ಜೆಡಿಎಸ್ ಪ್ರಣಾಳಿಕೆ : ನೀರಾವರಿ ಕ್ಷೇತ್ರಕ್ಕೆ ಕೊಟ್ಟ ಭರವಸೆಗಳು
ಬೆಂಗಳೂರು, ಮೇ 07 : ಜೆಡಿಎಸ್ ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೃಷಿ, ನೀರಾವರಿ ಕ್ಷೇತ್ರಕ್ಕೆ ಪಕ್ಷ ಪ್ರಣಾಳಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಿದೆ.
ಸೋಮವಾರ ಬೆಂಗಳೂರಿನ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ಜನತಾ ಪ್ರಣಾಳಿಕೆ ಜನರದ್ದೇ ಆಳ್ವಿಕೆ' ಎಂಬ ಹೆಸರಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಜೆಡಿಎಸ್ ಪ್ರಣಾಳಿಕೆ ಬಿಡುಗಡೆ, ಮುಖ್ಯಾಂಶಗಳು
ಕರ್ನಾಟಕದಲ್ಲಿ ನೀರಾವರಿ ಸೌಲಭ್ಯದ ಅಭಿವೃದ್ಧಿಗೆ ಪ್ರಮುಖ ಆದ್ಯತೆಯನ್ನು ನಾವು ನೀಡಲಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ನೀರಾವರಿ ಸೌಲಭ್ಯಗಳ ಅಭಿವೃದ್ಧಿಗೆ 1,50,000 ಕೋಟಿ
ರೂಪಾಯಿಗಳನ್ನು ಹೂಡಿಕೆ ಮಾಡುವ ಉದ್ದೇಶವನ್ನು ಜೆಡಿಎಸ್ ಹೊಂದಿದೆ ಎಂದು ಪ್ರಣಾಳಿಕೆಯಲ್ಲಿ ಹೇಳಿದೆ.
ಭರವಸೆಗಳು
* ಕಾವೇರಿಯಿಂದ ಹೆಚ್ಚುವರಿ 15 ಟಿಎಂಸಿ ನೀರು ಬಳಕೆಗೆ ಯೋಜನೆ.
* ಕಾವೇರಿ ಜಲಾನಯನ ಪ್ರದೇಶದಲ್ಲಿ ಕಾಲುವೆಗಳನ್ನು ಮೇಲ್ದರ್ಜೆಗೆ ಏರಿಸಿ ನೀರಾವರಿಯ ದಕ್ಷತೆಯನ್ನು ಉತ್ತಮಪಡಿಸಲಾಗುತ್ತದೆ
* ಎರಡು ವರ್ಷಗಳಲ್ಲಿ ವಿಸಿ ನಾಲೆ ಆಧುನೀಕರಣ ಕಾರ್ಯಕೈಗೊಳ್ಳಲಾಗುವುದು. ಇದರಿಂದ ಜಲಾನಯನ ಪ್ರದೇಶದ ಕಡೆಯ ಹಂತದಲ್ಲಿರುವ ಮಳವಳ್ಳಿ ಮತ್ತು ಹಲಗೂರು ಪ್ರಾಂತ್ಯದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ.
* ನೀರಾವರಿ ಸೌಲಭ್ಯದ ದಕ್ಷತೆಯನ್ನು ಉತ್ತಮಪಡಿಸುವ ಕಾರ್ಯದ ಒಂದು ಭಾಗವಾಗಿ, ಅಣೆಕಟ್ಟೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಮಹಾರಾಜರು ನಿರ್ಮಿಸಿರುವ ಅಣೆಕಟ್ಟೆಗಳ ಆಧುನೀಕರಣ ಕಾರ್ಯ ಕೈಗೊಳ್ಳಲಾಗುವುದು.
ಜೆಡಿಎಸ್ ಪ್ರಣಾಳಿಕೆ : ಕೃಷಿ ಕ್ಷೇತ್ರಕ್ಕೆ ನೀಡಿರುವ ಭರವಸೆಗಳೇನು?
* ಕಾವೇರಿ ಮತ್ತು ಕೃಷ್ಣ ಜಲಾನಯನ ಪ್ರದೇಶದಲ್ಲಿ ಕೆರೆಗಳ ಪುನರುಜ್ಜೀವನ ಕಾರ್ಯ ಕೈಗೊಳ್ಳಲಾಗುವುದು. ಕಣ್ವ ಎಲ್ಐಎಸ್ ಅನ್ನು ಪೂರ್ಣಗೊಳಿಸಲಾಗುವುದು. ಅಣೆಕಟ್ಟುಗಳಿಗೆ ಹೂಳು ಬರದಂತೆ ನೀರು ಹರಿದು ಬರುವ ಪ್ರದೇಶದಲ್ಲಿ ವ್ಯಾಪಕವಾಗಿ ಬಿದಿರು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು.
* ಅಮರ್ಜಾ, ಮುಳ್ಳಮುರಿ ಕೆಳದಂಡೆ ಮತ್ತು ಡಿಡೋದ್ಗಂಗಾ ಯೋಜನೆಗಳು ಕಳೆದ 30 ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಪೂರ್ಣಗೊಳ್ಳದೆ ಬಾಕಿ ಉಳಿದಿವೆ. ಪಕ್ಷ ಅಧಿಕಾರಕ್ಕೆ ಬಂದ 4 ತಿಂಗಳುಗಳ ಒಳಗಾಗಿ ಈ ಯೋಜನೆಗಳನ್ನು ಪೂರ್ಣಗೊಳಿಸಲು ಇರುವ ತಾಂತ್ರಿಕ ಅಡೆತಡೆಗಳ ಅಧ್ಯಯನ ನಡೆಸಿ, ಪೂರ್ಣ ಪ್ರಮಾಣದ ನೀರಾವರಿ ಸೌಲಭ್ಯವನ್ನು ಒದಗಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು.
* ಬಹು ವರ್ಷಗಳಿಂದ ಬಾಕಿ ಉಳಿದಿರುವ ಸಣ್ಣ ಪ್ರಮಾಣದ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ವೈ-ಕಗ್ಗಲ್, ಕೆಂಚನಗುಡ್ಡ ಎಲ್ಐಎಸ್, ಭಕ್ರಿ ಹಳ್ಳ, ಆವಲಹಳ್ಳ, ಬೆಳ್ಳೈ ನಾಲಾ ಎಲ್ಐಎಸ್, ಬೆಣ್ಣೆಹಳ್ಳ, ತಿಳವಳ್ಳಿ ಎಲ್ಐಎಸ್ ಇವುಗಳನ್ನು ಪೂರ್ಣಗೊಳಿಸಲಾಗುವುದು.
* ಭೀಮಾ ನದಿಗೆ ಸಂಬಂಧಿಸಿದ ಎಲ್ಲ ಅಡೆತಡೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ನಿವಾರಿಸಲಾಗುವುದು
* ಕೋಲಾರ-ಚಿಕ್ಕಬಳ್ಳಾಪುರ ನೀರಿನ ಯೋಜನೆಗೆ 60 ಟಿಎಂಸಿ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಮತ್ತು ಅರಸೀಕೆರೆ ಹಾಗೂ ತಿಪಟೂರು ತಾಲ್ಲೂಕುಗಳಿಗೆ ಜನತೆಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಪಶ್ಚಿಮ ಘಟ್ಟಗಳಿಂದ 60 ಟಿಎಂಸಿ ನೀರು ತರುವ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ.
* ಬೆಂಗಳೂರಿನ ನೀರು ಸರಬರಾಜು ಬೇಡಿಕೆಗಳನ್ನು ಕೂಡ ಇದೇ ಯೋಜನೆ ಮೂಲಕ ಈಡೇರಿಸಲಾಗುವುದು. ಕೇವಲ ಎತ್ತಿನ ಹೊಳೆ ಯೋಜನೆ ಒಂದಕ್ಕೇ ಸೀಮಿತವಾಗದೆ, ಈ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ಜಾರಿಗೊಳಿಸಲು ಜೆಡಿಎಸ್ ಸರ್ವ ಪ್ರಯತ್ನಗಳನ್ನೂ ಪ್ರಾಮಾಣಿಕವಾಗಿ ಮಾಡಲಿದೆ.
* ನೀರಾವರಿ ಯೋಜನೆಗಳು ಜಾರಿಗೊಂಡ ಪ್ರದೇಶಗಳಲ್ಲಿ ಯೋಜನೆಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಇದುವರೆಗೂ ಸೂಕ್ತ ಸ್ಪಂದನೆ ಸಿಗದೆ, ಆ ಕುಟುಂಬಗಳ ಜೀವನ ಮಟ್ಟ ಕುಸಿದಿರುವುದನ್ನು ಜೆಡಿಎಸ್ ಗುರುತಿಸಿದೆ. ಮತ್ತು ಅವರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಜೆಡಿಎಸ್ ಕ್ರಮಗಳನ್ನು ಕೈಗೊಳ್ಳಲಿದೆ.
* 1980ರಿಂದಲೂ ಜಾರಿಗೊಳಿಸಿರುವ ನೀರಾವರಿ ಯೋಜನೆಗಳು, ವಿದ್ಯುತ್ ಯೋಜನೆಗಳು ಮತ್ತು ಗ್ರಾಮೀಣ ವಸತಿ ಯೋಜನೆಗಳಿಗಾಗಿ ತಮ್ಮ ಭೂಮಿಯನ್ನು ಕಳೆದುಕೊಂಡಿರುವ ಎಲ್ಲ ಕುಟುಂಬಗಳಿಗೆ ಜೀವಮಾನ ಪರ್ಯಂತ ಎಕರೆಗೆ 2000 ರೂ. ವಾರ್ಷಿಕ ಪರಿಹಾರ ನೀಡಲಾಗುವುದು.
* ನೀರಾವರಿ ಯೋಜನೆಗಾಗಿ ಭೂಮಿಯನ್ನು ತ್ಯಾಗ ಮಾಡಿದ ವ್ಯಕ್ತಿಗೆ ಈ ಹಣವನ್ನು ನೀಡಲಾಗುತ್ತದೆ. ಜಮೀನು ನೀಡಿದ ವ್ಯಕ್ತಿಯು ಮರಣಹೊಂದಿದ ನಂತರ ಮುಂದಿನ20 ವರ್ಷಗಳವರೆಗೆ ಆ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಈ ಹಣ ನೀಡಲಾಗುತ್ತದೆ. ಒಂದೊಮ್ಮೆ ಈಗಾಗಲೇ ನ್ಯಾಯಾಲಯದ
ಮಧ್ಯಸ್ಥಿಕೆಯಲ್ಲಿ ಪರಿಹಾರವನ್ನು ಪಡೆದಿರುವ ಕುಟುಂಬಗಳು ಈ ವಾರ್ಷಿಕ ಪರಿಹಾರ ಮೊತ್ತವನ್ನು ಪಡೆಯಲು ಅರ್ಹವಾಗಿರುವುದಿಲ್ಲ.
* ಕೃಷಿ ಬಳಕೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ನಮ್ಮ ಸರ್ಕಾರವು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಯ ರೀತಿಯಲ್ಲೇ ಪರಿಗಣಿಸಲಿದ್ದು, ಅದಕ್ಕೆ ಸಮನಾದ ಪರಿಹಾರವನ್ನು ನೀಡಲಿದೆ.