ಕರ್ನಾಟಕ ಅಪರಾಧ ಸುದ್ದಿಯ ಚಿತ್ರಣ: ಆಫ್ರಿಕನ್ ಪ್ರಜೆಯ ಲಾಕಪ್ ಡೆತ್, ಅನೈತಿಕ ವಿಚಾರಕ್ಕೆ ಮಾರಕ ಹಲ್ಲೆ
ಬೆಂಗಳೂರು, ಆ. 02: ರಾಜಧಾನಿ ಬೆಂಗಳೂರಿನಲ್ಲಿ ಆಫ್ರಿಕನ್ ಮೂಲದ ಪ್ರಜೆಯ ಲಾಕಪ್ ಡೆತ್ ಪ್ರಕರಣ ಹೊಸ ಸ್ವರೂಪ ಪಡೆದುಕೊಂಡಿದೆ. ಲಾಕಪ್ ಡೆತ್ ಖಂಡಿಸಿ ಪ್ರತಿಭಟನೆ ನಡೆಸಿದ ಆಫ್ರಿಕನ್ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಲಾಠಿ ಏಟು ತಿಂದಿದ್ದು ಹತ್ತಕ್ಕೂ ಹೆಚ್ಚು ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವೃದ್ಧನನ್ನು ರಸ್ತೆ ಬದಿ ತಳ್ಳಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ನಿವೇಶನ ಕೊಡುವ ಹೆಸರಿನಲ್ಲಿ ಮಾಡಿದ್ದ ಬೃಂದಾವನ್ ಪ್ರಾಪರ್ಟಿ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಗೌಡ ಬಂಧನಕ್ಕೆ ಒಳಗಾಗಿದ್ದಾನೆ. ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದಲ್ಲಿ ಯುವಕ ಜೀವ ಕಳೆದುಕೊಂಡಿದ್ದಾನೆ. ಒಟ್ಟಾರೆ ಸೋಮವಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಅಪರಾಧ ಪ್ರಕರಣಗಳ ಸಮಗ್ರ ಚಿತ್ರಣ ಇಲ್ಲಿದೆ.
ಜೆ.ಸಿ. ನಗರ: ಆಫ್ರಿಕನ್ ಪ್ರಜೆ ಲಾಕಪ್ ಡೆತ್
ಇಡೀ ರಾಜಧಾನಿ ಬೆಂಗಳೂರು ಮತ್ತೆ ವಿದೇಶಿಯರ ವಿಚಾರದಲ್ಲಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಡ್ರಗ್ ಪೆಡ್ಲಿಂಗ್ ಆರೋಪದಡಿ ಪೊಲೀಸರು ವಶಕ್ಕೆ ಪಡೆದಿದ್ದ ಕಾಂಗರೋ ದೇಶದ ಪ್ರಜೆ ಜಾನ್ ಎಂಬಾತ ಪೊಲೀಸರ ಕಸ್ಟಡಿಯಲ್ಲಿರುವಾಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ಜಾನ್ ಅಲಿಯಾಸ್ ಜೋಯಲ್ ಮಾಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಇದೊಂದು ಲಾಕಪ್ ಡೆತ್ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಆಫ್ರಿಕನ್ ಪ್ರಜೆಗಳು ಜೆ.ಸಿ. ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಮಹಿಳಾ ಪಿಎಸ್ಐ ಮೇಲೆ ಆಫ್ರಿಕನ್ ಪ್ರಜೆಗಳು ಹಲ್ಲೆಗೆ ಯತ್ನಿಸಿದ್ದು ಶಾಂತಿಯುತ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದರು. ಆಫ್ರಿಕನ್ ಪ್ರಜೆಗಳು ಗಂಭೀರ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಪೊಲೀಸರ ಹಲ್ಲೆ ಮಾಡಿದ ಅರೋಪದಡಿ ಹತ್ತು ಆಫ್ರಿಕನ್ ಪ್ರಜೆಗಳನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.
ಆಫ್ರಿಕಾ ದೇಶದ ರಾಯಬಾರಿ ಕಚೇರಿ ಅಧಿಕಾರಿ ಸ್ಪಷ್ಟನೆ:
ಆಫ್ರಿಕನ್ ಪ್ರಜೆ ಡ್ರಗ್ ಮಾರಾಟ ಜಾಲ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಪೊಲೀಸರ ವಶದಲ್ಲಿ ಸಾವನ್ನಪ್ಪಿದ್ದಾನೆ. ಜೋಯಲ್ ಸಾವಿನ ವಿಚಾರ ತಿಳಿದು ಆತನ ಸ್ನೇಹಿತರು ಉದ್ವೇಗಗೊಂಡಿದ್ದಾರೆ. ಈ ವೇಳೆ ಗಲಾಟೆಯಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಹೀಗೆ ಹಾಗಬಾರದಿತ್ತು. ಕೊರೊನಾ ದಿಂದ ಕೆಲ ವಿದ್ಯಾರ್ಥಿಗಳ ವೀಸಾ ಅವಧಿ ಮುಗಿದಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದು ಕೆಲವು ಸಮಯ ನೀಡುವಂತೆ ಮನವಿ ಮಾಡುತ್ತೇವೆ ಎಂದು ಆಫ್ರಿಕನ್ ರಾಯಬಾರಿ ಕಚೇರಿಯ ಅಧಿಕಾರಿ ಮೋಹನ್ ಸುರೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜಾಜಿನಗರ: ಬೃಂದಾವನ್ ಪ್ರಾಪರ್ಟಿ ಎಂಡಿ ಸೆರೆ
ಸುಮಾರು ಐದನೂರಕ್ಕೂ ಮಂದಿಗೆ ಟೋಪಿ ಹಾಕಿ ಕಚೇರಿಯನ್ನು ಖಾಲಿ ಮಾಡಿದ್ದ ಬೃಂದಾವನ್ ಪ್ರಾಪರ್ಟಿ ವ್ಯವಸ್ಥಾಪಕ ನಿರ್ದೇಶಕ ದಿನೇಶ ಗೌಡ ಬಂಧನಕ್ಕೆ ಒಳಗಾಗಿದ್ದಾನೆ. ಹಾಸನದ ಅರಕಲಗೂಡಿನಲ್ಲಿದ್ದ ದಿನೇಶ್ ನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಈವರೆಗೂ ಸುಮಾರು ಐದು ನೂರಕ್ಕೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿವೆ. ನಾನು ಯಾರಿಗೂ ಮೋಸ ಮಾಡಲ್ಲ. ನೀವು ಹಾಕಿರುವ ಹಣ ಭೂಮಿ ರೂಪದಲ್ಲಿದೆ. ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿದ್ದೇನೆ ಎಂದು ತಪ್ಪಿಸಿಕೊಳ್ಳುವ ಷಡ್ಯಂತ್ರ ಮಾಡಿದ್ದ ದಿನೇಶ್ ಗೌಡ ವಿಡಿಯೋ ರಿಲೀಸ್ ಮಾಡಿದ್ದ. ವಿಡಿಯೋ ರಿಲೀಸ್ ಬೆನ್ನಲ್ಲೇ ಆತನನ್ನು ಬಂಧಿಸಲಾಗಿದೆ. ಇನ್ನೂ ಈತನ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣ ಆಧರಿಸಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ಸಂಜಯ್ ನಗರ: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಅಜ್ಜನ ಮೇಲೆ ಹಲ್ಲೆ:
ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ರಾಮಮೂರ್ತಿನಗರ ನಿವಾಸಿ ಮುನಿರಾಜು ಮೇಲೆ ಮೂವರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮಗಳ ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಮುನಿರಾಜು ಮಗಳ ಜತೆ ಸಹ ಅಸಭ್ಯವಾಗಿ ವರ್ತಿಸಿ ದೈಹಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ತನಾಗದ ಅನುಭವವನ್ನು ತನ್ನ ಸ್ನೇಹಿತರಿಗೆ ತಿಳಿಸಿದ್ದು, ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಮುನಿರಾಜುನನ್ನು ಕೆಳಗೆ ತಳ್ಳಿದ್ದ ಹೆಲ್ಮೆಟ್ ದಾರಿಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಚಾಕುವಿನಿಂದ ಇರಿದಿದ್ದು, ಬಳಿಕ ಸಲಾಕೆಯಿಂದ ತಿವಿದಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಂಜಯ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುನಿರಾಜು ಮೇಲೆ ಹಲ್ಲೆ ಮಾಡುವ ವಿಡಿಯೋ ಬೆಂಗಳೂರಿನಲ್ಲಿ ವೈರಲ್ ಆಗಿದೆ.
ನಂದಿನಿ ಲೇಔಟ್: ಆಟದ ವಿಚಾರಕ್ಕೆ ಯುವಕ ಬರ್ಬರ ಹತ್ಯೆ
ಮಕ್ಕಳು ಆಟ ಆಡುವ ವಿಚಾರವಾಗಿ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಂದಿನಿ ಬಡಾವಣೆಯ ಕಾರ್ತಿಕ್ ಕೊಲೆಯಾದ ಯುವಕ. ನೆರೆ ಮನೆಯ ಅರುಣ್ ಮತ್ತು ಆತನ ಸ್ನೇಹಿತರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆಟ ಆಡುವ ವಿಚಾರವಾಗಿ ಅರುಣ್ ಮತ್ತು ಕಾರ್ತಿಕ್ ನಡುವೆ ಜಗಳವಾಗಿದ್ದು ಮಾತಿಗೆ ಮಾತು ಬೆಳೆದು, ಅರುಣ್ ಮತ್ತು ಸಹಚರರು ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಕಾರ್ತೀಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದು ನಂದಿನಿ ಲೇಔಟ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಂದ್ರಾ ಲೇಔಟ್: ಪತಿಯನ್ನು ಹತ್ಯೆ ಮಾಡಿದ ಪತ್ನಿ
ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಚಂದ್ರಾ ಲೇಔಟ್ ನಿವಾಸಿ ಬೇಬಿ ಆಯಿಷಾ ಕೊಲೆಯಾದ ಮಹಿಳೆ. ಕ್ಷುಲ್ಲಕ ವಿಚಾರಕ್ಕೆ ಗಂಡ ಸಯ್ಯದ್ ಪತ್ನಿ ಜತೆ ಜಗಳ ತೆಗೆದಿದ್ದಾನೆ. ಇದಕ್ಕೆ ಪ್ರತಿರೋಧ ತೋರಿದ ಪತ್ನಿ ಬೇಬಿ ಸಯ್ಯದಾಳನ್ನು ಚಾಕುವಿನಿಂದ ಇರಿದಿದ್ದು, ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಚಂದ್ರಾ ಬಡಾವಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ನಿಕರ ಕಾರಣ ಗೊತ್ತಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಟೀಲ್ ತಿಳಿಸಿದ್ದಾರೆ.
ಕೆ.ಪಿ. ಅಗ್ರಹಾರ: ರೌಡಿಗಳಿಗೆ ನಡುಕ ಹುಟ್ಟಿಸಿದ ಪೊಲೀಸರು:
ಪಶ್ಚಿಮ ವಿಭಾಗದ ಮಾಗಡಿ ರಸ್ತೆ ಹಾಗೂ ಕೆ.ಪಿ. ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಗಳ ಮೇಲೆ ಏಕಾಏಕಿ ಪೊಲೀಸರು ದಾಳಿ ನಡೆಸಿ ಸೋಮವಾರ ಶೋಧ ನಡೆಸಿದರು. ಮಾರಕಾಸ್ತ್ರ ಹಾಗೂ ಮಾದಕ ವಸ್ತು ಸಿಕ್ಕಿದ ಕೆಲವು ರೌಡಿ ಶೀಟರ್ಗಳನ್ನು ಬಂಧಿಸಲಾಗಿದೆ. ಉಳಿದಂತೆ ಕೆಲವರಿಗೆ ಎಚ್ಚರಿಕೆ ಕೊಟ್ಟು ರವಾನಿಸಲಾಗಿದೆ. ಕೆ.ಪಿ. ಆಗ್ರಹಾರ ಮತ್ತು ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯ ಸುಮಾರು ನೂರಕ್ಕೂ ಹೆಚ್ಚು ರೌಡಿಗಳ ಮನೆಗಳು ದಾಳಿಗೆ ಒಳಗಾಗಿವೆ.
Recommended Video
ಡಿಸಿಪಿ ಸಂಜೀವ ಎಂ. ಪಾಟೀಲ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಕೆಲ ರೌಡಿಗಳಿಗೆ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ರೌಡಿ ಚಟುವಟಿಕೆ ಹೆಚ್ಚಾಗಿತ್ತು. ರೌಡಿಗಳ ಬೀದಿ ಕಾಳಗಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರೌಡಿಗಳ ನಿವಾಸಗಳ ಮೇಲೆ ದಾಳಿ ನಡೆಯುತ್ತಿವೆ.