ಎಚ್ಡಿಕೆ ಮುಖ್ಯಮಂತ್ರಿಯಾದ್ರೆ, ಎಂಬ ಪ್ರಶ್ನೆಗೆ ಜಮೀರ್ ಕೊಟ್ಟ ಉತ್ತರ
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಹಿನ್ನೆಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಸಜ್ಜಾಗುತ್ತಿದೆ. ಒಂದು ವೇಳೆ 'ಕೈ' ಮತ್ತು 'ದಳ' ಒಂದಾದ್ರೆ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಪಕ್ಷ ಬಹಿರಂಗವಾಗಿ ಹೇಳಿದೆ.
ಇದೆಲ್ಲ ಒಂದು ಕಡೆ ಬಿಟ್ರೆ, ಮತ್ತೊಂದೆಡೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ರೆಬೆಲ್ ಶಾಸಕರ ಗತಿಯೇನು ಎಂಬುದು ಪ್ರಶ್ನೆಯಾಗಿದೆ. ಜೆಡಿಎಸ್ ಪಕ್ಷ ಹಾಗೂ ಹೆಚ್.ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನ ಬಾಯಿಗೆ ಬಂದ ಹಾಗೆ ಬೈಯ್ದಿದ್ದ ಜಮೀರ್, ಹಳೆ ದೋಸ್ತಿಯ ಕೈ ಕೆಳಗೆ ಕೆಲಸ ಮಾಡಬೇಕಾಗುತ್ತೆ ಎಂಬ ಚಿಂತೆ.
ಜಮೀರ್ ಹಣೆಯಲು ಹೋಗಿ ಠೇವಣಿ ಕಳೆದುಕೊಂಡ ಕುಮಾರಸ್ವಾಮಿ!
''ಹಳೇ ಆಫೀಸ್ ನಲ್ಲಿ ಮ್ಯಾನೇಜರ್ ಕಾಟ ತಡಿಯೋಕೆ ಆಗ್ದೆ ಆಫೀಸ್ ಬಿಟ್ಟು ಬೇರೆ ಕಡೆ ಕೆಲಸಕ್ಕೆ ಸೇರ್ಕೊಂಡ್ರೆ, ದುರದೃಷ್ಟವಶಾತ್ ಹೊಸ ಆಫೀಸ್ ಗೆ ಓನರ್ ಆಗಿ ಅದೇ ಹಳೇ ಮ್ಯಾನೇಜರ್ ಬಂದ್ರೆ ಹೇಗಾಗುತ್ತೆ. ಹಾಗಾಗಿದೆ ಜಮೀರ್ ಅಹ್ಮದ್ ಪರಿಸ್ಥಿತಿ.''
ಆದ್ರೆ, ಈ ಬಗ್ಗೆ ಜಮೀರ್ ಬೇರೆಯದ್ದೇ ಹೇಳುತ್ತಾರೆ. ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಪಕ್ಷದಲ್ಲಿ ಕುಮಾರಸ್ವಾಮಿ ಸಿಎಂ ಆದ್ರೆ ನಿಮ್ಮ ನಡೆ ಏನು ಅಂದ್ರೆ ಜಮೀರ್ ಕೊಟ್ಟ ಉತ್ತರ ನೀವೇ ಓದಿ.....ಮುಂದೆ ನೋಡಿ.....
ಕಾಂಗ್ರೆಸ್ ಜೆಡಿಎಸ್ ಗೆ ಬೆಂಬಲ ಕೊಟ್ಟಿದೆ, ಕುಮಾರಸ್ವಾಮಿ ಮುಖ್ಯಮಂತ್ರಿ ಅಂತೆ.?
''ನಮ್ಮ ಪಕ್ಷ ಹೈ ಹೈಕಮಾಂಡ್ ಪಕ್ಷ. ನಾನು ಗೆದ್ದಿರುವುದು ಕಾಂಗ್ರೆಸ್ ಪಕ್ಷದಿಂದ. ನಮ್ಮ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ನಾವು ಬದ್ಧ, ನಾನು ಬದ್ಧ. ನಮ್ಮದೊಂದೆ ಕೋಮುವಾದಿ ಬಿಜೆಪಿ ಪಕ್ಷವನ್ನ ದೂರವಿಡಬೇಕು. ಜೆಡಿಎಸ್ ಜಾತ್ಯಾತೀತ ಪಕ್ಷ. ಹೈಕಮಾಂಡ್ ತೀರ್ಮಾನ ಮಾಡಿದ್ರೆ ನಾವು ಒಪ್ಪಿಕೊಳ್ಳಲೇ ಬೇಕಾಗುತ್ತೆ'' - ಜಮೀರ್ ಅಹ್ಮದ್ ಖಾನ್
ಕುಮಾರಸ್ವಾಮಿ ಮತ್ತು ನಿಮ್ಮ ಸಂಬಂಧ ಚೆನ್ನಾಗಿಲ್ವಲ್ಲಾ?
''ಕುಮಾರಸ್ವಾಮಿ ಮತ್ತು ನನ್ನ ಸಂಬಂಧ ಬೇರೆ. ಅದು ಸೆಕೆಂಡರಿ. ಇದು ಪಕ್ಷದ ತೀರ್ಮಾನ. ಪಕ್ಷದ ತೀರ್ಮಾನಕ್ಕೆ ನಾವು ಒಪ್ಪಲೇಬೇಕು. ಒಂದು ವೇಳೆ ಅವರು ಮುಖ್ಯಮಂತ್ರಿ ಆದ್ರೆ, ಅವರ ಜೊತೆ ನಾನು ಮಾತಾಡಲೇಬೇಕಾಗುತ್ತೆ. ಅವರು ಕೇವಲ ಜೆಡಿಎಸ್ ಪಕ್ಷಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ. ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿ. ನನ್ನ ಕ್ಷೇತ್ರದ ಕೆಲಸ ಇದ್ರೆ ಅವರ ಹತ್ರನೇ ಹೋಗ್ಬೇಕು ಅಲ್ವಾ'' - ಜಮೀರ್ ಅಹ್ಮದ್ ಖಾನ್
ಜೆಡಿಎಸ್ ನಲ್ಲೇ ಇದ್ದಿದ್ರೆ ನಿಮಗೆ ಸಚಿವ ಸ್ಥಾನ ಸಿಗುತ್ತಿತ್ತು.?
''ನಾನು ಸಚಿವ ಸ್ಥಾನಕ್ಕೆ ಆಸೆ ಪಟ್ಟವನಲ್ಲ. ಈ ಹಿಂದೆ ಕುಮಾರಸ್ವಾಮಿ ಸರ್ಕಾರದಲ್ಲಿ ನಾನು ಮಂತ್ರಿಯಾಗಿದ್ದೆ. ಆರು ತಿಂಗಳು ಕೆಲಸ ಮಾಡಿದ್ದೆ. ಆಮೇಲೆ ರಾಜೀನಾಮೆ ಕೊಟ್ಟಿದ್ದೆ. ಅದಕ್ಕೆ ಯಾವತ್ತು ನಾನು ಆಸೆ ಪಟ್ಟವನಲ್ಲ'' - ಜಮೀರ್ ಅಹ್ಮದ್ ಖಾನ್
ಹೆಚ್.ಡಿ.ಕೆ ವಿರುದ್ಧ ವೈಯಕ್ತಿಕ ಟೀಕೆಗಳನ್ನ ಮಾಡಿದ್ದೀರಾ.?
''ಅದು ರಾಜಕೀಯದಲ್ಲಿ ಸಹಜ. ಯಡಿಯೂರಪ್ಪ ಮುಖ್ಯಮಂತ್ರಿ ಆದ್ರೂ ಅವರ ಹತ್ರ ಹೋಗ್ತಿರಲಿಲ್ವಾ.? ಸಿದ್ದರಾಮಯ್ಯ ಮುಖ್ಯಮಂತ್ರಿ ಆದ್ರು ಅವರ ಹತ್ರ ಹೋಗ್ಲಿಲಿಲ್ವಾ.? ಚುನಾವಣೆ ಸಮಯದಲ್ಲಿ ಅದು ಸಹಜ'' - ಜಮೀರ್ ಅಹ್ಮದ್ ಖಾನ್
ನಿಮ್ಮ ಸ್ನೇಹಿತರು ಸೋತು ಹೋದರು.?
''ರಾಜಕೀಯದಲ್ಲಿ ಗೆಲುವು ಸೋಲು ಇದ್ದೇ ಇರುತ್ತೆ. ನಾವು ಏಳು ಜನರಲ್ಲಿ ಮೂವರು ಗೆದ್ದಿದ್ದೀವಿ. ನಾಲ್ಕು ಜನ ಸೋತಿದ್ದೀವಿ. ಇಂದಿರಾ ಗಾಂಧಿ ಅವರು ಸೋತಿದ್ದಾರೆ. ವಾಜಪೇಯಿ ಕೂಡ ಸೋತಿದ್ದಾರೆ. ಮತದಾರರು ನಿರ್ಧಾರ ಮಾಡಬೇಕಿರುವುದು. ಮಾಡಿರುವುದು ಅವರೇ'' - ಜಮೀರ್ ಅಹ್ಮದ್ ಖಾನ್
ಮುಖ್ಯಮಂತ್ರಿಯಾಗಲಿರುವ ಹೆಚ್.ಡಿ.ಕೆಗೆ ನೀವು ಏನು ಹೇಳ್ತೀರಾ.?
''ಅವರಿಗೆ ನಾನು ಏನೂ ಹೇಳಬೇಕಾಗಿರುವುದು ಬೇಡ. ಯಾಕಂದ್ರೆ, ಅವರಿಗೆ ಗೊತ್ತಿದೆ. ಒಳ್ಳೆಯದಾಗಲಿ....ಕುಮಾರಸ್ವಾಮಿಗೆ ನಾವು ಹೇಳಿಕೊಡುವಷ್ಟು ದೊಡ್ಡವರಲ್ಲ. ಅವರು ಬಹಳ ದೊಡ್ಡವರಿದ್ದಾರೆ'' ಎಂದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಮಾಧ್ಯಮದ ಜೊತೆ ಮಾತನಾಡಿದ್ದಾರೆ.