ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ ನಿಂದ ಬಿಡುಗಡೆಯಾಗಲಿದೆ ವಿಶಿಷ್ಟ ಪ್ರಣಾಳಿಕೆ
ಬೆಂಗಳೂರು, ಫೆಬ್ರವರಿ 23: ಶತಾಯಗತಾಯ ಕರ್ನಾಟಕವನ್ನು ಕಳೆದುಕೊಳ್ಳಲು ಸಿದ್ದವಿಲ್ಲದ ಕಾಂಗ್ರೆಸ್ ಚುನಾವಣೆ ಎದುರಿಸಲು ಹಿಂದೆಂದೂ ಇಲ್ಲದ ಆಕ್ರಮಣಕಾರಿ ನೀತಿ, ತಂತ್ರಗಳ ಮೊರೆ ಹೋಗಿರುವುದು ಹಳೆ ವಿಚಾರ. ಇದೀಗ ಪ್ರಣಾಳಿಕೆ ವಿಚಾರದಲ್ಲೂ ಸೃಜನಶೀಲತೆ ಮೆರೆಯಲು ಹೊರಟಿದೆ.
ಮಾರ್ಚ್ 10 ಮತ್ತು 15ರ ನಡುವೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಲಿದ್ದಾರೆ. ಈ ಪ್ರಣಾಳಿಕೆ ಮೂರು ಬೇರೆ ಬೇರೆ ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಜಿಲ್ಲೆಗೊಂದು ಪ್ರಣಾಳಿಕೆ ಬಿಡುಗಡೆ ಮಾಡಲಿದೆ ಕಾಂಗ್ರೆಸ್!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಮೂರು ಪ್ರಣಾಳಿಕೆಗಳಲ್ಲಿ 2 ಪ್ರಣಾಳಿಕೆಗಳು ಪ್ರದೇಶಗಳನ್ನು ಮತ್ತು ಜಿಲ್ಲೆಗಳನ್ನು ಕೇಂದ್ರೀಕರಿಸಿ ತಯಾರಿಸಲಾಗಿರುತ್ತದೆ. ಮೂರನೇ ಪ್ರಣಾಳಿಕೆ ರಾಜ್ಯಮಟ್ಟದ್ದಾಗಿರುತ್ತದೆ ಎಂದು ಅವರು ವಿವರ ನೀಡಿದರು.
ರಾಹುಲ್ ಗಾಂಧಿಯವರು ಬೆಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ ರಾಜ್ಯಾದ್ಯಂತ 30 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗುತ್ತದೆ," ಎಂದು ಮೊಯ್ಲಿ ತಮ್ಮ ತಂತ್ರ ವಿವರಿಸಿದರು.
ಟ್ವಿಟ್ಟರ್ ಮೂಲಕ ಸರ್ಕಾರದ ಸಾಧನೆಗಳನ್ನು ಹಂಚಿಕೊಂಡ ಸಿಎಂ
ಕರ್ನಾಟಕದಲ್ಲಿ ಆಡಳಿತದಲ್ಲಿರುವ ರಾಜ್ಯ ಸರಕಾರ 2013ರಲ್ಲಿ ನೀಡಿದ ಶೇಕಡಾ 98 ಭರವಸೆಗಳನ್ನು ಇಡೇರಿಸಿದೆ. 2013ರಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯವನ್ನು ಹಸಿವು ಮತ್ತು ಬಾಯಾರಿಕೆಯಿಂದ ಮುಕ್ತ ರಾಜ್ಯವನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.
ಇನ್ನು ಸರಕಾರದ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆಗೆ ಉಪ ಸಮಿತಿ ನೇಮಿಸಲಾಗಿದೆ. ನಮ್ಮ ಬಳಿಯಲ್ಲಿ ಎಲ್ಲಾ ಲೆಕ್ಕಗಳಿವೆ ಎಂದು ಅವರು ಹೇಳಿದ್ದಾರೆ.