ಕರ್ನಾಟಕದಲ್ಲಿ ಬಿಜೆಪಿಯ ಸೋಲನ್ನು ಆಶಿಸುತ್ತಿವೆ ನೆರೆ ರಾಜ್ಯಗಳು, ಏಕೆ?
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದೆ. ಬಹುತೇಕ ದೇಶದೆಲ್ಲೆಡೆ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಫಲಿತಾಂಶ ಅತ್ಯಂತ ಮುಖ್ಯವಾದುದು. ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲು ತೆಗೆಯಲು ಬಿಜೆಪಿಗೂ ಈ ಫಲಿತಾಂಶ ಅತ್ಯಂತ ಮಹತ್ವದ್ದು.
ಈ ಚುನಾವಣಾ ಫಲಿತಾಂಶ ಕೇವಲ ಕಾಂಗ್ರೆಸ್, ಬಿಜಪಿ ಮತ್ತು ನಮ್ಮ ರಾಜ್ಯಕ್ಕಷ್ಟೆ ಅಲ್ಲ ನೆರೆ ರಾಜ್ಯಗಳಿಗೂ ಅತ್ಯಂತ ಮಹತ್ವದ್ದು, ಅದರಲ್ಲಿಯೂ ಇಲ್ಲಿ ಬಿಜೆಪಿ ಸೋಲಬೇಕೆಂಬುದನ್ನು ನೆರೆ ರಾಜ್ಯಗಳು ಬಹಳವಾಗಿ ಬಯಸುತ್ತಿವೆ. ಅವುಗಳಲ್ಲಿ ಪ್ರಮುಖ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು.
ಚುನಾವಣಾ ಪೂರ್ವ -ಉತ್ತರ ಸಮೀಕ್ಷೆಗಳ ಸರಾಸರಿ : ಅತಂತ್ರ ವಿಧಾನಸಭೆ
ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಸ್ವಾಭಾವಿಕವಾಗಿ ಅದರ ರಾಜಕೀಯ ಹಾಗೂ ಆಡಳಿತ, ವ್ಯಾವಹಾರಿಕ ಪರಿಣಾಮಗಳು ನೆರೆ ರಾಜ್ಯಗಳ ಆಗಿಯೇ ಆಗುತ್ತದೆ. ಹಾಗಾಗಿ ತಮಗೆ ಅನುಕೂಲಕರ ಸರ್ಕಾರವೇ ನೆರೆಯಲ್ಲೂ ಅಧಿಕಾರಕ್ಕೆ ಬರಲಿ ಎಂದು ಎಲ್ಲ ರಾಜ್ಯಗಳು ಆಶಿಸುವುದು ಮಾಮೂಲು, ಕರ್ನಾಟಕದ ಯಾವ ಯಾವ ನೆರೆ ನೆರೆ ರಾಜ್ಯಗಳು ಕರ್ನಾಟಕದಲ್ಲಿ ಯಾವ ಪಕ್ಷ ಗೆಲ್ಲಲೆಂದು ಆಶಿಸುತ್ತಿವೆ ನೋಡೋಣ ಬನ್ನಿ.
ಚಂದ್ರಬಾಬು ನಾಯ್ಡುಗೆ ಬಿಜೆಪಿ ಸೋಲಬೇಕು
ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ (ತೆಲುಗುದೇಶಂ ಪಾರ್ಟಿ) ಇತ್ತೀಚೆಗಷ್ಟೆ ಎನ್ಡಿಎ ಮೈತ್ರಿಕೂಡದಿಂದ ಹೊರಬಂದಿದೆ. ಹಾಗಾಗಿ ಕರ್ನಾಟಕದಲ್ಲಿ ಬಿಜೆಪಿ ಗೆದ್ದಲ್ಲಿ ರಜ್ಯದೊಂದಿಗೆ ನೀರು ಸೇರಿದಂತೆ ಹಲವು ರಾಜತಾಂತ್ರಿಕ ಹಾಗೂ ವ್ಯಾವಹಾರಿಕ ಸಂಬಂಧಗಳನ್ನು ಇಟ್ಟುಕೊಂಡಿರುವ ಆಂಧ್ರಕ್ಕೆ ಸಮಸ್ಯೆ ಆಗಲಿದೆ ಎಂಬುದು ಟಿಡಿಪಿ ಲೆಕ್ಕಾಚಾರ.
ದಕ್ಷಿಣದ ಬಾಗಿಲು ಬಿಜೆಪಿಗೆ ತೆತೆಯಬಾರದು
ಅಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಕ್ಷಕ್ಕೆ ದಕ್ಷಿಣ ಭಾರತದ ಬಾಗಿಲು ತೆರೆದಂತೆ ಆಗುತ್ತದೆ, ದಕ್ಷಿಣ ಭಾರತದಲ್ಲೂ ಬಿಜೆಪಿ ತನ್ನ ಪ್ರಭಾವ ವಿಸ್ತರಿಸಲು ಇದು ಅವಕಾಶ ಮಾಡಿಕೊಡುತ್ತದೆ ಇದರಿಂದ ಟಿಡಿಪಿ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳಿಗೆ ಹೊಡೆತ ಬಿದ್ದಂತಾಗುತ್ತದೆ ಎಂಬುದು ಕೂಡಾ ಟಿಡಿಪಿಯ ಲೆಕ್ಕಾಚಾರವಾಗಿದೆ.
ನಾಳೆ ಫಲಿತಾಂಶ.. ಈಗಲೇ ಶುರುವಾಗಿದೆ ರಾಜಕೀಯ ತಂತ್ರ!
ಕೆಸಿಆರ್ ಬೆಂಬಲ ಜೆಡಿಎಸ್ಗೆ
ಹೊಸ ರಾಜ್ಯ ತೆಲಂಗಾಣಕ್ಕೂ ಬಿಜಪಿಯ ಸೋಲು ಅವಶ್ಯಕವಾಗಿದೆ. ಆದರೆ ಅದಕ್ಕೆ ಜೆಡಿಎಸ್ ಅಧಿಕಾರ ಹಿಡಿದರೆ ಹೆಚ್ಚು ಸಂತೋಶವಾಗುತ್ತದೆ. ಸ್ವತಃ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ (ಕೆಸಿಆರ್) ಅವರು ಚುನಾವಣೆಗೆ ಕೆಲವು ದಿನ ಇದ್ದಂತೆ ದೇವೇಗೌಡ ಅವರನ್ನು ಭೇಟಿ ಆಗಿ ಜೆಡಿಎಸ್ಗೆ ಬೆಂಬಲ ಸೂಚಿಸಿದ್ದರು.
ಬಿಜೆಪಿ ಗೆದ್ದರೆ ತೃತೀಯ ರಂಗಕ್ಕೆ ಪೆಟ್ಟು
ಕರ್ನಾಟಕದಲ್ಲಿ ಬಿಜೆಪಿ ಗೆದ್ದರೆ ಕೆಸಿಆರ್ ಕಟ್ಟುತ್ತಿರುವ ತೃತೀಯ ರಂಗಕ್ಕೆ ಪೆಟ್ಟು ಬೀಳಲಿದೆ. ದಕ್ಷಿಣದಲ್ಲಿ ಬಿಜೆಪಿ ಬಲ ಹೆಚ್ಚಾದರೆ ಕೆಸಿಆರ್ ಅವರ ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ಬಲದಿಂದ ಅಧಿಕಾರ ಹಿಡಿಯುವ ಕನಸು ಕಣ್ಣು ಮುಚ್ಚುವ ಸಾಧ್ಯತೆ ಹೆಚ್ಚಾಗುತ್ತದೆ. ಮೈತ್ರಿಯೊ ಬಹುಮತವೋ ಈಗಾಗಲೇ ತೃತೀಯ ರಂಗದೊಂದಿಗೆ ಕೈಜೋಡಿಸಿರುವ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಮಗೆ ಸ್ವಲ್ಪವಾದರೂ ಸಹಾಯವಾಗುತ್ತದೆ ಎಂಬುದು ಕೆಸಿಆರ್ ಲೆಕ್ಕಾಚಾರ.
ಮೋದಿ ಅಲೆ ತಡೆಯಲು ಕೆಸಿಆರ್ಗೆ ದೇವೇಗೌಡ ಬೆಂಬಲ
ಕೇರಳ ಕಮ್ಯೂನಿಸ್ಟರಿಗೂ ಬಿಜೆಪಿ ಸೋಲಬೇಕು
ಕೇರಳ ರಾಜ್ಯಕ್ಕೂ ಬಿಜೆಪಿ ಗೆಲ್ಲುವುದು ಬೇಡವಾಗಿದೆ. ಹೇಳಿ ಕೇಳಿ ಮೊದಲೇ ಅಪ್ಪಟ ಕಮ್ಯೂನಿಸ್ಟ್ ರಾಜ್ಯ ಕೇರಳ, ಅವರಿಗೆ ಯಾವ ಪಕ್ಷವಾದರೂ ಅಧಿಕಾರಕ್ಕೆ ಬಂದರೂ ಅಡ್ಡಿಯಿಲ್ಲ ಆದರೆ ಬಿಜೆಪಿ ಬರಬಾರದಷ್ಟೆ. ಈಗಾಗಲೇ ಕೇರಳದಲ್ಲಿ ಬಿಜೆಪಿ ಅಲ್ಪ ಸ್ವಲ್ಪ ತಳವೂರುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ ಒಂದೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ಕೇರಳದಲ್ಲಿ ಬಿಜೆಪಿ ಇನ್ನಷ್ಟು ಬಲಿಯುವ ಸಾಧ್ಯತೆ ಇದೆ. ಇದು ಕಮ್ಯೂನಿಸ್ಟ್ ಸರ್ಕಾರಕ್ಕೆ ಸ್ವಲ್ಪವೂ ಹಿಡಿಸದು. ಹಾಗಾಗಿ ಅವರೂ ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಆಶಿಸುತ್ತಿದ್ದಾರೆ.
ಕಾವೇರಿ ವಿಷಯದಲ್ಲಿ ಮಲತಾಯಿ ಧೋರಣೆಯ ಭಯ
ತಮಿಳುನಾಡು-ಕರ್ನಾಟಕದ ಸಂಬಂಧಗಳು ಕಾವೇರಿ ವಿವಾದದಿಂದ ಅಷ್ಟಕ್ಕಷ್ಟೆ ಆದರೆ ಕರ್ನಾಟಕ ಹಾಗೂ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳು ಎರಡೂ ರಾಜ್ಯದ ಜನರ ಮೇಲೆ ಪರಿಣಾಮ ಬೀರಿಯೇ ಬೀರುತ್ತವೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ತಮಿಳುನಾಡು ಆಶಿಸುತ್ತಿರುವ ಕಾರಣ ಕಾವೇರಿ. ಹೌದು, ಅಕಸ್ಮಾತ್ ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿ ತಮಿಳುನಾಡಿಗೆ ಕಾವೇರಿ ವಿಷಯದಲ್ಲಿ ಅನ್ಯಾಯ ಎಸಗುತ್ತದೆ ಎಂಬ ಅನುಮಾನ ತಮಿಳುನಾಡಿಗಿದೆ ಹಾಗಾಗಿ ಅವರಿಗೆ ಇಲ್ಲಿ ಬಿಜೆಪಿ ಗೆಲ್ಲುವುದು ಬೇಕಿಲ್ಲ.
ಮಹಾರಾಷ್ಟ್ರಕ್ಕೆ ಬಿಜೆಪಿ ಗೆಲ್ಲಬೇಕಿದೆ
ಕರ್ನಾಟಕದ ಉತ್ತರದ ಗಡಿ ಹಂಚಿಕೊಂಡಿರುವ ಮಹಾರಾಷ್ಟ್ರಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಬರಬೇಕಿದೆ. ಕರ್ನಾಟಕದ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಇದೊಂದೆ ರಾಜ್ಯ ಬಿಜೆಪಿ ಗೆಲುವನ್ನು ಎದುರು ನೋಡುತ್ತಿರುವುದು. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರ ಹಿಡಿದರೆ ರಾಜ್ಯದೊಂದಿಗೆ ವ್ಯವಹಾರ ಸುಗಮವಾಗಲಿದೆ.
ಗೋವಾಕ್ಕೂ ಬಿಜೆಪಿ ಗೆಲುವಿನ ಕನವರಿಕೆ
ಗೋವಾ ರಾಜ್ಯವೂ ಸಹ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿ ಎಂದು ಆಶಿಸುತ್ತಿದೆ. ಅಲ್ಲಿ ಈಗಾಗಲೇ ಬಿಜೆಪಿ ಅಧಿಕಾರದಲ್ಲಿದೆ (ಮೈತ್ರಿ ಸರ್ಕಾರ) ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ನೀರು ಸೇರಿದಂತೆ ಇನ್ನೂ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರುವ ಈ ಎರಡು ರಾಜ್ಯಗಳಿಗೆ ರಾಜತಾಂತ್ರಿಕ ವ್ಯವಹಾರ ಸುಗಮವಾಗಲಿದೆ.