ಬಿಎಸ್ ವೈಗೂ ಅಮಿತ್ ಶಾ ಗೂ ಬಂದಾರೆ ಮುನಿಸು, ಬಿಜೆಪಿ ಗೆಲ್ಲೋದು ಕನಸು!?
Recommended Video
ಪುತ್ರನಿಗೆ ಟಿಕೆಟ್ ನೀಡದ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೈಕಮಾಂಡ್ ವಿರುದ್ಧ ಕೋಪಗೊಂಡಿದ್ದಾರಾ..? ನಿನ್ನೆ(ಏ.26) ರಾತ್ರಿ ರಾಜಧಾನಿ ಬೆಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಬರಮಾಡಿಕೊಳ್ಳುವುದಕ್ಕೂ ಬಿಎಸ್ ವೈ ಹೋಗದಿರುವುದು ಹೊಸದೊಂದು 'ಬಿರುಕಿ'ನ ಸೂಚನೆಯೇ?
ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಲು ಬಿಜೆಪಿಯೇ ಸಾಕಷ್ಟು ಪ್ರಯತ್ನಿಸುತ್ತಿದೆ ಎಂದು ಹಲವರು ಟ್ವೀಟ್ ಸಹ ಮಾಡಿದ್ದಾರೆ. ಕರ್ನಾಟಕದಲ್ಲಿ ಮೇ 12 ರಂದು ಚುನಾವಣೆ ನಡೆಯಲಿದೆ. ಸರಿಯಾಗಿ ಲೆಕ್ಕ ಹಾಕಿದರೆ ಇನ್ನು ಎರಡು ವಾರವೂ ಇಲ್ಲ! ಈ ಸಂದರ್ಭದಲ್ಲಿ ಎಲ್ಲ ಭಿನ್ನಾಭಿಪ್ರಾಯ ಮರೆತು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದ್ದ ಬಿಜೆಪಿಯಲ್ಲಿ ಇದೇನಿದು ಮನಸ್ತಾಪ?
ವರುಣಾದಲ್ಲಿ ವಿಜಯೇಂದ್ರ ಬೆಂಬಲಿಗರ ಮಾಸ್ಟರ್ ಪ್ಲಾನ್
ಮೊನ್ನೆ ಮೈಸೂರಿನಲ್ಲಿ ನಡೆದ ಘಟನೆಗೂ ಮುನ್ನ ಯಡಿಯೂರಪ್ಪ ಅವರಲ್ಲಿ ಇದ್ದ ಉತ್ಸಾಹ ಈಗ ಕಡಿಮೆಯಾಗಿದೆಯಾ?
ಯಡಿಯೂರಪ್ಪ ಮುನಿಸು?
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎಂದು ಪ್ರಚಾರ ಸಭೆಗಳಲ್ಲೆಲ್ಲ ರಾಷ್ಟ್ರ ಬಿಜೆಪಿ ನಾಯಕರು ಭಾಷಣ ಮಾಡುತ್ತಿದ್ದಾರೆ. ಆದರೆ ಇತ್ತ ಪುತ್ರನಿಗೆ ಟಿಕೆಟ್ ಕೊಡುವಲ್ಲಿಯೇ ಯಡಿಯೂರಪ್ಪ ಸಫಲರಾಗಿಲ್ಲದಿರುವುದು ಹೈಕಮಾಂಡ್ ನೊಂದಿಗೆ ಯಡಿಯೂರಪ್ಪ ಅವರಿಗೆ ತೀರಾ ಸಲಿಗೆಯ ಸಂಬಂಧವಿಲ್ಲ ಎಂಬುದನ್ನು ಪ್ರಚುರಪಡಿಸಿದೆ. ಕೊನೇ ಗಳಿಗೆಯವರೆಗೂ ಬಿಎಸ್ ವೈ ಪುತ್ರ ಬಿ ವೈ ವಿಜಯೇಂದ್ರ ಅವರೇ ಮೈಸೂರಿನ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಬುದು ನಿರ್ಧಾರವಾಗಿದ್ದರೂ, ಇನ್ನೇನು ನಾಮಪತ್ರ ಸಲ್ಲಿಸುವ ಹೊತ್ತಲ್ಲಿ ಹೈಕಮಾಂಡ್ ತನ್ನ ನಿರ್ಧಾರವನ್ನು ಬದಲಿಸಿತು. ಇದು ಸ್ವತಃ ಯಡಿಯೂರಪ್ಪನವರಿಗೂ ಶಾಕ್ ಎನ್ನಿಸಿದ್ದು ಸತ್ಯ.
ಹಲ್ಲುಕಚ್ಚಿಕೊಂಡು ಸುಮ್ಮನಿದ್ದಾರೆ ಯಡಿಯೂರಪ್ಪ!
ಆದರೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೈಕಮಾಂಡ್ ತಮ್ಮನ್ನು ಗುರುತಿಸಿರುವಾಗ ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿ ಅಸಮಾಧಾನ ತೋರಿಸಿದರೆ ಪ್ರಮಾದವಾದೀತು ಎಂಬುದನ್ನು ಬಲ್ಲ ಬಿಎಸ್ ವೈ ಹಲ್ಲುಕಚ್ಚಿಕೊಂಡು ಸುಮ್ಮನಿದ್ದಾರೆ. ಹಾಗಂತ ಯಡಿಯೂರಪ್ಪ ಅವರು ಮುನಿಸಿಕೊಂಡರೆ ಅದರಿಂದ ನಷ್ಟವಾಗುವುದು ಬಿಜೆಪಿಗೇ ಎಂಬುದೂ ಹೈಕಮಾಂಡ್ ಗೆ ಗೊತ್ತಿಲ್ಲದ್ದೇನಲ್ಲ. ಕೆಜೆಪಿ ಹುಟ್ಟುಹಾಕಿದ ಕಾಲದಲ್ಲೇ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಏನು ಎಂಬುದು ಅರ್ಥವಾಗಿದೆ. ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಹೊರತಾದ 'ಮಾಸ್ ಲೀಡರ್' ಇಲ್ಲ ಎಂಬುದೂ ಗೊತ್ತಾಗಿದೆ. ಆದ್ದರಿಂದಲೇ ಹೈಕಮಾಂಡ್ ಸಹ ಅವರನ್ನು ಸಮಾಧಾನ ಮಾಡಲು ಮುಂದಾಗಿದೆ.
ಆ ಒಂದು ಕರೆಯಿಂದಾಗಿ ಬಿಎಸ್ವೈ ಪುತ್ರ ವಿಜಯೇಂದ್ರಗೆ ಕೈ ತಪ್ಪಿತು ಟಿಕೆಟ್!
ಅಮಿತ್ ಶಾರನ್ನು ಭೇಟಿಯಾದ ಬಿಎಸ್ ವೈ
ಅಮಿತ್ ಶಾರನ್ನು ಬರಮಾಡಿಕೊಳ್ಳುವುದಕ್ಕೆ ವಿಮಾನನಿಲ್ದಾಣಕ್ಕೆ ಹೋಗದಿದ್ದರೂ ನಂತರ ಇಂದು(ಏ.27) ಬೆಳಗ್ಗೆ ಶಾ ಅವರನ್ನು ಅವರ ನಿವಾಸದಲ್ಲೇ ಬಿಎಸ್ ವೈ ಭೇಟಿಯಾಗಿದ್ದಾರೆ. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ನರೇಂದ್ರ ಮೋದಿಯವರು ಮುಂದಿನವಾರ ಪ್ರಚಾರಕ್ಕೆ ಆಗಮಿಸಲಿರುವುದರಿಂದ ಅವರೊಂದಿಗೆ ಎಲ್ಲಾ ಸಭೆಯಲ್ಲೂ ಪಾಲ್ಗೊಳ್ಳುವಂತೆ ಅಮಿತ್ ಶಾ ಅವರು ನನಗೆ ಸೂಚಿಸಿದ್ದಾರೆ. ಅದಲ್ಲದೆ ಪ್ರತಿದಿನ 5 ಕ್ಷೇತ್ರಗಳಿಗೆ ಭೇಟಿ ನೀಡುವಂತೆಯೂ ಹೇಳಿದ್ದಾರೆ' ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ. ಅಮಿತ್ ಶಾ ಜೊತೆ ಬಿಎಸ್ ವೈ ವೇದಿಕೆ ಹಂಚಿಕೊಳ್ಳದಿದ್ದರೆ ಅದಕ್ಕೂ ಈ ಮೇಲಿನ ಸಂಗತಿಯೇ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
|
ಬಿಜೆಪಿಯನ್ನು ಬಿಜೆಪಿಯೇ ಸೋಲಿಸುತ್ತಿದೆ!
ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಪುತ್ರನಿಗೆ ನೀಡಬೇಕಿದ್ದ ಟಿಕೆಟ್ ಅನ್ನು ಆರ್ ಎಸ್ ಎಸ್ ತಪ್ಪಿಸಿದೆ. ಆದ್ದರಿಂದ ಕೋಪಗೊಂಡ ಯಡಿಯೂರಪ್ಪ ಪ್ರಚಾರ ನಡೆಸುತ್ತಿಲ್ಲ. ಅಂದರೆ ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಲು ಬಿಜೆಪಿಯೇ ಪ್ರಯತ್ನಿಸುತ್ತಿದೆ. ಬಹುಶಃ ಕರ್ನಾಟಕದಲ್ಲಿ ಕಾಂಗ್ರೆಸ್ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದು ಜಯಗಳಿಸಬಹುದು ಎಂದಿದ್ದಾರೆ ಎಚ್ ಎ ಶಂಕರನಾರಾಯಣ.
ಚುನಾವಣೆ ಮೇಲೆ ಅಡ್ಡಪರಿಣಾಮ?
ಚುನಾವಣೆಗೆ ದಿನಗಣನೆ ಆರಂಭವಾದ ಹೊತ್ತಲ್ಲಿ ಬಿಜೆಪಿಯಲ್ಲಿ ಎದ್ದಿರುವ ಈ ವಿವಾದ ಚುನಾವಣೆಯ ಮೇಲೆ ಪರಿಣಾಮ ಬೀರುವುದು ಖಂಡಿತ. ನಾಮಪತ್ರ ಸಲ್ಲಿಕೆಯ ಕೊನೆ ದಿನದವರೆಗೂ ಸುಮ್ಮನಿದ್ದು, ನಂತರ ಏಕಾಏಕಿ ಅಭಿಪ್ರಾಯ ಬದಲಿಸಿ, ಪುತ್ರನಿಗೆ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪ ಅವರಿಗೆ ಕೋಪ ಬರಿಸುವುದು ಸಹಜವೇ. ಆದರೆ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಈ ಸಂದರ್ಭದಲ್ಲಿ ಪ್ರಚಾರಕ್ಕೂ ಹೋಗದೆ ಸುಮ್ಮನಿದ್ದರೆ ಅದರಿಂದ ನಷ್ಟವಾಗುವುದು ಯಡಿಯೂರಪ್ಪ ಅವರಿಗೇ. ಈಗಾಗಲೇ ಬಿಜೆಪಿಯಲ್ಲಿನ ಈ ಒಳಜಗಳದ ಲಾಭವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಡೆಯಲು ಹವಣಿಸುತ್ತಿವೆ. ಇದು ಬಿಜೆಪಿ ಮೇಲೆ ಅಡ್ಡಪರಿಣಾಮ ಬೀರುವುದು ಖಂಡಿತ.