ಜೆಡಿಎಸ್ ಪ್ರಣಾಳಿಕೆ : ಕೃಷಿ ಕ್ಷೇತ್ರಕ್ಕೆ ನೀಡಿರುವ ಭರವಸೆಗಳೇನು?
ಬೆಂಗಳೂರು, ಮೇ 07 : ಜೆಡಿಎಸ್ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. 'ಜನತಾ ಪ್ರಣಾಳಿಕೆ ಜನರದ್ದೇ ಆಳ್ವಿಕೆ' ಎಂಬ ಹೆಸರಿನ ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ನೀಡಿದೆ.
ಸೋಮವಾರ ಬೆಂಗಳೂರಿನ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಜೆಡಿಎಸ್ ಪಕ್ಷಕ್ಕೆ ಒಮ್ಮೆ ಅವಕಾಶ ನೀಡಿ ಎಂದು ರಾಜ್ಯದ ಜನರಿಗೆ ಮನವಿ ಮಾಡಿದರು.
ಜೆಡಿಎಸ್ ಪ್ರಣಾಳಿಕೆಯ ಮುಖ್ಯಾಂಶಗಳು
ಜೆಡಿಎಸ್ ವರಿಷ್ಠರಾದ ಎಚ್.ಡಿ ದೇವೇಗೌಡರು ಮತ್ತು ಎಚ್.ಡಿ ಕುಮಾರಸ್ವಾಮಿ ಅವರು ಮಣ್ಣಿನ ಮಕ್ಕಳು ಎಂದೇ ಪ್ರಖ್ಯಾತರು. ಕೃಷಿ ರಂಗದ ಸಮಸ್ಯೆಗಳಿಗಾಗಿ ಹೋರಾಟ ನಡೆಸಿದವರು. ರೈತರ ಕಷ್ಟು ಸುಖಗಳಿಗೆ ಸ್ಪಂದಿಸಿದವರು. ನೀರಾವರಿಗಾಗಿ ಶ್ರಮಿಸಿದವರು. ಕುಮಾರಸ್ವಾಮಿ ಅವರೂ ಕೂಡ ರೈತರ ಸಾಲ ಮನ್ನಾ ಮಾಡುವ ಮೂಲಕ ತಮಗೆ ರೈತರು ಮತ್ತು ಕೃಷಿ ರಂಗದ ಮೇಲಿರುವ ಬದ್ಧತೆಯನ್ನು ಪ್ರದರ್ಶಿಸಿದರು.
ಜೆಡಿಎಸ್ ಪ್ರಣಾಳಿಕೆ ಬಿಡುಗಡೆ, ಮುಖ್ಯಾಂಶಗಳು
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದ್ದಾರೆ. ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಜೆಡಿಎಸ್ ಹೊಂದಿರುವ ಮಿಷನ್-ವಿಷನ್ಗಳ ವಿವರಗಳು ಇಲ್ಲಿವೆ ನೋಡಿ..
* ಕರ್ನಾಟಕ ರಾಜ್ಯ ರೈತರ ಸಲಹಾ ಸಮಿತಿ ರಚನೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡ ರೈತರ ಸಲಹಾ ಸಮಿತಿಯನ್ನು ರಚಿಸಲಾಗುತ್ತದೆ. ಪ್ರತಿ ತಿಂಗಳು ಈ ರೈತರ ಸಮಿತಿಯೊಂದಿಗೆ ಚರ್ಚೆ ನಡೆಸಲಿರುವ ಮುಖ್ಯಮಂತ್ರಿಗಳು ಸ್ಥಳೀಯ ಸಮಸ್ಯೆಗಳನ್ನು ಅರಿಯಲಿದ್ದಾರೆ.
* ನಾಡಿನ ರೈತ ಬಾಂಧವರು ಕೃಷಿ ಚಟುವಟಿಕೆಗಳಿಗಾಗಿ ಮಾಡಿರುವ ಎಲ್ಲ ಬಗೆಯ ಸಾಲವನ್ನು ಜೆಡಿಎಸ್ ಸರ್ಕಾರ ರಚನೆಯಾದ ಕೇವಲ 24 ಗಂಟೆಗಳಲ್ಲಿ, ಅದೂ ಒಂದೇ ಹಂತದಲ್ಲಿ ಮನ್ನಾ ಮಾಡಲಾಗುತ್ತದೆ.
* ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ರಾಜ್ಯದ ಪ್ರತಿ ತಾಲೂಕುಗಳಲ್ಲೂ ಕೃಷಿ ಉತ್ಪಾದನಾ ಯೋಜನಾ ಘಟಕ ರಚಿಸಲು ನಿರ್ಧಾರ. ರೈತರಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ, ಯಾವ ಬೆಳೆ ಬೆಳೆಯಬೇಕೆಂಬ ಸಲಹೆಯನ್ನು ಈ ಘಟಕದ ಮೂಲಕ ನೀಡಲಾಗುವುದು.
* ನಂದಿನಿ ಬ್ರಾಂಡ್ ಮಾದರಿಯಲ್ಲಿ ಎಣ್ಣೆ ಕಾಳುಗಳ ಬೆಳೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಆಹಾರ ಪದಾರ್ಥಗಳ ಎಣ್ಣೆ ತಯಾರಿಕೆಯಲ್ಲಿ ಕರ್ನಾಟಕದ ಮಟ್ಟಿಗೆ ಶೇಂಗಾ ಮತ್ತು ಸೂರ್ಯಕಾಂತಿ ಪ್ರಮುಖವಾದವು.
* ಕಲಬೆರೆಕೆ ಎಣ್ಣೆ ತಯಾರಕರನ್ನು ನಿರ್ಮೂಲನೆ ಮಾಡಲಾಗುವುದು. ಅಲ್ಲದೆ, ಪರಿಶುದ್ಧ ಎಣ್ಣೆ ತಯಾರಿಕೆಯನ್ನು ಕೃಷಿ ಹಂತದಲ್ಲೇ ಪ್ರೋತ್ಸಾಹಿಸಲಾಗುವುದು. ಇದಕ್ಕೆ ನಂದಿನಿ ಮಾದರಿಯಲ್ಲಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
* ನಾಡಿನ ರೈತರು ಬೆಳೆ ನಷ್ಟ ಮತ್ತು ಬೆಲೆ ಕುಸಿತದಿಂದ ಕಂಗೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಸಂಸ್ಕರಣಾ ವ್ಯವಸ್ಥೆ ಕಲ್ಪಿಸಲು ಜೆಡಿಎಸ್ ನಿರ್ಧರಿಸಿದೆ. ಒಣಮೆಣಸು, ಕಾಳುಮೆಣಸು, ಬಾದಾಮಿ, ಕಾಫಿ ಬೀಜ, ಜೀರಿಗೆ, ಕೊತ್ತಂಬರಿ ಬೀಜ ಸೇರಿದಂತೆ ಇದೇ ಮಾದರಿಯ ಬೆಳೆಗಳ ಸಂಸ್ಕರಣೆಗೆ ಘಟಕಗಳನ್ನು ಸ್ಥಾಪಿಸಲಾಗುವುದು. ಈ ಘಟಕಗಳ ಸ್ಥಾಪನೆಯಲ್ಲಿ ಖಾಸಗಿ, ಸರ್ಕಾರಿ ಜಂಟಿ ಸಹಭಾಗಿತ್ವಕ್ಕೂ ಅವಕಾಶ ನಿಡಲಾಗುತ್ತದೆ.
* ಧಾನ್ಯ ಮತ್ತು ಸಾವಯವ ಕೃಷಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗುವುದು. ಅಲ್ಲದೆ, ಅವುಗಳಿಗೆ ಸರ್ಕಾರದಿಂದಲೇ ಬ್ರ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು.
* ಇತ್ತೀಚಿನ ದಿನಗಳಲ್ಲಿ ಹನಿ ನೀರಾವರಿ ಪದ್ಧತಿಯನ್ನು ರೈತರು ಹೆಚ್ಚು ಬಳಸಲು ಆರಂಭಿಸಿದ್ದಾರೆ. ಆದರೆ, ವಿದ್ಯುತ್ ಸಮಸ್ಯೆಯಿಂದಾಗಿ ಈ ಪದ್ಧತಿ ನಿರೀಕ್ಷಿತ ಫಲ ಕಾಣುತ್ತಿಲ್ಲ. ಈ ವ್ಯವಸ್ಥೆಗೆ ಬೇಕಾದ ಯಂತ್ರಗಳಿಗೆ ಸೋಲಾರ್ ಶಕ್ತಿ ವಿನಿಯೋಗಿಸಿದರೆ ವಿದ್ಯುತ್ ಮೇಲಿನ ಅವಲಂಬನೆ ತಪ್ಪಲಿದೆ. ಇದಕ್ಕಾಗಿ ಸಂಶೋಧನಾ ಸಂಸ್ಥೆಗಳೊಂದಿಗೆ ಚರ್ಚಿಸಿ ರೈತರಿಗೆ ಸೌರಶಕ್ತಿ ಆಧಾರಿತ ಯಂತ್ರಗಳನ್ನು ಪೂರೈಸಲಿದೆ.
* ಒಳಾಂಗಣ ಅಥವಾ ಪಾಲಿ ಹೌಸಿ ಮಾದರಿಯ ಕೃಷಿಯಲ್ಲಿ ಲಾಭವಿದೆ. ಇದರಲ್ಲಿ ಕೋಸು ರೀತಿಯ ತರಕಾರಿಗಳನ್ನು ಮತ್ತು ಹೂ ಬೆಳೆ ಬೆಳೆಯಲು ಸಾಧ್ಯವಿದೆ. ಇದು ಅತಿ ಕಡಿಮೆ ಮಾನವ ಸಂಪನ್ಮೂಲ ಬೇಡುತ್ತದಾದರೂ ಬಂಡವಾಳ ಅಧಿಕ. ಆದರೆ, ನಮ್ಮ ಸರ್ಕಾರ ಇದರ ವೆಚ್ಚ ಕಡಿಮೆ ಮಾಡಿ ಪ್ರೋತ್ಸಾಹಧನ ನೀಡಲಿದೆ.
* ಕೃಷಿ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ಸದ್ಯ ಅಧ್ಯಯನ, ಸಂಶೋಧನೆ, ತಂತ್ರಜ್ಞಾನ ಬಳಕೆ ಅನಿವಾರ್ಯ. ಆವಿಷ್ಕಾರಗಳಿಗಾಗಿ ನಮ್ಮ ಸರ್ಕಾರ ವಿಶೇಷ ಉದ್ದೇಶಿತ ವ್ಯವಸ್ಥೆಯನ್ನು (ಸ್ಪೆಷಿಯಲ್ ಪರ್ಪಸ್ ವೆಹಿಕಲ್ - ಎಸ್ಪಿವಿ) ಜಾರಿಗೆ ತರಲಿದೆ.
* ರೈತರು ತಮ್ಮ ಭೂಮಿಯಲ್ಲಿ ನೀರಿನ ಸಂಗ್ರಹಣೆಗೆ ಮಾಡುವ ಯಾವುದೇ ವ್ಯವಸ್ಥೆ ಅಥವಾ ರಚನೆಗೆ ಶೇ.100ರಷ್ಟು ಸಬ್ಸಿಡಿ ನೀಡಲಾಗುವುದು.
* ಯಂತ್ರ ಖರೀದಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಸಣ್ಣ ಟ್ರಾಕ್ಟರ್ ಖರೀದಿಗೆ ಶೇ. 75% ಮತ್ತು ಇನ್ನಿತರೆ ಸಲಕರಣೆಗಳ ಖರೀದಿಗೆ ಶೇ. 90%ರಷ್ಟು ಸಬ್ಸಿಡಿ ನೀಡಲಾಗುವುದು.
* ನೀರಾವರಿ ಕಾರಣಕ್ಕಾಗಿ ಪಂಪ್ಸೆಟ್ಗಳಿಗೆ ವಿದ್ಯುತ್ ಪಡೆಯಲು ರೈತರು ಸಲ್ಲಿಸಿರುವ
ಎಲ್ಲ ಅರ್ಜಿಗಳನ್ನು ಅಕ್ಟೋಬರ್ 2018ರ ಹೊತ್ತಿಗೆ ಸರ್ಕಾರ ಇತ್ಯರ್ಥಗೊಳಿಸುತ್ತದೆ.
ಮತ್ತು ವಿದ್ಯುತ್ ಸಂಪರ್ಕ ನೀಡಲಿದೆ.