ಆ. 22ರ ಕರ್ನಾಟಕದ ಜಿಲ್ಲಾಸುದ್ದಿಗಳು; ಒಂದೇ ಕ್ಲಿಕ್
ಬೆಂಗಳೂರು, ಆಗಸ್ಟ್ 22; ಕರ್ನಾಟಕದ ವಿವಿಧ ಜಿಲ್ಲೆಗಳ ಜಿಲ್ಲಾಸುದ್ದಿಗಳ ಸಂಗ್ರಹ ಈ ಪೇಜ್ನಲ್ಲಿ ಲಭ್ಯವಿದೆ. ಒಂದೇ ಕ್ಲಿಕ್ನಲ್ಲಿ ಭಾನುವಾರದ ಪ್ರಮುಖ ಜಿಲ್ಲಾಸುದ್ದಿಗಳು ಸಿಗಲಿವೆ.
ಚಿಕ್ಕಮಗಳೂರು: ಜಿಲ್ಲಾ ಪಂಚಾಯತಿ ಟಿಕೆಟ್ಗಾಗಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ನಡುವೆ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ತಿರುಗಿದ ಪರಿಣಾಮ ಹೊಡೆದಾಟ ನಡೆದಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ಶನಿವಾರ ರಾತ್ರಿ ನೆಡೆದಿದ್ದು, ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ತಾಲೂಕಿನ ಜಾಗರ ಜಿಲ್ಲಾ ಪಂಚಾಯತಿ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕ್ಷೇತ್ರದಲ್ಲಿ ಚುನಾವಣೆಯ ಕಾವು ಹೆಚ್ಚಾಗ ತೊಡಗಿತ್ತು. ಸ್ವಪಕ್ಷದಲ್ಲಿಯೇ ಟಿಕೆಟ್ಗೆ ಪೈಪೋಟಿಗಳು ನಡೆಯಲಾರಂಭಿಸಿದ್ದವು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಹಾಗೂ ಇತ್ತೀಚೆಗೆ ಕನ್ನಡ ಸೇನೆಯಿಂದ ಕಾಂಗ್ರೆಸ್ಗೆ ಬಂದಿದ್ದ ಪ್ರವೀಣ್ ಬೆಟ್ಟಗೆರೆ ನಡುವೆ ಜಿಲ್ಲಾ ಪಂಚಾಯಿತಿ ಟಿಕೆಟ್ಗಾಗಿ ಪೈಪೋಟಿ ನಡೆದಿತ್ತು. ಈ ವೇಳೆ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಇವರಿಬ್ಬರನ್ನು ಕರೆಸಿ ಮನವೊಲಿಸು ಕಾರ್ಯಕ್ಕೆ ಕೈ ಹಾಕಿದ್ದರು.
ಶನಿವಾರ ಸಂಜೆ ಸುಮಾರಿಗೆ ನಗರದ ಪಟಾಕಿ ಮೈದಾನಕ್ಕೆ ಕರೆಸಿದ್ದರು. ಈ ವೇಳೆ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಈ ವೇಳೆ ಪ್ರಕಾಶ್ ತಲೆಗೆ ಬಲವಾದ ಪೆಟ್ಟಾಗಿದೆ ಎಂದು ತಿಳಿದು ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿ ದೂರು ದಾಖಲಾಗಿದೆ.
ಹೆಣ್ಣು ಮಕ್ಕಳು ಹೆಚ್ಚು ಶಿಕ್ಷಣ ಕಲಿಯಬೇಕು; "ಮಹಾಮಾರಿ ಕೊರೊನಾ ವೈರಸ್ ಒಂದು ಮತ್ತು ಎರಡನೇ ಅಲೆ ಸಾಕಷ್ಟು ಸಾವು-ನೋವು ಉಂಟು ಮಾಡಿದೆ. ಇನ್ನು ತಜ್ಞರ ಪ್ರಕಾರ ಮೂರನೇ ಅಲೆ ಹರಡುವ ಮುನ್ಸೂಚನೆ ಇರುವುದರಿಂದ ಪೋಷಕರು ಮಕ್ಕಳ ಕಡೆ ಹೆಚ್ಚು ಗಮನ ಹರಿಸಬೇಕು" ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 9 ಸಾವಿರ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕಿ, "ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿ, ತೊಂದರೆಗಿಡಾದ ಬಡ ಕುಟುಂಬಗಳಿಗೆ ನಮ್ಮ ಸರ್ಕಾರದ ವತಿಯಿಂದ ಕಿಟ್ ವಿತರಣೆ ಮಾಡಲಾಗಿದೆ" ಎಂದರು.
"ಹಿರಿಯೂರು ತಾಲೂಕಿನಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ತಾಲೂಕು ಆಡಳಿತ, ಸೇರಿದಂತೆ ಇತರೆ ಇಲಾಖೆಗಳು ಉತ್ತಮವಾಗಿ, ನಾವು ಕಾರ್ಯ ನಿರ್ವಹಿಸಿದ್ದರಿಂದ ನನ್ನ ಕ್ಷೇತ್ರದಲ್ಲಿ ಕೊರೊನಾ ಹೆಚ್ಚು ಹರಡದೆ, ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ" ಎಂದು ತಿಳಿಸಿದರು.
"ಮಾಜಿ ಸಿಎಂ ಯಡಿಯೂರಪ್ಪ ಸಹಕಾರದಿಂದ ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರಕ್ಕೆ ನೀರು ಹರಿದು ಬರುತ್ತಿದ್ದು, ಇಂದು ವಿವಿ ಸಾಗರದಲ್ಲಿ 104 ಅಡಿ ನೀರು ಇದೆ. 90 ಕೋಟಿ ವೆಚ್ಚದಲ್ಲಿ ಧರ್ಮಪುರ ಕೆರೆಗೆ ನೀರು ಹರಿಸಲು ಸರ್ಕಾರದಿಂದ ಅನುಮೋದನೆ ದೊರೆತಿದೆ, ತಾಲೂಕಿನ ಪಟ್ರೇಹಳ್ಳಿ ಬಳಿ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಭೂಮಿ ಪೂಜೆ ಅತೀ ಶೀಘ್ರದಲ್ಲೇ ನೆರವೇರಿಸಲಾಗುವುದು" ಎಂದರು.
"ನಾನು ಶಾಸಕಿಯಾದ ಬಳಿಕ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ" ಎಂದರು.
Recommended Video
ಮಾರುತಿ ಓಮ್ನಿ ಪಲ್ಟಿ; ತೀರ್ಥಹಳ್ಳಿ ಶಾಸಕ, ಗೃಹ ಸಚಿವ ಆರಗ ಜ್ಞಾನೇಂದ್ರ ಕಾರು ಮತ್ತು ಬೆಂಗಾವಲು ವಾಹನಗಳು ಹೋದ ಮರುಕ್ಷಣವೇ ಹಿಂದಿದ್ದ ಮಾರುತಿ ಓಮ್ನಿ ಕಾರೊಂದು ಪಲ್ಟಿಯಾಗಿ ನಾಲ್ವರು ಗಾಯಗೊಂಡಿರುವ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.