'ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಕಾರಣ, ಅವರಿದ್ದರೆ ಪಕ್ಷಕ್ಕೆ ಗೆಲುವಿಲ್ಲ'
ಬೆಂಗಳೂರು, ಮೇ 16 : 'ಪಕ್ಷಗಳು ಒಂದಾಗಿ ಸರ್ಕಾರ ರಚನೆ ಮಾಡಬೇಕು. ಆದರೆ, ಈ ಮನುಷ್ಯ ಸಿದ್ದರಾಮಯ್ಯ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಬಿಡುವುದಿಲ್ಲ. ಹೀನಾಯವಾಗಿ ಚಾಮುಂಡೇಶ್ವರಿ ಸೋತು ಬಂದಿದ್ದಾನೆ. ಬಾದಾಮಿಯಲ್ಲಿ ಕೆಲವೇ ಅಂತರಗಳಲ್ಲಿ ಗೆದ್ದು ಬಂದಿದ್ದಾನೆ' ಎಂದು ಕೆ.ಬಿ.ಕೋಳಿವಾಡ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬುಧವಾರ ಬೆಂಗಳೂರಿನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ನಿವಾಸದಲ್ಲಿ ಕೆ.ಬಿ.ಕೋಳಿವಾಡ ಅವರು ಪತ್ರಿಕಾಗೋಷ್ಠಿ ನಡೆಸಿದರು. 'ಸಿದ್ದರಾಮಯ್ಯ ಅವರಿಗೆ ಯಾವುದೇ ಸ್ಥಾನ ಕೊಡಬೇಡಿ ಎಂದು ನಾನೇ ಖುದ್ದಾಗಿ ರಾಹುಲ್ ಗಾಂಧಿ ಅವರಿಗೆ ಹೇಳುವೆ' ಎಂದರು.
'ಆಪರೇಷನ್ ಕಮಲ' ಮಾಡಿದ್ರೆ ತಿರುಗೇಟು : ಕುಮಾರಸ್ವಾಮಿ ಎಚ್ಚರಿಕೆ
'ಲಿಂಗಾಯತ ಮತ್ತು ವೀರಶೈವ ಧರ್ಮವನ್ನು ಬೇರೆ-ಬೇರೆ ಮಾಡಿದರು. ಈಗ ಅದರ ಶಾಪ ಅನುಭವಿಸುತ್ತಿದ್ದಾನೆ. ಲಿಂಗಾಯತ ಧರ್ಮ ಪ್ರತ್ಯೇಕ ಮಾಡಬಾರದಿತ್ತು. ಪಕ್ಷದ ಸೋಲಿಗೆ ಇದು ಕೂಡ ಮುಖ್ಯವಾದ ಕಾರಣ. ಇನ್ನಾದರೂ ಸಿದ್ದರಾಮಯ್ಯ ಅವರು ಬುದ್ಧಿ ಕಲಿಯಲಿ' ಎಂದು ಹೇಳಿದರು.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ಕೆ.ಬಿ.ಕೋಳಿವಾಡ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. 59,572 ಮತಗಳನ್ನು ಪಡೆದು ಕೆಪಿಜೆಪಿಯ ಅಭ್ಯರ್ಥಿ ಆರ್.ಶಂಕರ್ ವಿರುದ್ಧ ಸೋಲು ಕಂಡಿದ್ದಾರೆ.
'ಪಕ್ಷದ ಸ್ಥಿತಿ ನಿಜಕ್ಕೂ ಬೇಸರದ ಸಂಗತಿ'
'ನಾನು ಅಪ್ಪಟ ಕಾಂಗ್ರೆಸಿಗ, ಅಧಿಕಾರದಲ್ಲಿದ್ದಾಗ ಸ್ಪೀಕರ್ ರೀತಿ ನಡೆದುಕೊಂಡಿದ್ದೇನೆ. ಕಾಂಗ್ರೆಸ್ ಈ ಸ್ಥಿತಿಯಲ್ಲಿರುವುದು ನಿಜಕ್ಕೂ ಬೇಸರದ ಸಂಗತಿ. ಕಾಂಗ್ರೆಸ್ ಈ ಪರಿಸ್ಥಿತಿಗೆ ಬರಲು ಸಿದ್ದರಾಮಯ್ಯ ಅವರೇ ಮುಖ್ಯ ಕಾರಣ. ನಾನು ಕಾಂಗ್ರೆಸ್ ಪರವಾದ ಅನೇಕ ನಿರ್ಣಯಗಳನ್ನು ತೆಗೆದುಕೊಂಡಿದ್ದೇನೆ. ಸಿದ್ದರಾಮಯ್ಯ ಅವನದ್ದು ಕಾಂಗ್ರೆಸ್ ರಕ್ತ ಅಲ್ಲ. ನನ್ನ ರಕ್ತ ಕಾಂಗ್ರೆಸ್ ನದ್ದು' ಎಂದು ಹೇಳಿದರು.
ಪಕ್ಷ ಹೀನಾಯ ಸೋಲು ಅನುಭವಿಸಿದೆ
'ಕಳೆದ ಚುನಾವಣೆಯಲ್ಲಿ ಪರಮೇಶ್ವರ ಅವರ ಸೋಲಿಗೂ ಸಿದ್ದರಾಮಯ್ಯ ಅವರೇ ಮುಖ್ಯ ಕಾರಣ. ನಾನು ರಾಹುಲ್ ಗಾಂಧಿ ಜೊತೆ ಮಾತನಾಡಿದಕ್ಕೆ ಟಿಕೆಟ್ ಸಿಕ್ಕಿತು. ಹಲವು ನಾಯಕರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯನೇ ಮುಖ್ಯ ಕಾರಣ. ಅವನು ಗೆಲ್ಲೋಕೆ ಏನೇನ್ ಬೇಕೋ ಅದನ್ನೆಲ್ಲ ಮಾಡಿಕೊಂಡ. ಈಗ ಪಕ್ಷ ಹೀನಾಯ ಸೋಲನ್ನು ಅನುಭವಿಸಿದೆ. ಇಂತಹ ಮನುಷ್ಯನಿಂದ ಕಾಂಗ್ರೆಸ್ ಗೆ ಉಪಯೋಗ ಇಲ್ಲ' ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅಧ್ಯಕ್ಷರಾಗುವುದು ಬೇಡ
'ಕೆಪಿಸಿಸಿ ಅಧ್ಯಕ್ಷರನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡುವುದು ಬೇಡ. ಪರಮೇಶ್ವರ ಅವರು ಅಥವ ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ. ಸಿದ್ದರಾಮಯ್ಯ ಅವರಿಗೆ ಯಾವುದೇ ಹುದ್ದೆ ನೀಡಬೇಡಿ ಎಂದು ನಾನು ಖುದ್ದಾಗಿ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡುವೆ' ಎಂದು ಕೆ.ಬಿ.ಕೋಳಿವಾಡ ಹೇಳಿದರು.
ಜಾತಿ, ಅಧಿಕಾರ ಬೇಕು
'ಸಿದ್ದರಾಮಯ್ಯ ಅವರಿಗೆ ಜಾತಿ ಮತ್ತು ಅಧಿಕಾರ ಮಾತ್ರ ಬೇಕು. ಜಾತಿ ಬಿಟ್ಟರೇ ಸಿದ್ದರಾಮಯ್ಯನಿಗೆ ಏನೂ ಗೊತ್ತಿಲ್ಲ. ನನ್ನ ಎದುರಿಗೆ ಸಿದ್ದರಾಮಯ್ಯ ಚೋಟ. ನಾನಿದ್ರೆ ಮಾತ್ರ ಕಾಂಗ್ರೆಸ್ ಅಂತ ಸಿದ್ದರಾಮಯ್ಯ ಬೀಗುತ್ತಿದ್ದಾನೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ ಮುಂದೆ ರಾಹುಲ್ ಪ್ರಧಾನಿ ಆಗಬೇಕು ಕಾಂಗ್ರೆಸ್ ಬಹುಮತ ಪಡೆಯಬೇಕು. ಸಿದ್ದರಾಮಯ್ಯ ಅವರಿಂದ ಪಕ್ಷಕ್ಕೆ ಏನೂ ಲಾಭವಿಲ್ಲ' ಎಂದರು.
ನಾಚಿಕೆ ಆಗಬೇಕು ಸಿದ್ದರಾಮಯ್ಯಗೆ
'ಜನರು ಏನು ತೀರ್ಮಾನ ಮಾಡಿದರು ಎಂದು ನೀವೆ ನೋಡಿದಿರಲ್ಲ. ಸಿದ್ದರಾಮಯ್ಯ ಮುಂದೆ ಅಧಿಕಾರಕ್ಕೆ ಬರೋದೆ ಇಲ್ಲ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಿದ್ದರಾಮಯ್ಯ ಬಿಡುವುದಿಲ್ಲ. ಸಿದ್ದರಾಮಯ್ಯ ಗೆ ಅಧಿಕಾರದ ಲಾಲಾಸೇ ತುಂಬಾನೇ ಇದೆ' ಎಂದು ಆರೋಪಿಸಿದರು.
ಶಂಕರ್ ಜೊತೆ ಮಾತನಾಡಿದ್ದೇನೆ
'ನಾನು ಸೋತಿದ ಹಿನ್ನಲೆಯಲ್ಲಿ ಈ ಮಾತುಗಳನ್ನು ಹೇಳುತ್ತಿಲ್ಲ. ಬಹಳ ನೋವಿನಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ನಾನು 5 ಸಾರಿ ಸೋತಿದ್ದೇನೆ. 5 ಭಾರಿ ಗೆದ್ದಿದ್ದೇನೆ. ಪಕ್ಷ ಬಹಳ ಮುಖ್ಯವಾಗುತ್ತದೆ. ನನಗಿಂತ 13 ವರ್ಷ ಸಿದ್ದರಾಮಯ್ಯ ಬಚ್ಚ. ನಾನು ಸ್ಪೀಕರ್ ಆಗಿದ್ದಾಗ ಸಾಕಷ್ಟು ಸಲ ಕಾಂಗ್ರೆಸ್ ಪರ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ನಿಂದ ಕಾಂಗ್ರೆಸ್ ಗೆ ಅನುಕೂಲ ಆಗೊಲ್ಲ. ನಾನು ಕಾಂಗ್ರೆಸ್ ಪಕ್ಷವನ್ನು ಬಿಡುವುದು ಇಲ್ಲ' ಎಂದು ಸ್ಪಷ್ಟಪಡಿಸಿದರು.