ಒಬ್ಬರು ಹಾಲಿ, ಮೂವರು ಮಾಜಿ ಸಿಎಂಗಳ ಹಣೆ ಬರಹ ಏನಾಗುತ್ತೆ?
ಬೆಂಗಳೂರು, ಮೇ 14: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೂವರು ಮಾಜಿ ಮುಖ್ಯಮಂತ್ರಿಗಳ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ.
ಈ ಹಿಂದೆ 2008ರಲ್ಲಿ ಎನ್.ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಹೀಗೆ ಮೂವರು ಮಾಜಿ ಮುಖ್ಯಮಂತ್ರಿಗಳು ಏಕಕಾಲಕ್ಕೆ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ದರು. ಆಗ ಧರ್ಮಸಿಂಗ್ ವಿಧಾನಸಭೆಗೆ ಪುನರಾಯ್ಕೆಯಾಗಲಿಲ್ಲ, ಮಾತ್ರವಲ್ಲ, ರಾಜಕೀಯ ಜೀವನದ ಮೊದಲ ಸೋಲು ಅನುಭವಿಸಿದ್ದರು.
ಕರ್ನಾಟಕ ವಿಧಾನಸಭೆ ಇತಿಹಾಸ ನಿಮಗೆಷ್ಟು ಗೊತ್ತು?
ಈ ಬಾರಿ ಹಾಲಿ ಮುಖ್ಯಮಂತ್ರಿ ಕಾಂಗ್ರೆಸ್ನಿಂದ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಜೆಡಿಎಸ್ನಿಂದ ಎಚ್.ಡಿ.ಕುಮಾರಸ್ವಾಮಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.ಚಾಮುಂಡೇಶ್ವರಿ ಹಾಗೂ ಬದಾಮಿಯಿಂದ ಸಿದ್ದರಾಮಯ್ಯ, ರಾಮನಗರ ಹಾಗೂ ಚನ್ನಪಟ್ಟಣದಿಂದ ಕುಮಾರಸ್ವಾಮಿ, ಶಿಕಾರಿಪುರದಿಂದ ಯಡಿಯೂರಪ್ಪ ಹಾಗೂ ಹುಬ್ಬಳ್ಳಿ ಸೆಂಟ್ರಲ್ನಿಂದ ಜಗದೀಶ್ ಶೆಟ್ಟರ್ ಕಣದಲ್ಲಿದ್ದಾರೆ.
ಯಾರೇ ಗೆದ್ದರೂ ಹಾದಿ ಸುಗಮವಲ್ಲ: ದಿವಂಗತ ದೇವರಾಜ ಅರಸು ನಂತರ ಐದು ವರ್ಷಗಳ ಸಂಪೂರ್ಣ ಆಡಳಿತ ನಡೆಸಿದ ಸಾಧನೆ ಮಾಡಿರುವ ಸಿದ್ದರಾಮಯ್ಯ ಅವರಿಗೆ ವಿಧಾನಸಭೆ ಮರುಪ್ರವೇಶ ಅತ್ಯಂತ ನಿರ್ಣಾಯಕ. ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿಯಾಗಿರುವ ಅವರಿಗೆ ಬದಾಮಿ ಮತ್ತು ಚಾಮುಂಡೇಶ್ವರಿ ಎರಡರಲ್ಲೂ ಗೆಲುವು ಸುಲಭದ ತುತ್ತಲ್ಲ ಎನ್ನಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವುದು ಸಿದ್ದರಾಮಯ್ಯ ಹಾಗೂ ಅವರ ಮಾಜಿ ಸ್ನೇಹಿತ ಜಿ.ಟಿ.ದೇವೇಗೌಡ ನಡುವಣ ಸ್ಪರ್ಧೆ.
ಗುಪ್ತಚರ ಇಲಾಖೆ: ಕಾಂಗ್ರೆಸಿಗೆ 90, ಸಿಎಂಗೆ ಎರಡೂ ಕಡೆ ಸೋಲು?
ಸಿದ್ದರಾಮಯ್ಯ ಅವರಿಗೆ ಕಷ್ಟದ ಕಾಲದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಕೈಬಿಟ್ಟಿಲ್ಲ ಎಂಬ ಉದಾಹರಣೆ ಇರುವುದರಿಂದ ಅದೇ ಕ್ಷೇತ್ರಕ್ಕೆ ಮರಳಿದ್ದಾರೆ. ಅಲ್ಲಿ ಮತ್ತೊಮ್ಮೆ ಅದೃಷ್ಟ ಖುಲಾಯಿಸಿದರೆ ಮತ್ತೊಂದು ಬಾರಿ ಸಿಎಂ ಆಗುವುದು ಅವರ ಹಂಬಲ. ಆದರೆ ಸಂಪೂರ್ಣ ಬಹುಮತ ಬಂದರೆ ಮಾತ್ರ ಅದು ಸಾಧ್ಯ ಎಂಬುದು ಸ್ವತಃ ಅವರಿಗೇ ಗೊತ್ತಿರುವ ವಿಚಾರ.
ಜೆಡಿಎಸ್ನ ಮುಖ್ಯಮಂತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರು ಸ್ವತಃ ಎರಡು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿರುವುದು ಏಕೆ ಎಂಬುದು ಸುಸ್ಪಷ್ಟ. ತಾವು ಸ್ಪರ್ಧಿಸುತ್ತಿರುವ ಕ್ಷೇತ್ರ ಹಾಗೂ ಕ್ಷೇತ್ರದ ಆಚೆ ರಾಜಕೀಯ ವೈರಿಗಳು ಯಾವ ದಾಳ ಉರುಳಿಸುತ್ತಾರೆ ಎಂಬ ಭಯ ಅವರಿಗೆ ಇದ್ದೇ ಇದೆ. ಅದೇ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರ ಮತ್ತು ಚನ್ನಪಟ್ಟಣದಲ್ಲೂ ಸ್ಪರ್ಧಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂಬ ವಾತಾವರಣ ಇರುವುದರಿಂದ ಕುಮಾರಸ್ವಾಮಿ ಗೆಲುವು ಜೆಡಿಎಸ್ಗೆ ತುಂಬಾ ಮುಖ್ಯ.
ವಿಶ್ಲೇಷಣೆ : ಸಿದ್ದರಾಮಯ್ಯ ಹಾಗೆ ಹೇಳಿದ್ದಾದರೂ ಏಕೆ? ಕಾರಣಗಳು ಬೇಕೆ?
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರು 1999ರ ಚುನಾವಣೆ ಬಿಟ್ಟರೆ ಸೋಲು ಕಂಡಿಲ್ಲ. ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸುತ್ತಾರೆ ಎಂಬ ವಿಚಾರದಲ್ಲಿ ಬಹುಶ ವಿರೋಧ ಪಕ್ಷಗಳಿಗೂ ಸಂಶಯ ಇಲ್ಲ. ಆದರೆ 'ಕಳೆದುಕೊಂಡ ಜಾಗದಲ್ಲೇ ಹುಡುಕಬೇಕು' ಎಂಬ ಅವರ ಸಂಕಲ್ಪ ಈಡೇರುತ್ತದೆಯೇ ಎಂಬುದು ಸದ್ಯದ ಕುತೂಹಲ. ಬಿಜೆಪಿಗೆ ಪೂರ್ಣ ಪ್ರಮಾಣದ ಸಂಖ್ಯಾಬಲ ದಕ್ಕಿದರೆ ಮಾತ್ರ ಯಡಿಯೂರಪ್ಪ ಕನಸು ನನಸಾಗಲು ಸಾಧ್ಯ. ಒಂದು ವೇಳೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಸಿಎಂ ಗದ್ದುಗೆ ನಿರ್ಧಾರ ಅನಿರೀಕ್ಷಿತವೇ ಆಗಿರುತ್ತದೆ.
ಗೆದ್ದರೂ ಸಿಎಂ ಆಗುವ ಸಾಧ್ಯತೆ ಇಲ್ಲ, ಹಾಗೇನಾದರೂ ಆದರೆ ಅದು ಅನಿರೀಕ್ಷಿತ ಎಂದು ಸ್ವತಃ ನಂಬಿ ಕಣಕ್ಕೆ ಇಳಿಯುತ್ತಿರುವ ಬಿಜೆಪಿಯ ಮತ್ತೊಬ್ಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರನೇ ಬಾರಿ ವಿಧಾನಸಭೆ ಪ್ರವೇಶಕ್ಕೆ ಅಣಿಯಾಗುತ್ತಿದ್ದಾರೆ. 'ಈ ಬಾರಿ ಗೆಲುವು ಕಷ್ಟ' ಎಂಬ ವಾತಾವರಣದಲ್ಲೇ ಆರು ಬಾರಿ ಗೆದ್ದಿರುವ ಶೆಟ್ಟರ್, ಅದೃಷ್ಟವಂತ ರಾಜಕಾರಣಿ ಎಂದೇ ಎಲ್ಲರೂ ಹೇಳುತ್ತಾರೆ. ಒಟ್ಟಾರೆ ನಾಲ್ವರು ಒಬ್ಬ ಹಾಲಿ ಮತ್ತು ಮೂವರು ಮಾಜಿ ಸಿಎಂಗಳ ಪೈಕಿ ಮೂವರು ಮಾಜಿ ಸಿಎಂಗಳ ಸೋಲು-ಗೆಲುವು ಆಯಾ ಪಕ್ಷಗಳಿಗೆ ತುಂಬಾ ಮುಖ್ಯ. ಹೀಗಾಗಿ ಈ ಸಲದ ವಿಧಾನಸಭೆ ಚುನಾವಣೆ ಈ ದೃಷ್ಟಿಯಿಂದಲೂ ವಿಶಿಷ್ಟ ಎನಿಸಿಕೊಂಡಿದೆ.