ಸೈಬರ್ ದಾಳಿ: ರಾಜ್ಯದ ಇ-ಸಂಗ್ರಹಣಾ ತಂತ್ರಾಂಶ ತಾತ್ಕಾಲಿಕ ಸ್ಥಗಿತ
ಬೆಂಗಳೂರು, ಆಗಸ್ಟ್ 7: ರಾಜ್ಯ ಸರ್ಕಾರದ ಇ-ಸಂಗ್ರಹಣಾ ತಂತ್ರಾಂಶದ (e-procurement) ಇ.ಎಂ.ಡಿ. ಮರುಪಾವತಿ ಮೊಡ್ಯೂಲ್ ಮೇಲೆ ಕೆಲವು ಬಾಹ್ಯ ಸೈಬರ್ ದಾಳಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಳೆದ ಆರು ದಿನಗಳಿಂದ ಈ ತಂತ್ರಾಂಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮತ್ತೊಮ್ಮೆ ವಿಶ್ವವನ್ನು ಬೆಚ್ಚಿಬೀಳಿಸಿದ ಸೈಬರ್ ದಾಳಿಕೋರರು
ಕಳೆದ ಎಂಟು ವರ್ಷಗಳಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳ ಅನ್ವಯ ಎಲ್ಲಾ ಟೆಂಡರ್ಗಳನ್ನು ಇ-ಸಂಗ್ರಹಣಾ ತಂತ್ರಾಂಶ https://eproc.karnataka.gov.in ದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಇದೀಗ ಬಾಹ್ಯ ಸೈಬರ್ ದಾಳಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಭಾರತ ಸರ್ಕಾರದ CERT-In ಸಂಸ್ಥೆಗೂ ವರದಿ ಸಲ್ಲಿಸಲಾಗಿದೆ.
CERT-In ಸಂಸ್ಥೆಯ ವಿಚಾರಣೆ ಮುಗಿದ ನಂತರ ಈ ಸಂಸ್ಥೆಯ ಶಿಫಾರಸ್ಸುಗಳನ್ವಯ ವ್ಯವಸ್ಥೆಯನ್ನು ಸುಧೃಢಪಡಿಸಿ ಇ-ಸಂಗ್ರಹಣಾ ತಂತ್ರಾಂಶವನ್ನು ಕೆಲವು ದಿನಗಳೊಳಗೆ ಮರು ಸ್ಥಾಪಿಸಲಾಗುವುದು ಎಂದು ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.