ಭಾನುವಾರದ ಕರ್ನಾಟಕದ ಜಿಲ್ಲಾ ಸುದ್ದಿಗಳ ಗುಚ್ಛ
ಬೆಂಗಳೂರು, ಆಗಸ್ಟ್ 01; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಲವಾರು ಘಟನೆಗಳು ನಡೆಯುತ್ತವೆ. ಚಿಕ್ಕ-ಚಿಕ್ಕ ಸುದ್ದಿಗಳ ಗುಚ್ಛ ಇಲ್ಲಿದೆ. ವಿವಿಧ ಜಿಲ್ಲೆಗಳ ರಾಜಕೀಯ, ಅಪರಾಧ, ಜನರ ಸಮಸ್ಯೆ ಸೇರಿದಂತೆ ವಿವಿಧ ಸುದ್ದಿಗಳು ಇಲ್ಲಿ ನಿಮಗೆ ಸಿಗುತ್ತದೆ. ಭಾನುವಾರದ ವಿವಿಧ ಸುದ್ದಿಗಳ ಗುಚ್ಛ ಇಲ್ಲಿದೆ.
"ಮೋದಿ ಸರ್ಕಾರ ಆರಂಭದಲ್ಲೇ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಿತ್ತು. ಆಗಲೇ ಮೈಸೂರು ಕೂಡ ಸ್ಮಾರ್ಟ್ ಸಿಟಿ ಯೋಜನೆಗೆ ಸೇರಬೇಕಿತ್ತು" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು. ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಅವರು. "ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸ್ಥಳೀಯವಾಗಿ ನರ್ಮ್ ಹಣ ಬಳಕೆ ಮಾಡಿಕೊಂಡಿರಲಿಲ್ಲ. ಪರಿಣಾಮ ಸ್ಮಾರ್ಟ್ ಸಿಟಿ ಯೋಜನೆ ಮೈಸೂರಿನ ಕೈ ತಪ್ಪಿತು. ಆದರೆ ಈಗ ಮತ್ತೊಮ್ಮೆ ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದೇನೆ. ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದಿದೆ. ಶೀಘ್ರದಲ್ಲೇ ಸ್ಮಾರ್ಟ್ ಸಿಟಿ ಯೋಜನೆ ಮೈಸೂರಿಗೂ ಲಭ್ಯವಾಗಲಿದೆ" ಎಂದು ತಿಳಿಸಿದರು.
ಹೊಸ ಸಿಎಂ ಅಭಿನಂದಿಸಿ ಸವಾಲುಗಳನ್ನು ತಿಳಿಸಿದ ಸಿದ್ದರಾಮಯ್ಯ!
ಕೇಂದ್ರದಿಂದ ರಾಜ್ಯದ ಪಾಲಿನ ಹಣ ಬರುತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, "ಸಿದ್ದರಾಮಯ್ಯಗೆ ಎಲ್ಲಾ ಗೊತ್ತಿದ್ದೂ ರಾಜಕೀಯಕ್ಕಾಗಿ ಮಾತನಾಡುತ್ತಾರೆ. ಹಾಗಾಗಿ ಆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಸಿದ್ದರಾಮಯ್ಯನವರು 13 ಬಾರಿ ಬಜೆಟ್ ಮಂಡನೆ ಮಾಡಿರುವವರು. ಅವರಿಗೆ ಎಲ್ಲವೂ ಗೊತ್ತು. ಹೈವೇ ಕೆಲಸಕ್ಕೆ 95 ಸಾವಿರ ಕೋಟಿ ಹಣ ಕೊಟ್ಟಿರುವುದು ಮೋದಿ ಸರ್ಕಾರ. ಬೆಂಗಳೂರು-ಮೈಸೂರು ಹೈವೇ ಅಭಿವೃದ್ಧಿಗಾಗಿ 8,096 ಕೋಟಿ ಹಣ ಕೊಟ್ಟಿದೆ. ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡುತ್ತಿರುವುದು ಮೋದಿ ಸರ್ಕಾರ. ರಾಜ್ಯಕ್ಕೆ ಅಗತ್ಯವಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಾ ಬಂದಿದೆ" ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.
ಎಲ್ಲರೂ ಲಸಿಕೆ ಪಡೆಯಬೇಕು; "ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆ ಎದುರಾಗುವ ಆತಂಕವಿದೆ. ಕೊರೊನಾ 3ನೇ ಅಲೆ ಬರಲೂಬಹುದು, ಬರದೆಯೂ ಇರಬಹುದು. ಆದರೂ ಕೊರೊನಾ ಮೂರನೇ ಅಲೆ ಬರದಂತೆ ತಡೆಯಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು" ಎಂದು ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರೆ ನೀಡಿದರು.
ಕೋವಿನ್-ಕಾರ್; 24 ಗಂಟೆ ಮೊದಲೇ ಲಸಿಕೆ ಮಾಹಿತಿ ಮೊಬೈಲ್ಗೆ
ಮೈಸೂರಿನಲ್ಲಿ ಭಾನುವಾರ ಮಾತನಾಡಿದ ಅವರು, "ಕೊರೊನಾ ಲಸಿಕೆ ಬಗ್ಗೆ ಕೆಲವರಲ್ಲಿ ತಪ್ಪು ಅಭಿಪ್ರಾಯಗಳಿವೆ. ಜನರು ಅದಕ್ಕೆ ಕಿವಿಗೊಡದೇ ಲಸಿಕೆ ಹಾಕಿಸಿಕೊಳ್ಳಬೇಕು. ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ತಪ್ಪದೇ ಪಾಲಿಸಬೇಕು" ಎಂದು ಶ್ರೀಗಳು ಸಲಹೆ ನೀಡಿದರು.
"ನಿಯಮ ಪಾಲಿಸಿದರೆ ಮಾತ್ರ ಕೊರೊನಾವನ್ನು ನಿಯಂತ್ರಣ ಮಾಡಲು ಸಾಧ್ಯ. ಜೆಎಸ್ಎಸ್ ಆಸ್ಪತ್ರೆಯಲ್ಲೂ ಕೊರೊನಾ ಮೂರನೇ ಅಲೆ ಎದುರಿಸಲು ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜನರು ಮೈ ಮರೆಯದೇ ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು" ಎಂದು ತಿಳಿಸಿದರು.
ಮೈಸೂರು ಗಡಿಯಲ್ಲಿ ಕಟ್ಟೆಚ್ಚರ; ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದ್ದು ಇದೀಗ ಮೈಸೂರಿಗೆ ಮತ್ತೆ ಆತಂಕ ಶುರುವಾಗಿದೆ. ಎರಡು ದಿನದಿಂದ ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಡಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹೆಚ್. ಡಿ. ಕೋಟೆಯ ಗಡಿ ಭಾಗದ ಬಾವಲಿ ಚೆಕ್ ಪೋಸ್ಟ್ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಕೇರಳದಲ್ಲಿ ಕೋವಿಡ್ ಪರಿಸ್ಥಿತಿ ಕೈ ಮೀರಿದೆಯೇ, ಸರ್ಕಾರದ ತಜ್ಞರು ಹೇಳಿದ್ದೇನು?
ಹೆಚ್. ಡಿ. ಕೋಟೆ ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, "ರಾಜ್ಯಕ್ಕೆ ಎರಡು ಡೋಸ್ ವಾಕ್ಸಿನ್ ಆದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಜೊತೆಗೆ RTPCR ವರದಿ ನೆಗೆಟಿವ್ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪ್ರತಿದಿನ ಸಂಜೆ 6ರವರೆಗೂ ವಾಹನಗಳ ಸಂಖ್ಯೆ ನಮೂದು ಮಾಡಲಾಗುತ್ತದೆ. ಎಲ್ಲಾ ವಾಹನಗಳನ್ನ ತಪಾಸಣೆ ಮಾಡಿ ಬಿಡಲಾಗುತ್ತದೆ" ಎಂದರು.
ಮಗು ಕದ್ದ ಮಹಿಳೆ ಬಂಧನ; ಹಿರಿಯೂರು ಪಟ್ಟಣದ ಸಂತೆಪೇಟೆ ಬಳಿಯಿರುವ ಕಟುಗರಹಳ್ಳ ಬಡಾವಣೆಯಲ್ಲಿ ಶನಿವಾರ ಬೆಳಗ್ಗೆ ಮನೆ ಹೊರಗಡೆ ಆಟವಾಡುವಾಗ ಕಣ್ಮರೆಯಾಗಿದ್ದ ಮೂರುವರೆ ವರ್ಷದ ಹೆಣ್ಣು ಮಗು ಪತ್ತೆಯಾಗಿದೆ . ಅನು ಎಂಬ ಹೆಣ್ಣು ಮಗುವಿಗೆ ಅಪರಚಿತ ಮಹಿಳೆಯೊಬ್ಬಳು ಚಾಕ್ಲೇಟ್, ಬಿಸ್ಕೆಟ್ ಕೊಡಿಸುವ ಆಸೆ ತೋರಿಸಿ ಮಗುವನ್ನು ಅಪಹರಿಸಿಕೊಂಡು ಹೋಗಿದ್ದಳು. ನಗರದ ದುರ್ಗಿಗುಡಿ ರಸ್ತೆಯ ಅಂಗಡಿಯೊಂದರಲ್ಲಿ ಬಿಸ್ಕೆಟ್ ಖರೀದಿಸುತ್ತಿದ್ದ ಸಂದರ್ಭದಲ್ಲಿ ಮಗುವಿನ ಪೋಷಕರಿಗೆ ಪರಿಚಯ ಇರುವವರು ನೋಡಿಕೊಂಡಿದ್ದು ಪೋಷಕರಿಗೆ ಸುದ್ದಿ ತಿಳಿಸಿ, ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ.
ಮಗುವನ್ನು ಅಪಹರಿಸಿದ ಮಹಿಳೆ ತಾಲೂಕಿನ ಭೀಮನ ಬಂಡೆ ಬಳಿ ಕಾಣಿಸಿಕೊಂಡಿದ್ದು ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಮಗುವನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಮಗುವಿನ ತಾಯಿ ಸುಶೀಲಮ್ಮ, ತಂದೆ ಯತೀಶ್ ಎಂದು ತಿಳಿದು ಬಂದಿದೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Recommended Video
ವಿದ್ಯುತ್ ಸ್ಪರ್ಶದಿಂದ ಆನೆ ಸಾವು; ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವನ್ನಪ್ಪಿದ ಪ್ರಕರಣ ಚಿಕ್ಕಮಗಳೂರು ತಾಲೂಕಿನ ಗಾಳಿಪೂಜೆ ಗ್ರಾಮದಲ್ಲಿ ನಡೆದಿದೆ. ಜಮೀನಿಗೆ ಹಾಕಿದ್ದ ತಂತಿ ಬೇಲಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಆನೆ ಸಾವನ್ನಪ್ಪಿದೆ. ಜಮೀನಿನ ಮಾಲೀಕ ಅಕ್ರಮವಾಗಿ ಅಕ್ರಮವಾಗಿ ವಿದ್ಯುತ್ ಅಳವಡಿಸಿದ್ದ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದು, ಜಮೀನಿನ ಮಾಲೀಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.