ಕನ್ನಡ ದಿನಪತ್ರಿಕೆಗಳು ಕಂಡಂತೆ 'ಕರ್ನಾಟಕ ಜನಾದೇಶ'
ಬೆಂಗಳೂರು, ಮೇ 16: ಅಂತೂ ಇಂತೂ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ನಿನ್ನೆ ಹೊರಬಿದ್ದಿದೆ. ಬಹು ದಿನದಿಂದ ಕುತೂಹಲದಿಂದ ನಿರುಕಿಸುತ್ತಿದ್ದ ದಿನ ಬಂದಿದೆ. ಇದೀಗ ಏನಿದ್ದರೂ ಸರ್ಕಾರ ರಚನೆಯ ಕಸರತ್ತು, ತೆರೆಮರೆಯ ಕರಾಮತ್ತು!
ನಿನ್ನೆಯೆಲ್ಲ ಟಿವಿ ಮುಂದೆ ಕೂತು ಫಲಿತಾಂಶವನ್ನು ಕಣ್ತುಂಬಿಸಿಕೊಂಡವರೂ ಇಂದು ಬೆಳಿಗ್ಗೆ ಕಾಯುತ್ತಿದ್ದುದು ವೃತ್ತ ಪತ್ರಿಕೆಗಾಗಿ. ಸವಿವರ ಮಾಹಿತಿಗಾಗಿ, ಸಖಕ್ ವಿಶ್ಲೇಷಣೆಗಾಗಿ ವೃತ್ತ ಪತ್ರಿಕೆಯನ್ನು ಓದಿದರೇ ಸಮಾಧಾನ ಎಂದುಕೊಂಡ ಹಲವರಿಗೆ ಇಂದು ಯಾವ್ಯಾವ ಪತ್ರಿಕೆಗಳು ಚುನಾವಣಾ ಫಲಿತಾಂಶವನ್ನು ಹೇಗೆ ವಿಶ್ಲೇಷಿಸಿವೆ ಎಂಬ ಕುತೂಹಲವಿದ್ದಿರಬಹುದು.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
104 ಸ್ಥಾನಗಳಲ್ಲಿ ಬಿಜೆಪಿ, 78 ಸ್ಥಾನಗಳಲ್ಲಿ ಕಾಂಗ್ರೆಸ್, 38 ಸ್ಥಾನಗಳಲ್ಲಿ ಜೆಡಿಎಸ್ ಮತ್ತು 2 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದ್ದು, ಬಹುಮತ ಯಾವ ಪಕ್ಷಕ್ಕೂ ಬಂದಿಲ್ಲ. ಇತ್ತ ಬಿಜೆಪಿ ಹೇಗಾದರೂ ಮಾಡಿ ಸರ್ಕಾರ ರಚಿಸುವ ಕಸರತ್ತು ನಡೆಸುತ್ತಿದ್ದರೆ, ಅತ್ತ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಕನಸು ಕಾಣುತ್ತಿವೆ. ರಾಜ್ಯದ ಈ ಅತಂತ್ರ ಸ್ಥಿತಿಯನ್ನು ಕನ್ನಡದ ವೃತ್ತ ಪತ್ರಿಕೆಗಳು ವಿವರಿಸಿದ್ದು ಹೀಗೆ...
'ಹಂಗ್' ಆಗಿ ಕಿಂಗ್ ಯಾರು
'ಹಂಗ್' ಆಗಿ ಕಿಂಗ್ ಯಾರು ಎಂಬುದು ವಿಜಯ ಕರ್ನಾಟಕ ನೀಡಿದ ಅರ್ಥವತ್ತಾದ ತಲೆಬರಹ. ಇಂದಿನ ಹೆಡ್ ಲೈನ್ ಆಫ್ ದಿ ಡೇ ವಿಜಯ ಕರ್ನಾಟಕದ್ದೇ. 'ಬಿಜೆಪಿ ಅತಿ ದೊಡ್ಡ ಪಕ್ಷವಾದರೂ ಅಧಿಕಾರ ಅತಂತ್ರ, ಸೋಲು ಭಾಗ್ಯ ಕಂಡ ಕಾಂಗ್ರೆಸ್ ನಿಂದ ಜೆಡಿಎಸ್ ದೋಸ್ತಿ, ಎಚ್ ಡಿಕೆಗೆ ಸಿಎಂ ಪಟ್ಟ, ಸರ್ಕಾರ ರಚನೆಗೆ ಹಕ್ಕು ಮಂಡನೆ, ಬಿಜೆಪಿಯಿಂದಲೂ ಹಕ್ಕು ಸ್ಥಾಪನೆ: ಅಧಿಕಾರಕ್ಕಾಗಿ ತಂತ್ರ.' ಫಲಿತಾಂಶವನ್ನು ವಿಜಯ ಕರ್ನಾಟಕ ಪತ್ರಿಕೆ ವಿವರಿಸಿದ್ದು ಹೀಗೆ.
ರಾಜಭವನ ರಹಸ್ಯ, ಗದ್ದುಗೆ ಸ್ವಾರಸ್ಯ
ಸದ್ಯಕ್ಕೆ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ ಎಂಬುದನ್ನು ವಿಜಯವಾಣಿ, 'ರಾಜಭವನ ರಹಸ್ಯ, ಗದ್ದುಗೆ ಸ್ವಾರಸ್ಯ' ಎಂಬ ತಲೆಬರಹದೊಂದಿಗೆ ವಿವರಿಸಿದೆ. 'ಅತಂತ್ರ ಫಲಿತಾಂಶ, ಬಿಜೆಪಿ ಅತಿದೊಡ್ಡ ಪಕ್ಷ, ಅಧಿಕಾರಕ್ಕಾಗಿ 'ಕೈ'ಜೋಡಿಸಿದ ಜೆಡಿಎಸ್, ಸಮ್ಮಿಶ್ರ ಸರ್ಕಾರಕ್ಕೆ ಸರ್ಕಸ್, ಎಚ್ಡಿಕೆ ಸಿಎಂ, ಪರಂ ಡಿಸಿಎಂ, ಕುರ್ಚಿಗೆ ಒಂದೇ ಮೆಟ್ಟಿಲು' ಇದು ಫಲಿತಾಂಶದ ಕುರಿತು ವಿಜಯವಾಣಿ ವಿಶ್ಲೇಷಣೆ.
ತೀರ್ಪು ಅತಂತ್ರ. ಸರ್ಕಾರ ರಚನೆಗೆ ತಂತ್ರ
ತೀರ್ಪು ಅತಂತ್ರ. ಸರ್ಕಾರ ರಚನೆಗೆ ತಂತ್ರ ಎಂದು ಎಂದಿನಂತೆ ಸರಳ ತಲೆಬರಹ ನೀಡಿದೆ ಪ್ರಜಾವಾಣಿ. ರಾಜ್ಯಪಾಲರ ಅಂಗಳ ತಲುಪಿದ ಹಕ್ಕು ಮಂಡನೆ ಬೇಡಿಕೆ, 12 ವರ್ಷಗಳ ಬಳಿಕ ಜೆಡಿಎಸ್ ಕಾಂಗ್ರೆಸ್ ಮೈತ್ರಿ, ಪ್ರಯತ್ನ ಮುಂದುವರಿಸಿರುವ ಬಿಜೆಪಿ ಎಂದು ಇಡೀ ಫಲಿತಾಂಶದ ಸಾರವನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಿದೆ ಪ್ರಜಾವಾಣಿ ಪತ್ರಿಕೆ.
ಜನಾದೇಶಕ್ಕೆ ನಾಮ
ಜನಾದೇಶಕ್ಕೆ ನಾಮ ತ್ರಿಶಂಕು ವಿಧಾನಸಭೆ ಎಂದು ಫಲಿತಾಂಶವನ್ನು ವಿವರಿಸಿದೆ ಸಂಯುಕ್ತ ಕರ್ನಾಟಕ. ಕುಸ್ತಿ ನಂತರ ಕಾಂಗ್ರೆಸ್-ಜೆಡಿಎಸ್ ದೋಸ್ತಿ, ಎಚ್ ಡಿ ಕೆ ನೇತೃತ್ವದ ಸರ್ಕಾರ ರಚನೆಗೆ ಯತ್ನ, ರಾಜ್ಯಪಾಲರತ್ತ ಎಲ್ಲರ ಚಿತ್ತ ಎಂದು ಸಂಪೂರ್ಣ ಫಲಿತಾಂಶದ ಬೆಳವಣಿಗೆಯನ್ನು ಮೂರು ಸಾಲಿನಲ್ಲಿ ವಿವರಿಸಿದೆ ಸಂಯುಕ್ತ ಕರ್ನಾಟಕ.
ಈಗ ಗವರ್ನರೇ ಕಿಂಗ್ ಮೇಕರ್!
ಈಗ ಗವರ್ನರೇ ಕಿಂಗ್ ಮೇಕರ್ ಎಂದು ಫಲಿತಾಂಶವನ್ನು ವಿವರಿಸಿದೆ ಕನ್ನಡ ಪ್ರಭ. ರಾಜ್ಯಪಾಲರು ಸರ್ಕಾರ ರಚನೆಗೆ ಮೊದಲು ಯಾರನ್ನು ಆಹ್ವಾನಿಸುತ್ತಾರೆ ಎಂಬುದು ಈಗಿರುವ ಕುತೂಹಲದ ಪ್ರಶ್ನೆಯಾದ್ದರಿಂದ ಸದ್ಯಕ್ಕೆ ಕರ್ನಾಟಕದಲ್ಲಿ ರಾಜ್ಯಪಾಲರೇ ಕಿಂಗ್ ಮೇಕರ್ ಎಂದಿದೆ ಕನ್ನಡಪ್ರಭ. ಕರ್ನಾಟಕ ಚುನಾವಣೆ ಫಲಿತಾಂಶ ಪ್ರಕಟ, ವಿಧಾನಸಭೆ ಅತಂತ್ರ, ಬಿಜೆಪಿ ಅತಿದೊಡ್ಡ ಪಕ್ಷ, ಕಾಂಗ್ರೆಸ್ ನಂ 2. ಜೆಡಿಎಸ್ ಗೆ ಮೂರನೇ ಸ್ಥಾನ. ಜೆಡಿಎಸ್ ಗೆ ಕಾಂಗ್ರೆಸ್ ದಿಢೀರ್ ಬೆಂಬಲ, ಹೈಡ್ರಾಮಾ, ಸರ್ಕಾರ ರಚನೆಗೆ ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಹಕ್ಕು ಮಂಡನೆ. ಈಗ ಗವರ್ನರೇ ಕಿಂಗ್ ಮೇಕರ್! ಕನ್ನಡ ಪ್ರಭ ವಿಶ್ಲೇಷಣೆ.
ಬಿಜೆಪಿಗೆ ಜನಮತ, ಕಾಂಗ್ರೆಸ್ +ಜೆಡಿಎಸ್ ಬಹುಮತ
ಬಿಜೆಪಿಗೆ ಜನಮತ, ಕಾಂಗ್ರೆಸ್ +ಜೆಡಿಎಸ್ ಬಹುಮತ ಇದು ವಿಶ್ವವಾಣಿ ನೀಡಿದ ತಲೆಬರಹ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚಾಮುಂಡೇಶ್ವರಿಯಲ್ಲಿ ಹೀನಾಯ ಸೋಲು, ಬಾದಾಮಿಯಲ್ಲಿ ಪ್ರಯಾಸದ ಗೆಲುವು, ಎರಡೂ ಕಡೆ ಗೆದ್ದ ಕುಮಾರಸ್ವಾಮಿ, ಸರಕಾರದ ಸಾರಥ್ಯ ವಹಿಸಲು ಬಯಸದೇ ಬಂದ ಭಾಗ್ಯ, ಡಜನ್ ಸಚಿವರು, 25 ಕ್ಕೂ ಹೆಚ್ಚು ಹೆಚ್ಚು ಶಾಸಕರಿಗೆ ಸೋಲು, ಅತೀ ದೊಡ್ಡ ಪಕ್ಷ ಬಿಜೆಪಿ, ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟದಿಂದ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದನೆ, ರಾಜ್ಯಪಾಲರ ಅಂಗಳದಲ್ಲಿ ಚೆಂಡು... ಇದು ವಿಶ್ವವಾಣಿ ವಿಶ್ಲೇಷಣೆ.
ಬಿಜೆಪಿ ಹಕ್ಕು, 'ಕೈ'ಹಿಡಿದ 'ದಳ'ಪತಿ
ಬಿಜೆಪಿ ಹಕ್ಕು, 'ಕೈ'ಹಿಡಿದ 'ದಳ'ಪತಿ ಎಂಬುದು ಉದಯವಾಣಿ ನೀಡಿದ ಅರ್ಥವತ್ತಾದ ಶೀರ್ಷಿಕೆ. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ಕರಾವಳಿಯಲ್ಲಿ ಕಾಂಗ್ರೆಸ್ ಧೂಳಿಪಟ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬಿಎಸ್ ವೈ, ಜೆಡಿಎಸ್ ಗೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ ಇದು ಉದಯವಾಣಿಯ ಸಂಕ್ಷಿಪ್ತ ವಿಮರ್ಶೆ.
ಅರಳಿದ ಕಮಲ ಅರಗದ ತಳಮಳ, ಕೈ ದಳ ದಾಳ
'ಅರಳಿದ ಕಮಲ ಅರಗದ ತಳಮಳ, ಕೈ ದಳ ದಾಳ' ಎಂಬ ಶೀರ್ಷಿಕೆಯೊಂದಿಗೆ ವಿಧಾನಸೌಧದ ಮುಂದೊಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟಿದೆ ಹೊಸದಿಗಂತ ಪತ್ರಿಕೆ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬಿಎಸ್ ವೈ, ಬೇಷರತ್ ಆಗಿ ತೆಗೆ ಹೊತ್ತ ಕೈ ಸರ್ಕಾರ ರಚನೆಗೂ ಅವಕಾಶ ಕೋರಿಕೆ ಎಂದು ಸದ್ಯದ ಅತಂತ್ರ ಸನ್ನಿವೇಶವನ್ನು ಹೊಸ ದಿಗಂತ ವಿವರಿಸಿದೆ.
ಅತಂತ್ರ ವಿಧಾನಸಭೆ
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಭಾಗ್ಯ ಎಂಬ ಕಿಕ್ಕರ್ ನೊಂದಿಗೆ 'ಅತಂತ್ರ ವಿಧಾನಸಭೆ' ಎಂಬ ಶೀರ್ಷಿಕೆ ನೀಡಿದೆ ವಾರ್ತಾ ಭಾರತಿ. ಗೆದ್ದು ಸೋತ ಬಿಜೆಪಿ, ಕಾಂಗ್ರೆಸ್ ಗೆ ತೀವ್ರ ಮುಖಭಂಗ, ಜೆಡಿಎಸ್ ನಿರ್ಣಾಯಕ ಎಂದು ಅಪ್ರಸ್ತುತ ರಾಜಕೀಯ ಸನ್ನಿವೇಶವನ್ನು ವಾರ್ತಾಭಾರತಿ ವಿವರಿಸಿದೆ.