ಒಂದೇ ಕ್ಲಿಕ್; ಕರ್ನಾಟಕದ ಜಿಲ್ಲಾಸುದ್ದಿಗಳನ್ನು ಓದಿ
ಬೆಂಗಳೂರು, ಆಗಸ್ಟ್ 18; ಕರ್ನಾಟಕದ ವಿವಿಧ ಜಿಲ್ಲೆಗಳ ಸುದ್ದಿಗಳು ಇಲ್ಲಿ ಸಂಕ್ಷಿಪ್ತವಾಗಿ ಓದುಗರಿಗೆ ಲಭ್ಯವಿದೆ. ರಾಜಕೀಯ, ಅಪರಾಧ ಸೇರಿದಂತೆ ವಿವಿಧ ವಲಯಗಳ ಸುದ್ದಿಗಳು ಇಲ್ಲಿವೆ.
"ಕನಸು ಕಂಡರೇ ಅದು ಯಾರದ್ದೂ ತಪ್ಪಲ್ಲ, ಕನಸು ಕಾಣುವ ಹಕ್ಕು ಎಲ್ಲರಿಗೂ ಇದೆ. ಬಿಜೆಪಿ ಸರ್ಕಾರದ ವಿಷಯದಲ್ಲಿ ಯಾರ ಕನಸು ನನಸಾಗಲ್ಲ. ಸರ್ಕಾರ ಸುಭದ್ರವಾಗಿದೆ ಮತ್ತು ಸ್ಥಿರವಾಗಿದೆ" ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಬುಧವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ 6 ತಿಂಗಳಲ್ಲಿ ಪತನವಾಗುತ್ತದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದರು. "ರಾಜ್ಯ ಬಿಜೆಪಿ ಸರ್ಕಾರದ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಯಾರ ಕನಸು ನನಸಾಗುವುದಿಲ್ಲ ಸರ್ಕಾರ ಸ್ಥಿರವಾಗಿದೆ" ಎಂದರು.
"ವ್ಯಕ್ತಿ, ಶಕ್ತಿ, ಪಕ್ಷ, ಸಂಸ್ಥೆ ಯಾವುದು ಮುಖ್ಯವಲ್ಲ, ದೇಶದ ಸಂವಿಧಾನ, ರಾಷ್ಟ್ರ ಧ್ವಜವನ್ನು ಅಗೌರವಿಸಿದೆ ಅದನ್ನು ಸಹಿಸಲು ಸಾಧ್ಯವಿಲ್ಲ, ಧ್ವಜ ಹೊತ್ತ ರಥವನ್ನು ತಡೆಯೋದನ್ನು ಸಹಿಸುವುದಿಲ್ಲ, ಸರ್ಕಾರ ಅಂಥವರ ಮೇಲೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುತ್ತದೆ" ಎಂದು ಸಚಿವರು ಎಚ್ಚರಿಕೆ ಕೊಟ್ಟರು.
"ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕದ ಬಗ್ಗೆ ಚರ್ಚೆಯಲ್ಲಿದೆ. ದತ್ತಪೀಠ ವಿಚಾರ ಕೋರ್ಟ್ನಲ್ಲಿ ವಾದ ವಿವಾದಗಳು ಮುಗಿದು ಅಂತಿಮ ತೀರ್ಪು ಹೊರ ಬರುವುದು ಬಾಕಿ ಇದೆ. ಕೋರ್ಟ್ ತೀರ್ಪಿನ ಬಳಿಕ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ" ಎಂದು ಸಚಿವರು ಸ್ಪಷ್ಟಪಡಿಸಿದರು.
ಲಂಚ ಪಡೆಯುವಾಗ ಎಸಿಬಿ ದಾಳಿ; ಲಂಚ ಪಡೆಯುವಾಗ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿ. ವಿ. ಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹಿರಿಯೂರು ತಾಲೂಕಿನ ಬೆಳಘಟ್ಟ ಗ್ರಾಮದ ರೈತ ಎಚ್. ಮೂರ್ತಿ ತನ್ನ ಮಗ ಎಂ. ಯಲ್ಲಪ್ಪನನ್ನು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿಸಲು ಅರ್ಜಿ ಸಲ್ಲಿಸಿದ್ದನು. ಈ ವೇಳೆ ಪ್ರಾಂಶುಪಾಲ ಸೈಯದ್ ನಿಜಾಮುದ್ದೀನ್ ನಿನ್ನ ಮಗನದ್ದು ಒಂದು ಅಂಕ ಕಡಿಮೆಯಿದೆ. ಆದ್ದರಿಂದ ಪ್ರವೇಶ ನೀಡಲು ಆಗುವುದಿಲ್ಲ. ಪ್ರವೇಶಾತಿ ಬೇಕಾದಲ್ಲಿ 10 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.
ಇದರಿಂದ ಮನನೊಂದ ಮೂರ್ತಿ ಪ್ರಾಂಶುಪಾಲರ ವಿರುದ್ಧ ಚಿತ್ರದುರ್ಗ ಎಸಿಬಿ ಪೊಲೀಸ್ ಠಾಣೆ ಡಿವೈಎಸ್ಪಿ ಬಸವರಾಜ್ ಆರ್.ಮಗದುಮ್ಗೆ ದೂರು ಸಲ್ಲಿಸಿದ್ದಾನೆ. ಬುಧವಾರ ಬೆಳಗ್ಗೆ ಸೈಯದ್ ನಿಜಾಮುದ್ದೀನ್ ಲಂಚದ ಹಣ ಪಡೆಯುವಾಗ ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳಿಕ ವಿ. ಪ್ರವೀಣ್ಕುಮಾರ್ ತಂಡ ಸೈಯದ್ ನಿಜಾಮುದ್ದೀನ್ ಮನೆಯನ್ನು ಶೋಧನೆ ನಡೆಸಿದೆ. ಡಿವೈಎಸ್ಪಿ ಬಸವರಾಜ ಆರ್. ಮಗದುಮ್, ಪೊಲೀಸ್ ನಿರೀಕ್ಷಕ ಬಸವರಾಜ್ ಟಿ. ಬುದ್ಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮೇಕೆದಾಟು ಯೋಜನೆಗಾಗಿ ಸೈಕಲ್ ಜಾಥ; ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಬೈಕ್ ಜಾಥಾವನ್ನು ರಾಮನಗರದಿಂದ ಸಂಗಮವರೆಗೆ ರಾಜ್ಯ ರೈತ ಸಂಘದ ಕಾರ್ಯಕರ್ತರು ನಡೆಸಿದರು. ರೈತ ಸಂಘದ ರಾಜ್ಯಾಧ್ಯಕ್ಷ ಬಡಲಗಪುರ ನಾಗೇಂದ್ರ ನೇತೃತ್ವದಲ್ಲಿ ರಾಮನಗರದಿಂದ ಹೊರಟು ಕನಕಪುರ ಮಾರ್ಗವಾಗಿ ಸಂಗಮ ವರೆಗೂ ಬೈಕ್ ಜಾಥ ನಡೆಸಲಾಯಿತು. ಸುಮಾರು 70 ಕಿ.ಮೀ.ದೂರದಲ್ಲಿರುವ ಕನಕಪುರ ತಾಲೂಕಿನ ಸಂಗಮದ ವರೆಗೂ ಮೆರವಣಿಗೆ ನಡೆಸಿ ಮೇಕೆದಾಟು ಯೋಜನೆ ಶೀರ್ಘ ಜಾರಿಗೊಳಿಸುವಂತೆ ಒತ್ತಾಯ ಮಾಡಲಾಯಿತು.
ರಾಜ್ಯ ಸರಕಾರ ಈ ಕೂಡಲೇ ಮೇಕೆದಾಟು ಅಣೆಕಟ್ಟು ಯೋಜನೆಗೆ ಚಾಲನೆ ನೀಡಬೇಕು. ಈ ಯೋಜನೆ ಜಾರಿಯಾದರೆ ಹಳೇ ಮೈಸೂರು ಪ್ರಾಂತ್ಯದ ಏಳೆಂಟು ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗುತ್ತೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಿದೆ. ಹಾಗೆಯೇ ಈ ಯೋಜನೆ ಜಾರಿಯಾದ್ರೆ ಮೇಕೆದಾಟಿನಲ್ಲೆ 450 ಕ್ಕೂ ಹೆಚ್ಚು ಮ್ಯಾಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಅನುಕೂಲವಾಗುತ್ತೆ ಇದರಿಂದ ತಮಿಳುನಾಡು ಹಾಗೂ ಕರ್ನಾಟಕ ಎರಡು ರಾಜ್ಯಗಳಿಗೂ ಅನುಕೂಲ ಇದೆ. ಆದಷ್ಟು ಬೇಗ ಈ ಯೋಜನೆ ಜಾರಿಗೊಳಿಸುವಂತೆ ರೈತ ಮುಖಂಡರು ಒತ್ತಾಯಿಸಿದರು.
ಮೇಕೆದಾಟು ಯೋಜನೆ ಜಾರಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿವೆ. ಈಗಾಗಲೇ ಯೋಜನೆಯ ಕಾರ್ಯ ಪ್ರಗತಿಯಲ್ಲಿರಬೇಕಿತ್ತು. ಮೇಕೆದಾಟು ಯೋಜನೆಯಿಂದಾಗಿ ಯಾರಿಗೂ ತೊಂದರೆಯಾಗುವುದಿಲ್ಲ. ಕೂಡಲೇ ಮೇಕೆದಾಟು ಅಣೆಕಟ್ಟು ನಿರ್ಮಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಉಪ ರಾಷ್ಟ್ರಪತಿಗಳ ಭೇಟಿ; ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಲಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಗೆ ಆಗಸ್ಟ್ 20ರಂದು ಸಂಜೆ 5.25ಕ್ಕೆ ವಿಶೇಷ ಕಾಪ್ಟರ್ನಲ್ಲಿ ಮುನ್ಸಿಪಲ್ ಕಾಲೇಜಿನ ಹೆಲಿಪ್ಯಾಡ್ಗೆ ಬಂದಿಳಿಯಲಿದ್ದಾರೆ.
ತದನಂತರ ವಿಶೇಷ ಭದ್ರತೆ ಮೂಲಕ ತುಂಗಭದ್ರಾ ಜಲಾಶಯಕ್ಕೆ ತೆರಳಲಿದ್ದಾರೆ. ಕಮಲಾಪುರ ಪಟ್ಟಣದ ಮಯೂರ ಭುವನೇಶ್ವರಿ ಹೊಟೇಲ್ಗೆ ತೆರಳಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಉಪರಾಷ್ಟ್ರಪತಿಗಳು ಕುಟುಂಬ ಸಮೇತರಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಭದ್ರತೆಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಅಧಿಕಾರಿ ನೇಮಕ; ಅಫ್ಘಾನಿಸ್ಥಾನದಲ್ಲಿರುವ ಕನ್ನಡಿಗರನ್ನು ಕರೆತರುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಮನ್ವಯ ನಡೆಸಲು ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್ ನೇಮಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಜನರ ನೆರವಿಗಾಗಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ. ಜನರು 080-4984444, 9480800187 ಸಂಖ್ಯೆಗೆ ಕರೆ ಮಾಡಬಹುದು ಅಥವ [email protected] ವಿಳಾಸಕ್ಕೆ ಇ-ಮೇಲ್ ಕಳಿಸಬಹುದಾಗಿದೆ.
ವಾರ್ಡ್ಗಳ ವಿವರ; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೂತನವಾಗಿ ಒಟ್ಟು 82 ವಾರ್ಡ್ಗಳನ್ನು ರಚಿಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿ ನಾಲ್ಕು ವಿಧಾನಸಭಾ ಮತಕ್ಷೇತ್ರಗಳನ್ನು ಒಳಗೊಂಡಿದೆ. ಅದರಲ್ಲಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 9 ವಾರ್ಡ್ಗಳು ಬರುತ್ತವೆ. ಇಲ್ಲಿ ಒಟ್ಟು 94,655 ಮತದಾರರು ಇದ್ದು, 99 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.
Recommended Video
ಪ್ರಚಾರಕ್ಕಾಗಿ ಮಾರ್ಗಸೂಚಿ; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಮನೆ ಮನೆ ಪ್ರಚಾರ ಹಾಗೂ ಬಹಿರಂಗ ಪ್ರಚಾರಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಯೂ ಸೇರಿ ಗರಿಷ್ಟ 5 ಜನ ಬೆಂಬಲಿಗರೊಂದಿಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಬಹುದು. ಪ್ರಚಾರಕ್ಕೆ ವಾಹನ ಬಳಸುವುದನ್ನು ಮತ್ತು ಗುಂಪು ಗುಂಪು ಸೇರಿ ಪ್ರಚಾರ ಮಾಡುವುದನ್ನು ನಿಷೇಧಿಸಿದೆ.