ಪತ್ರಕರ್ತರೂ ಕೋವಿಡ್ ವಾರಿಯರ್ಸ್: ಉಚಿತ ಲಸಿಕೆ ವಿತರಣೆಗೆ ನಿರ್ಧಾರ
ಬೆಂಗಳೂರು, ಮೇ 05: ಕೊರೊನಾ ಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮದವರನ್ನು 'ಫ್ರಂಟ್ ಲೈನ್ ವರ್ಕರ್ಸ್' ಎಂದು ಗುರುತಿಸಿ ಉಚಿತ ಲಸಿಕೆ ನೀಡಲು ರಾಜ್ಯ ಸಂಪುಟ ಸಭೆ ತೀರ್ಮಾನಿಸಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಮಾಧ್ಯಮ ಸಿಬ್ಬಂದಿಯನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ ಉಚಿತವಾಗಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಆಸ್ಪತ್ರೆಗಳಲ್ಲಿ ಬೆಡ್ ಲಾಕ್ ವಿಚಾರ, ಸಿಎಂ ಯಡಿಯೂರಪ್ಪ ಹೇಳಿದ್ದೇನು?
ಕೊರೊನಾ ಮೊದಲ ಅಲೆ ವೇಳೆ ಲಾಕ್ಡೌನ್ ಸಂದರ್ಭದಲ್ಲೂ ಮಾಧ್ಯಮದವರು ಮುಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸಿದ್ದರು.ಆದರೆ ಕೆಲ ತಿಂಗಳ ಹಿಂದೆ ಲಸಿಕೆ ಅಭಿಯಾನ ಆರಂಭಿಸಿದಾಗ ಅವರನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿರಲಿಲ್ಲ.
ಹೀಗಾಗಿ ಪತ್ರಕರ್ತರನ್ನೂ ಕೊರೊನಾ ಯೋಧರು ಎಂದು ಪರಿಗಣಿಸಲು ಒತ್ತಾಯ ಕೇಳಿಬಂದಿತ್ತು, ಅದಕ್ಕೆ ಈಗ ಮನ್ನಣೆ ಲಭಿಸಿದೆ. ನಕಾರಾತ್ಮಕ ಸುದ್ದಿ ಬೇಡ: ಕೋವಿಡ್ ತಡೆಯುವ ಕಾರ್ಯದಲ್ಲಿ ಆರೋಗ್ಯ ಸಿಬ್ಬಂದಿ, ಪೊಲೀಸರು ಮತ್ತು ಇತರೆ ಇಲಾಖೆಯ ಸಿಬ್ಬಂದಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮದವರು ನಕಾರಾತ್ಮಕವಾಗಿ ಸುದ್ದಿಗಳನ್ನು ಬಿತ್ತರ ಮಾಡದೆ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದು ಯಡಿಯೂರಪ್ಪ ನುಡಿದರು.
ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸ ಮಿತಿ ಮೀರುತ್ತಿದೆ. ಕಳೆದ 24 ಗಂಟೆಗಳಲ್ಲಿ 44631 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿನಿಂದ 292 ಮಂದಿ ಪ್ರಾಣ ಬಿಟ್ಟಿದ್ದು, ಇದೇ ಅವಧಿಯಲ್ಲಿ 24714 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.