ಕೊರೊನಾ ನಿಭಾಯಿಸಲು ಸರಕಾರ ವಿಫಲ: ಕೆಪಿಸಿಸಿಯಿಂದ ಟಾಸ್ಕ್ ಫೋರ್ಸ್ ರಚನೆ
ಬೆಂಗಳೂರು, ಮಾರ್ಚ್ 27: ಒಂದು ದಿನದ ಹಿಂದೆ, ಸರಕಾರದ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ದ ಕಿಡಿಕಾರಿದ್ದ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೊರೊನಾ ನಿಭಾಯಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
ಪಕ್ಷದ ಕಚೇರಿಯಲ್ಲಿ ಹಿರಿಯ ನಾಯಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಡಿಕೆಶಿ, "ಪ್ರಪಂಚಕ್ಕೆ ಮಹಾಮಾರಿ ಕಾಯಿಲೆ ಎದುರಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಕೆಲಸ ಮಾಡುತ್ತಿದೆ. ಕಾಂಗ್ರೆಸ್, ಸರಕಾರಕ್ಕೆ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ. ಆದರೆ, ರಾಜ್ಯ ಸರಕಾರ ಪರಿಸ್ಥಿತಿ ನಿಭಾಯಿಸಲು ಸಂಪೂರ್ಣ ವಿಫಲವಾಗಿದೆ" ಎಂದು ಆರೋಪಿಸಿದರು.
ಹೆಸರು ಕೊರೊನಾ ವೈರಸ್, ಲಾಭ ಮಾಡಿಕೊಳ್ಳುತ್ತಿರುವುದು RSS
"ನಮ್ಮ ಪಕ್ಷದಲ್ಲೂ ಹಲವು ಕಾರ್ಯಕರ್ತರು ಮತ್ತು ಮುಖಂಡರು ವೈದ್ಯಕೀಯ ಶಿಕ್ಷಣವನ್ನು ಪಡೆದವರು ಇದ್ದಾರೆ. ಇವರಲ್ಲಿ ಕೆಲವರು ಆಯ್ಕೆಮಾಡಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. ಮಾಜಿ ಆರೋಗ್ಯ ಸಚಿವ ರಮೇಶ್ ಕುಮಾರ್ ಇದರ ಅಧ್ಯಕ್ಷರಾಗಿರುತ್ತಾರೆ" ಎಂದು ಡಿಕೆಶಿ ಹೇಳಿದರು.
"ಕರ್ನಾಟಕ ಕಾಂಗ್ರೆಸ್ ರಿಲೀಫ್ ಫಂಡ್ ಆರಂಭಿಸುತ್ತಿದೆ. ನಮ್ಮ ಪಕ್ಷದ ಎಲ್ಲಾ ಶಾಸಕರಿಗೆ ಒಂದು ಸೂಚನೆಯನ್ನು ನೀಡಲಾಗಿದೆ. ಕನಿಷ್ಠ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲು ಸೂಚಿಸಿದ್ದೇವೆ. ಕಾರ್ಯಕರ್ತರೂ ಇದಕ್ಕೆ ದೇಣಿಗೆ ನೀಡಬಹುದು" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
"ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ನಮ್ಮ ಸರಕಾರದ ಅವಧಿಯಲ್ಲಿ ಆರಂಭಿಸಿದಾಗ, ಇದೇ ಬಿಜೆಪಿಯವರು ಲೇವಡಿ ಮಾಡಿದ್ದರು. ಈಗ ಇದರ ಮಹತ್ವ ಏನು ಎನ್ನುವುದು ಇವರಿಗೆ ಅರ್ಥವಾಗಿದೆ" ಎಂದು ಡಿಕೆಶಿ ಕಿಡಿಕಾರಿದರು.
ದೇಶದಲ್ಲಿ 20 ಸಾವು, ರಾಜ್ಯದಲ್ಲಿ ಒಂದೇ ದಿನ 7 ಸೋಂಕು ಪತ್ತೆ
"ಕೊರೊನಾ ಒಂದು ದೊಡ್ಡ ಪಿಡುಗು. ಮುಖ್ಯಮಂತ್ರಿಗಳು ಸರ್ವಪಕ್ಷದ ಸಭೆಯನ್ನು ಕರೆಯಬೇಕಿತ್ತು. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ" ಎಂದು ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.