ಕಾಂಗ್ರೆಸ್ಸಿನ ಆಪದ್ಬಾಂಧವ ಡಿಕೆಶಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್?!
Recommended Video
ಬೆಂಗಳೂರು, ಮೇ 23: ಕಾಂಗ್ರೆಸ್ ಪಾಲಿಗೆ ಡಿಕೆ ಶಿವಕುಮಾರ್ ಅಂದ್ರೆ ಆಪದ್ಬಾಂಧವ. ಅಷ್ಟೇ ಅಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಡಿಕೆಶಿ ಇಲ್ಲದ ಕರ್ನಾಟಕ ಕಾಂಗ್ರೆಸ್ ಅನ್ನು ಊಹಿಸುವುದಕ್ಕೂ ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಿಪ್ಪ ಡಿಕೆಶಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್ ನೀಡಲು ಸಕಲ ಸಿದ್ಧತೆ ನಡೆಸಿದೆಯಾ? ಗುಜರಾತ್ ರಾಜ್ಯ ಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆದು ನಿಂತ ಗಟ್ಟಿಗ ಡಿಕೆಶಿ, ಇದೀಗ ಕರ್ನಾಟಕ ಚುನಾವಣೆಯ ನಂತರವೂ ಕಾಂಗ್ರೆಸ್, ಜೆಡಿಎಸ್ ಶಾಸಕರ್ಯಾರೂ ಕದಲದಂತೆ ರೆಸಾರ್ಟ್ ನಲ್ಲೇ ದಿಗ್ಬಂಧನ ಹಾಕಿದ್ದು ಇದೇ ಡಿಕೆಶಿ.
ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಬಾಯಿ ಬಿಟ್ಟ ಡಿಕೆಶಿ, ರೋಷನ್ ಬೇಗ್
ಒಟ್ಟಿನಲ್ಲಿ ಅನ್ನ ಹಾಕಿದ ಕಾಂಗ್ರೆಸ್ಸಿಗೆ ಯಥೇಚ್ಛವಾಗಿ ಋಣಸಂದಾಯ ಮಾಡುತ್ತಿರುವ ಡಿಕೆಶಿಯವರ ಈ ಪರಿ ನಿಯತ್ತಿಗೆ ಕಾಂಗ್ರೆಸ್ ಹೈಕಮಾಂಡ್ ಭರ್ಜರಿ ಗಿಫ್ಟ್ ನೀಡಲು ಎಲ್ಲಾ ಸಿದ್ಧತೆ ನಡೆಸಿದೆ. ಅಷ್ಟಕ್ಕೂ ಏನಿದು ಗಿಫ್ಟ್?...
ಕೆಪಿಸಿಸಿ ಅಧ್ಯಕ್ಷ ಹುದ್ದೆ?
ಕರ್ನಾಟಕದ ರಾಜಕಾರಣದಲ್ಲಿ ಬಹಳ ಪ್ರಮುಖ ಸ್ಥಾನ ವಹಿಸಿದ ದೊಡ್ಡನಹಳ್ಳಿ ಕೆಂಪೇಗೌಡ ಶಿವಕುಮಾರ್ ಅಲಿಯಾಸ್ ಡಿಕೆಶಿ ಅವರಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು(ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ-ಕೆಪಿಸಿಸಿ) ನೀಡುವ ಕುರಿತು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸುತ್ತಿದೆ. ಎಲ್ಲಾ ನಾಯಕರನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ತಾಕತ್ತಿರುವ ಏಕೈಕ ನಾಯಕ ಅಂದ್ರೆ ಅದು ಡಿಕೆಶಿ. ತಮ್ಮ ಸಾಮಾರ್ಥ್ಯ ರಾಜ್ಯದ ಗಡಿ ದಾಟಿಯೂ ವ್ಯಾಪಿಸಿದೆ ಎಂಬುದನ್ನು ಗುಜರಾತ್ ರಾಜ್ಯಸಭಾ ಚುನಾವಣೆಯ ಸಮಯದಲ್ಲೇ 56 ವರ್ಷದ ಡಿಕೆಶಿ ತೋರಿಸಿಕೊಟ್ಟಿದ್ದರು. ಆದ್ದರಿಂದ ಈ ಹುದ್ದೆಗೆ ಡಿಕೆಶಿಯವರನ್ನೇ ಆಅರಿಸಲು ಹೈಕಮಾಂಡ್ ಚಿಂತನೆ ನಡೆಸುತ್ತಿದೆ.
ಕುತೂಹಲ ಕೆರಳಿಸಿದ ಆನಂದ್ ಸಿಂಗ್ -ಡಿಕೆಶಿ ಭೇಟಿ
ಕೆಪಿಸಿಸಿ ಅಧ್ಯಕ್ಷ ಸ್ಥಾನದೊಂದಿಗೆ ಮಂತ್ರಿಸ್ಥಾನ
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನಷ್ಟೇ ಅಲ್ಲದೆ, ಇಂಧನ ಸಚಿವ ಸ್ಥಾನವನ್ನೂ ಅವರಿಗೇ ನೀಡಲು ಹೈಕಮಾಂಡ್ ಚಿಂತಿಸಿದೆ ಎಂಬುದು ಇನ್ನೊಂದು ಮಾಹಿತಿ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಡಿಕೆಶಿ 2013 ರಲ್ಲೂ ಇದೇ ಕ್ಷೇತ್ರದಿಂದ ಗೆದ್ದು ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅವರು ಉಪಮುಖ್ಯಮಂತ್ರಿಯಾಗಬಲ್ಲಷ್ಟು ಸಮರ್ಥರೇ ಆಗಿದ್ದರೂ, ಸದ್ಯಕ್ಕೆ ರಾಜ್ಯದಲ್ಲಿ ದಲಿತ ಉಪಮುಖ್ಯಮಂತ್ರಿಯ ಸದ್ದು ಎದ್ದಿರುವುದರಿಂದ ಜಿ ಪರಮೇಶ್ವರ್ ಅವರನ್ನು ಆ ಸ್ಥಾನಕ್ಕೆ ಆರಿಸಲಾಗಿದ್ದು, ಡಿಕೆಶಿ ಇಂಧನ ಸಚಿವರಾಗಿ ಮುಂದುವರಿಯುವ ಸಾಧ್ಯತೆ ಇದೆ.
ಗುಜರಾತ್ ರಾಜ್ಯಸಭೆ ಚುನಾವಣೆಯ ನಿಜವಾದ ಹೀರೋ!
2017 ರ ಆಗಸ್ಟ್ ನಲ್ಲಿ ನಡೆದ ಗುಜರಾತ್ ರಾಜ್ಯಸಭೆ ಚುನಾವಣೆಯ ನಿಜವಾದ ಹೀರೋ ಅಂದ್ರೆ ಡಿ ಕೆ ಶಿವಕುಮಾರ್ ಎಂದು ಅಂದಿನ ವೃತ್ತಪತ್ರಿಕೆಗಳು ಬಣ್ಣಿಸಿದ್ದವು. ಗುಜರಾತ್ ವಿಧಾನ ಪರಿಷತ್ತಿನ 44 ಸದಸ್ಯರನ್ನು ಬಿಡದಿ ಬಳಿಯ ತಮ್ಮದೇ ಒಡೆತನದ ಈಗಲ್ಟನ್ ದಿ ಗಾಲ್ಫ್ ರೆಸಾರ್ಟ್ ನಲ್ಲಿ ಇರಿಸಿಕೊಂಡಿದ್ದ ಡಿಕೆಶಿ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆದು ನಿಂತಿದ್ದರು. ಇದಕ್ಕೆ ಪ್ರತಿಯಾಗಿ ಅವರು ಐಟಿ ದಾಳಿ ಎದುರಿಸಬೇಕಾಯಿತಾದರೂ ಇವೆಲ್ಲ ಡಿಕೆಶಿಯವರನ್ನು ಅಲ್ಲಾಡಿಸಲೂ ಇಲ್ಲ.
ಕರ್ನಾಟಕದ ರಾಜಕೀಯ ಚಿತ್ರಣ ಬದಲಿಸಿದರು
ಮೇ 15 ರಂದು ಹೊರಬಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಚಿತ್ರಣವನ್ನೇ ಬದಲಾಯಿಸಿದವರು ಡಿಕೆಶಿ. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ(104)ಗೆ ಮ್ಯಾಜಿಕ್ ನಂಬರ್ ಗೆ ಅಗತ್ಯವಿದ್ದ 12 ಸ್ಥಾನಗಳನ್ನು ಪಡೆಯುವುದಕ್ಕೆ ಸಾಧ್ಯವೇ ಆಗದಂತೆ ಕಾಂಗ್ರೆಸ್-ಜೆಡಿಎಸ್ ನಾಯಕರನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದವರು ಡಿಕೆಶಿ.
ಜನಪ್ರಿಯ ಸರ್ಕಾರ, ನಂ.1 ಸರ್ಕಾರ ಎಂದೆಲ್ಲ ಪ್ರಚಾರ ಮಾಡಿದ್ದ ಸಿದ್ದು ಸರ್ಕಾರ ಕೇವಲ 78(122ರಿಂದ) ಸ್ಥಾನಕ್ಕೆ ಕುಸಿದಾಗಲೂ, ಜೆಡಿಎಸ್(38) ಮತ್ತು 2 ಪಕ್ಷೇತರ ಶಾಸಕರ ಜೊತೆ ಸೇರಿ ಸರ್ಕಾರ ರಚಿಸಲು ಕಾಂಗ್ರೆಸ್ ಮುಂದಾಗುತ್ತಿದ್ದಂತೆಯೇ ಕಾಂಗ್ರೆಸ್ಸಿನ ಹೀನಾಯ ಪ್ರದರ್ಶನದ ಬೇಸರವನ್ನೆಲ್ಲ ಮರೆತು ಮತ್ತೆ ಹುರುಪನ್ನು ಮೈದೂಡಿಸಿಕೊಂಡವರು ಡಿಕೆಶಿ.
ನಾಪತ್ತೆಯಾಗಿದ್ದ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ಮತ್ತು ಆನಂದ್ ಸಿಂಗ್ ಅವರನ್ನು ವಿಧಾನಸೌಧದೆದುರು ಕೊನೇ ಕ್ಷಣದ ವರೆಗೂ ಕಾದು, 'ವಿಪ್' ಪತ್ರವನ್ನು ಅವರ ಜೇಬಿಗೆ ತುರುಕಿದವರು ಇದೇ ಡಿಕೆಶಿ! ಹೀಗೇ ಕಾಂಗ್ರೆಸ್ ಪಾಲಿಗೆ ಆಪದ್ಬಾಂಧವ ಎಂದೆನ್ನಿಸಿರುವ ಡಿಕೆಶಿಯವರಿಗೆ ಕಾಂಗ್ರೆಸ್ ಕೆಪಿಸಿ ಅಧ್ಯಕ್ಷ ಹುದ್ದೆ ಮತ್ತು ಅವರಿಷ್ಟಪಟ್ಟ ಮಂತ್ರಿ ಪದವಿ ಎರಡನ್ನೂ ನೀಡಲು ಚಿಂತನೆ ನಡೆಸಿದ್ದು, ಅವರಿಗೆ ಸದ್ಯದಲ್ಲೇ ಈ ಎರಡು ಗಿಫ್ಟ್ ಸಿಗುವ ಸಾಧ್ಯತೆ ಇದೆ.