ಕರ್ನಾಟಕ ಚುನಾವಣೆ : ಈ ಮೂರು ಕ್ಷೇತ್ರಗಳಲ್ಲಿ ಸಹೋದರರ ಸವಾಲ್!
ಬೆಂಗಳೂರು, ಏಪ್ರಿಲ್ 26 : ಕರ್ನಾಟಕ ವಿಧಾನಸಭೆ ಚುನಾವಣೆಯ ಕಣ ಅಂತಿಮಗೊಂಡಿದೆ. ಮೂರು ಕ್ಷೇತ್ರದಲ್ಲಿ ಸಹೋದರರು ಶಾಸಕರಾಗಲು ಬೇರೆ-ಬೇರೆ ಪಕ್ಷಗಳಿಂದ ಅಭ್ಯರ್ಥಿಗಳಾಗಿದ್ದಾರೆ. ಯಾರಿಗೆ ಗೆಲುವು? ಎಂಬುದನ್ನು ಜನರು ತೀರ್ಮಾನಿಸಬೇಕಾಗಿದೆ.
ಶಿವಮೊಗ್ಗ, ಬಳ್ಳಾರಿ, ತುಮಕೂರು ಜಿಲ್ಲೆಯಲ್ಲಿ ಸಹೋದರರು ಶಾಸಕರಾಗಲು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಒಬ್ಬರು ಮುಖ್ಯಮಂತ್ರಿ, ಮೂವರು ಮಾಜಿ ಮುಖ್ಯಮಂತ್ರಿಗಳು, ಗಂಡ-ಹೆಂಡತಿ, ಅಪ್ಪ-ಮಕ್ಕಳು ಸಹ ಈ ಬಾರಿಯ ಚುನಾವಣಾ ಕಣದಲ್ಲಿದ್ದಾರೆ.
ಬೆಳಗಾವಿ : ಪತಿ-ಪತ್ನಿ ಚುನಾವಣಾ ಕಣದಲ್ಲಿ, ಇಬ್ಬರೂ ಬಿಜೆಪಿ ಅಭ್ಯರ್ಥಿಗಳು!
ಒಂದೇ ಕುಟುಂಬದ ತಂದೆ-ಮಗ, ಅಣ್ಣ-ತಮ್ಮಂದಿರು ಬೇರೆ-ಬೇರೆ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ, ಬಾದಾಮಿ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಅವರ ಪುತ್ರ ಡಾ.ಯತೀಂದ್ರ ಅವರು ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಹೀಗೆ ಈ ಬಾರಿಯ ಚುನಾವಣಾ ಕಣ ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದ ಎಲೆಕ್ಷನ್ ಕಿಂಗ್!
ಬಿಜೆಪಿ ನಿಪ್ಪಾಣಿಯಿಂದ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ, ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ನೀಡಿದೆ, ಒಂದೇ ಪಕ್ಷದಿಂದ ಪತಿ-ಪತ್ನಿ ಚುನಾವಣಾ ಅಖಾಡದಲ್ಲಿದ್ದಾರೆ. ಕಣದಲ್ಲಿರುವ ಸಹೋದರರು ಯಾರು? ಎಂಬುದನ್ನು ನೋಡೋಣ...
ಶಿವಮೊಗ್ಗದ ಸೊರಬ ಕ್ಷೇತ್ರ
ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರ ಸತತ ಮೂರು ವಿಧಾನಸಭಾ ಚುನಾವಣೆಗಳಿಂದ ಸಹೋದರರ ಸವಾಲ್ಗೆ ಸಾಕ್ಷಿಯಾಗುತ್ತಿದೆ. ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಪುತ್ರರಾದ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ಎದುರಾಳಿಗಳು.
2004, 2008, 2013ರಿಂದ ಸಹೋದರರು ಎದುರಾಳಿಗಳು. 2004ರಲ್ಲಿ ಕುಮಾರ್ ಬಂಗಾರಪ್ಪ, 2013ರಲ್ಲಿ ಮಧು ಬಂಗಾರಪ್ಪ ಜಯಗಳಿಸಿದ್ದಾರೆ. 2018ರ ಚುನಾವಣೆಯೂ ಸಹೋದರ ಸವಾಲ್ಗೆ ಸಾಕ್ಷಿಯಾಗಿದೆ.
ಮಧು ಬಂಗಾರಪ್ಪ ಅವರು ಜೆಡಿಎಸ್ನಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಕುಮಾರ್ ಬಂಗಾರಪ್ಪ ಅವರು ಬಿಜೆಪಿ ಸೇರಿದ್ದು, ಈ ಬಾರಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ವಿರುದ್ಧ ಕಣಕ್ಕಿಳಿದಿದ್ದಾರೆ.
ತುಮಕೂರಿನ ಕುಣಿಗಲ್ ಕ್ಷೇತ್ರ
ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರ ಸಹ ಸಹೋದರರ ನಡುವಿನ ಹೋರಾಟಕ್ಕೆ ವೇದಿಕೆಯಾಗಿದೆ. ಜೆಡಿಎಸ್ನಿಂದ ಡಿ.ನಾಗರಾಜಯ್ಯ, ಬಿಜೆಪಿಯಿಂದ ಕೃಷ್ಣಕುಮಾರ್ ಅವರು ಅಭ್ಯರ್ಥಿಗಳು.
2013ರ ಚುನಾವಣೆಯಲ್ಲಿಯೂ ಇಬ್ಬರು ಮುಖಾಮುಖಿಯಾಗಿದ್ದರು. ಡಿ.ನಾಗರಾಜಯ್ಯ 44,575 ಮತ, ಡಿ.ಕೃಷ್ಣ ಕುಮಾರ್ 34,943 ಮತಗಳನ್ನು ಪಡೆದಿದ್ದರು.
ಬಳ್ಳಾರಿ ಜಿಲ್ಲೆಯ ವಿಜಯನಗರ
ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರ ಸಹ ಸಹೋದರರ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಕಾಂಗ್ರೆಸ್ನಿಂದ ಆನಂದ್ ಸಿಂಗ್, ಜೆಡಿಎಸ್ನಿಂದ ದೀಪಕ್ ಸಿಂಗ್ ಅವರು ಅಭ್ಯರ್ಥಿ.
2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದ ಆನಂದ್ ಸಿಂಗ್ ಈಗ ಕಾಂಗ್ರೆಸ್ ಸೇರಿದ್ದಾರೆ. 2008ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದ ದೀಪಕ್ ಸಿಂಗ್ ಈಗ ಜೆಡಿಎಸ್ ಸೇರಿದ್ದಾರೆ. ವಿಜಯನಗರದಲ್ಲಿ ಯಾರಿಗೆ ವಿಜಯ? ಕಾದು ನೋಡಬೇಕಿದೆ.
ಕುಮಾರಸ್ವಾಮಿ, ರೇವಣ್ಣ
ಇನ್ನು ಒಂದೇ ಪಕ್ಷದಿಂದ ಸಹೋದರರಿಬ್ಬರು ಕಣಕ್ಕಿಳಿದಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಚುನಾವಣಾ ಕಣದಲ್ಲಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ, ಚನ್ನಪಟ್ಟಣದಿಂದ ಕಣಕ್ಕಿಳಿದಿದ್ದಾರೆ. ಹೊಳೆನರಸೀಪುರ ಕ್ಷೇತ್ರದಿಂದ ಎಚ್.ಡಿ.ರೇವಣ್ಣ ಅವರು ಅಭ್ಯರ್ಥಿ.