ಕರ್ನಾಟಕ ಚುನಾವಣೆ: ಬಿಜೆಪಿ ಆಹ್ವಾನಕ್ಕೆ ಒಲ್ಲೆ ಎಂದ ಕುಂಬ್ಳೆ-ದ್ರಾವಿಡ್
Recommended Video
ಬೆಂಗಳೂರು, ಏಪ್ರಿಲ್ 12: ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ನಿರ್ಧರಿಸಿರುವ ಬಿಜೆಪಿ, ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರನ್ನು ಬಿಜೆಪಿಗೆ ಸೆಳೆಯಲು ಸಾಕಷ್ಟು ಪ್ರಯತ್ನ ಪಟ್ಟು ವಿಫಲವಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ.
ಯುವ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಬಿಜೆಪಿ ಈ ಇಬ್ಬರು ಮಿಸ್ಟರ್ ಕ್ಲೀನ್ ಖ್ಯಾತಿಯ ಟೀಂ ಇಂಡಿಯಾದ ಮಾಜಿ ನಾಯಕರುಗಳನ್ನು ಬಿಜೆಪಿಗೆ ಸೇರುವಂತೆ ಆಹ್ವಾನಿಸಿತ್ತು. ಈ ಕುರಿತು ಕನ್ನಡದ ಈ ಇಬ್ಬರು ಕ್ರಿಕೆಟ್ ದಿಗ್ಗಜರೊಂದಿಗೆ ಹಲವು ಸುತ್ತಿನ ಮಾತುಕತೆಯೂ ನಡೆದಿತ್ತು. ಆದರೆ ರಾಜಕೀಯದಿಂದ ದೂರವೇ ಇರಲು ಬಯಸಿರುವ ಗೋಡೆ ಖ್ಯಾತಿಯ ದ್ರಾವಿಡ್ ಮತ್ತು ಜಂಬೋ ಕುಂಬ್ಳೆ ಬಿಜೆಪಿ ಆಹ್ವಾನಕ್ಕೆ 'ಒಲ್ಲೆ' ಎಂದಿದ್ದಾರೆ.
ಮತದಾನ ನಮ್ಮ ಹಕ್ಕು, ವೋಟಿಂಗ್ ಪರ ದ್ರಾವಿಡ್ ಬ್ಯಾಟಿಂಗ್!
ಕುಂಬ್ಳೆ ಅವರ ಆಪ್ತ ಮೂಲಗಳ ಪ್ರಕಾರ ಬಿಜೆಪಿ ಈ ಇಬ್ಬರನ್ನೂ ಪಕ್ಷಕ್ಕೆ ಸೇರುವಂತೆ ಸಾಕಷ್ಟು ಸಾರಿ ಮಾತುಕತೆ ನಡೆಸಿದೆ. ಆದರೆ ಇಬ್ಬರೂ ಬಿಜೆಪಿ ಆಮಂತ್ರಣವನ್ನು ವಿನಮೃವಾಗಿಯೇ ತಿರಸ್ಕರಿಸಿದ್ದಾರೆ.
ಗೂಗ್ಲಿ ಮಾಂತ್ರಿಕ, ವಿಶ್ವ ವಿಖ್ಯಾತ ಸ್ಪಿನ್ನರ್ ಅನಿಲ್ ಕುಂಬ್ಳೆ ಮತ್ತು ಗೋಡೆ ಖ್ಯಾತಿಯ ಅಪೂರ್ವ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಅವರಿಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಗ್ರಾಮೀಣ ಭಾಗಗಳಲ್ಲೂ ಇವರನ್ನು ಯೂತ್ ಐಕಾನ್ ಎಂಬಂತೆ ನೋಡುವ ಸಾಕಷ್ಟು ಜನರಿದ್ದಾರೆ. ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿಯ ತೂಕವನ್ನು ಹೆಚ್ಚಿಸಿಕೊಳ್ಳುವ ಯೋಚನೆ ವೈಫಲ್ಯ ಕಂಡಂತಾಗಿದೆ.
ಪ್ರಧಾನಿ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅತ್ಯಂತ ಸೂಕ್ತ ವ್ಯಕ್ತಿ!