ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?
ಬೆಂಗಳೂರು, ಮೇ 19 : ಅತೀಹೆಚ್ಚು ಸ್ಥಾನಗಳನ್ನು ಕರ್ನಾಟಕದ ಜನರು ಗೆಲ್ಲಿಸಿಕೊಟ್ಟರೂ ಸರಕಾರ ಸ್ಥಾಪಿಸಲು ಬಹುಮತವಿಲ್ಲದೆ ರಾಜೀನಾಮೆ ನೀಡುವಂಥ ಪರಿಸ್ಥಿತಿ ಯಡಿಯೂರಪ್ಪನವರಿಗೆ ಬಂದಿದ್ದು ನಿಜಕ್ಕೂ ವಿಪರ್ಯಾಸ, ವ್ಯವಸ್ಥೆಯ ಅಟ್ಟಹಾಸ.
ಏನೇನೆಲ್ಲಾ ಸಾಹಸ ಮಾಡಿದರೂ ಬೇಕಾದ ಸಂಖ್ಯೆಯನ್ನು ಒಗ್ಗೂಡಿಸುವಲ್ಲಿ ವಿಫಲರಾದ ಯಡಿಯೂರಪ್ಪನವರು, ಮಾಡಬೇಕಾದ 1 ಗಂಟೆ ಭಾಷಣವನ್ನು ಮೊಟಕುಗೊಳಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬೇಸರದಿಂದಲೇ ಹೊರನಡೆದರು.
ವಿಶ್ವಾಸ ಮತ ಯಾಚಿಸದೆ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬಿಎಸ್ವೈ
ಒಂದು ಮಾತ್ರ ಸತ್ಯ, ಕರ್ನಾಟಕದ ಜನರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಯಲ್ಲಿ ವಿಶ್ವಾಸವಿಟ್ಟು ಜನಾದೇಶ ನೀಡಿರಲಿಲ್ಲ. ಬದಲಿಗೆ ಯಡಿಯೂರಪ್ಪನವರ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿದ್ದರು. ಆದರೆ, ಸಂಪೂರ್ಣ ಬಹುಮತ ಸಿಗದಿದ್ದುದು ಮಾತ್ರ ದುರ್ದೈವ.
ಯಡಿಯೂರಪ್ಪ ಪ್ರಮಾಣ ವಚನ : ಲಾಭವೂ ಇದೆ, ದೋಷವೂ ಇದೆ
ಆದರೆ, ಯಡಿಯೂರಪ್ಪನವರಿಗೆ ಮೂರೇ ದಿನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂಥ ಮತ್ತು ಬಿಜೆಪಿಗೆ ಬಹುಮತ ಬರದಿರುವಂಥ ಪರಿಸ್ಥಿತಿ ಬರಲು ಕಾರಣಗಳೇನು? ಇದಕ್ಕೆ ಯಡಿಯೂರಪ್ಪನವರೇ ಸ್ವತಃ ಕಾರಣರಾದರೆ, ಜನರೇ ಯಡಿಯೂರಪ್ಪನವರಿಗೆ ಕೈಕೊಟ್ಟರೆ? ಅಥವಾ ಪ್ರತಿಪಕ್ಷಗಳ ಹುನ್ನಾರವೇ ಕಾರಣವಾಯಿತೆ
ಯಡಿಯೂರಪ್ಪನವರು ಎಡವಿದ್ದು ಎಲ್ಲೆಲ್ಲಿ?
ಬಹುಮತಕ್ಕೆ ವಾಮಮಾರ್ಗ ಹಿಡಿದಿದ್ದು
ವಿಶ್ವಾಸಮತ ಯಾಚಿಸುವ ಅಗತ್ಯ ಕಂಡುಬಂದಾಗ, ಬೇಕಾದ ಸೀಟುಗಳನ್ನು ಗಳಿಸಲು ವಾಮಮಾರ್ಗಗಳನ್ನು ಹಿಡಿಯದೆ, ಭಾವನಾತ್ಮಕವಾಗಿ ತಮಗೆ ಬೆಂಬಲ ನೀಡಬಹುದಾದ ವ್ಯಕ್ತಿಗಳನ್ನು ಸೆಳೆಯಲು ಯತ್ನಿಸಿದ್ದರೆ ಯಡಿಯೂರಪ್ಪನವರು ಸ್ವಲ್ಪಮಟ್ಟಿಗಾದರೂ ಯಶಸ್ವಿಗುತ್ತಿದ್ದರೇನೋ. ಆದರೆ, ಅವರು ರಾಜ್ಯದ ಜನರೇ ಅಸಹ್ಯ ಪಟ್ಟುಕೊಳ್ಳುವಂತೆ ನೇರವಾಗಿ ಕುದುರೆ ವ್ಯಾಪಾರಕ್ಕೆ ಇಳಿದರು. ಅದರಲ್ಲಿ ಭಾರೀ ವೈಫಲ್ಯತೆಯನ್ನೂ ಅನುಭವಿಸಿದರು. ಇದರಿಂದ ಯಡಿಯುರಪ್ಪ ಮತ್ತು ಬಿಜೆಪಿಯ ಇಮೇಜಿಗೆ ಕೂಡ ಧಕ್ಕೆ ಬಂದಿದೆ.
ತಟಸ್ಥರಾಗಿ ಉಳಿಯದೆ ಸರಕಾರ ರಚಿಸಲು ಹೊರಟಿದ್ದು
ತಮಗೆ ಬಹುಮತ ಸಿಕ್ಕಿಲ್ಲ, ಬಹುಮತಕ್ಕೆ ಬೇಕಾದ ಸಂಖ್ಯೆಗಳನ್ನು ಸೇರಿಸುವ ಸಾಧ್ಯತೆಯೂ ಇಲ್ಲವೆಂದು ತಿಳಿದುಬಂದಾಗ, ತಟಸ್ಥವಾಗಿ ಉಳಿದುಕೊಂಡು, ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಯಡಿಯೂರಪ್ಪನವರು ಸರಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದರೆ ರಾಜ್ಯದ ಜನರ ದೃಷ್ಟಿಯಲ್ಲಿ ದೊಡ್ಡವರಾಗುತ್ತಿದ್ದರು. ಅವರ ಮೇಲಿನ ಪ್ರೀತಿ ಕೂಡ ಇನ್ನೂ ಬೆಟ್ಟದಷ್ಟು ಬೆಳೆಯುತ್ತಿತ್ತು. ಅದನ್ನು ಮಾಡದೆ, ಹೇಗಾದರೂ ಮಾಡಿ ಸರಕಾರ ಮಾಡೇ ತೀರುತ್ತೇನೆ, ಇಲ್ಲದಿದ್ದರೆ ಈ ಅವಕಾಶ ಮತ್ತೆ ಸಿಗುವುದಿಲ್ಲವೆಂದು ದುಡುಕಿ ತಾವೇ ಸರಕಾರ ರಚಿಸುತ್ತೇವೆಂದು ಯಡಿಯೂರಪ್ಪ ಹೊರಟರು.
ಕಾನೂನು ಸಮರಕ್ಕೆ ಅವಕಾಶ ಮಾಡಿಕೊಟ್ಟಿದ್ದು
ಮತ್ತೊಂದು ದೊಡ್ಡ ತಪ್ಪೆಂದರೆ, ರಾಜ್ಯಪಾಲರನ್ನು ಸಂಪರ್ಕಿಸಿ ಬಹುಮತದ ಸಂಖ್ಯೆಗಳಿಲ್ಲದಿದ್ದರೂ ತಾವೇ ಸರಕಾರ ರಚಿಸುತ್ತೇವೆಂದು ಹೊರಟು, ಕಾನೂನು ಸಮರಕ್ಕೆ ಅವಕಾಶ ಮಾಡಿಕೊಟ್ಟಿದ್ದು ಯಡಿಯೂರಪ್ಪನವರಿಗೆ ಭಾರೀ ಹಿನ್ನಡೆಯಾಯಿತು. ಯಡಿಯೂರಪ್ಪನವರ ಈ ನಡೆ ಇಡೀ ದೇಶದಲ್ಲಿ ಪ್ರತಿಧ್ವನಿಸುವಂತಾಗಿ, ಇತರ ರಾಜ್ಯಗಳಲ್ಲಿಯೂ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ತಿರುಗಿಬೀಳುವಂತಾಯಿತು. ಇದು ಲೋಕಸಭೆ ಚುನಾವಣೆಯ ಮೇಲೆ ಹೊಡೆತ ಕೊಟ್ಟರೂ ಅಚ್ಚರಿಯಿಲ್ಲ.
ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಬಿಎಸ್ವೈ
ಮೊದಲನೆಯದಾಗಿ, ಪರಿವರ್ತನಾ ಯಾತ್ರೆಯನ್ನು ಬೆಂಗಳೂರಿನಿಂದ ಆರಂಭಿಸಿದಾಗ, ಎಲ್ಲ ನಾಯಕರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ತಾನೊಬ್ಬನೇ ಜೈಸುತ್ತೇನೆ ಎಂದು ಯಡಿಯೂರಪ್ಪ ಹೊರಟರು. ಯಾತ್ರೆಯಲ್ಲಿ ಎಸ್ಎಂ ಕೃಷ್ಣರಂಥ ಹಿರಿಯನ್ನು ಹೊರಗಿಡಲಾಗಿತ್ತು. ಅವರನ್ನು ಯಾವುದೇ ಸಂದರ್ಭದಲ್ಲಿ, ಪ್ರಚಾರದಲ್ಲಾಗಲಿ, ಚಿಂತನೆಯಲ್ಲಾಗಲಿ ಒಳಗೊಳ್ಳಿಸದಿರುವುದು ಯಡಿಯೂರಪ್ಪನವರಿಗೆ ಮುಳುವಾಗಿದೆ. ಪರಿವರ್ತನಾ ಯಾತ್ರೆಗೆ ಯಡಿಯೂರಪ್ಪನವರಿಗೆ ಅದ್ಭುತ ಎನ್ನಿಸುವಂಥ ಸ್ಪಂದನೆಯೂ ಸಿಕ್ಕಿದ್ದಿಲ್ಲ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಿದ ಬಿಎಸ್ವೈ
ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಇತರ ನಾಯಕರ ಸಲಹೆಗಳಿಗೆ, ಆಯ್ಕೆಗಳಿಗೆ ಮನ್ನಣೆ ನೀಡದೆ ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಮಾತ್ರವಲ್ಲ, ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ದುರ್ಬಲ ಅಭ್ಯರ್ಥಿಗಳನ್ನು ಹಾಕುವಂತೆ ಕುಮ್ಮಕ್ಕು ನೀಡಿದರು ಎಂಬುದು ಅವರ ಮೇಲಿರುವ ಗುರುತರ ಆರೋಪ. ಇದರಿಂದಾಗಿ ಹಲವಾರು ಕ್ಷೇತ್ರಗಳಲ್ಲಿ ಗೆಲ್ಲಬಹುದಾದರೂ ಸೋತರು. ಹಲವಾರು ಕಳಂಕಿತರಿಗೆ ಟಿಕೆಟ್ ಕೊಡಲಾಯಿತು. ಇದರ ಪರಿಣಾಮವೇ ಬಹುಮತದಿಂದ ಹಿಂದೆ ಬೀಳುವಂತಾಗಿದ್ದು.
ಕೈಕೊಟ್ಟ ಬೆಂಗಳೂರಿನ ಮತದಾರರು
ಬಿಜೆಪಿಗೆ ಭಾರೀ ಹೊಡೆತ ಬಿದ್ದಿದ್ದು ಬೆಂಗಳೂರು ವಲಯದ ಕ್ಷೇತ್ರಗಳಲ್ಲಿ. ಇಲ್ಲಿ ಬೆಂಗಳೂರು ಉಳಿಸಿ ಎಂದು ಕೆಲ ಬಡಾವಣೆಗಳಲ್ಲಿ ಪಾದಯಾತ್ರೆ ಮಾಡಲಾಯಿತಾದರೂ ಅದರಲ್ಲಿ ಯಡಿಯೂರಪ್ಪ ಸಕ್ರಿಯರಾಗಿ ಭಾಗವಹಿಸಲಿಲ್ಲ. ಕೆಲ ಕ್ಷೇತ್ರಗಳಲ್ಲಿ ವಲಸಿಗರಿಗೆ ಟಿಕೆಟ್ ನೀಡಲಾಯಿತು, ಕೆಲ ಕ್ಷೇತ್ರಗಳಲ್ಲಿ ಯಾವುದೇ ಸಿದ್ಧತೆಯಿಲ್ಲದೆ ಕಡೆ ಘಳಿಗೆಯಲ್ಲಿ ಆ ಕ್ಷೇತ್ರಕ್ಕೆ ಸಂಬಂಧಿಸಿರದ ಅಭ್ಯರ್ಥಿಯನ್ನು ನಿಲ್ಲಿಸಲಾಯಿತು. ಇದಕ್ಕೆ ಕಳಸವಿಟ್ಟಂತೆ, ಬೆಂಗಳೂರಿನ ಜನತೆ ಮತ ಹಾಕುವಲ್ಲಿ ನಿರ್ಲಕ್ಷ್ಯ ತೋರಿದ್ದು ಬಿಜೆಪಿ ಮುಳುವಾಯಿತು. ಬೆಂಗಳೂರು ವಲಯದಲ್ಲಿ ಗೆದ್ದಿದ್ದು ಬರೀ 12 ಕ್ಷೇತ್ರಗಳನ್ನು ಮಾತ್ರ.