಲುಪಲು ಮೂರ್ನಾಲ್ಕು ಸೀಟುಗಳಷ್ಟೇ ಅಗತ್ಯವಿದ್ದಲ್ಲಿ ಆಗ ಪಕ್ಷೇತರ ಅಭ್ಯರ್ಥಿಗಳ ಓಲೈಕೆಗೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪಕ್ಷ ಪ್ರಯತ್ನಿಸುತ್ತದೆ. ಈ ಎಲ್ಲಾ ಕಾರಣಗಳಿಂದಲೇ ಮೇ. 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಮಹತ್ವ ಪಡೆದಿದೆ. ಮೇ 15 ರಂದು ಹೊರಬೀಳಲಿರುವ ಫಲಿತಾಂಶ ರೋಚಕತೆ ಸೃಷ್ಟಿಸುವುದು ಖಂಡಿತ.