ಬಿಜೆಪಿಗೆ ಮತ್ತೊಂದು ಠಕ್ಕರ್ ಕೊಡಲು ಕಾಂಗ್ರೆಸ್ ಭರ್ಜರಿ ಸಿದ್ದತೆ
ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಭರ್ಜರಿ ಯಶಸ್ಸಿನಿಂದ ಬೀಗುತ್ತಿರುವ ಕರ್ನಾಟಕ ಕಾಂಗ್ರೆಸ್ ಮತ್ತೊಂದು ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ವಹಿಸಿಕೊಂಡಿದ್ದಾರೆ.
ಇದೊಂದು ಪಕ್ಷಾತೀತ ಕಾರ್ಯಕ್ರಮ ಎಂದು ಡಿಕೆಶಿ ಹೇಳುತ್ತಿದ್ದರೂ, ಸಿದ್ದರಾಮಯ್ಯನವರ ನಂತರ ತಮ್ಮ ಶಕ್ತಿ ಪ್ರದರ್ಶನಕ್ಕೆ ವೇದಿಕೆಯನ್ನಾಗಿ ರೂಪಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಬಿಬಿಎಂಪಿ ಮೀಸಲಾತಿ ವಿರುದ್ದ ಕೋರ್ಟಿಗೆ: ಬಿಜೆಪಿಗೆ ಬೇಕಾಗಿದ್ದು ಅದೇ?
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ಬೃಹತ್ ಪಾದಯಾತ್ರೆಯನ್ನು ನಡೆಸಲು ಪೂರ್ವಭಾವಿ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಆಗಸ್ಟ್ ಹದಿನೈದರಂದು ನಡೆಸಲು ಉದ್ದೇಶಿಸಲಾಗಿರುವ ಪಾದಯಾತ್ರೆ ಮತ್ತು ನಂತರದ ಸಭೆಗೆ ಒಂದು ಲಕ್ಷ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ.
ಬಿಜೆಪಿಯ ಘರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಕೌಂಟರ್ ನೀಡಲು ಈ ಕಾರ್ಯಕ್ರಮವನ್ನು ಕೆಪಿಸಿಸಿ ಆಯೋಜಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಯಾವುದೇ ಪಕ್ಷದ ಕಾರ್ಯಕ್ರಮಕ್ಕೆ ಸಡ್ಡು ಹೊಡೆಯಲು ಅಲ್ಲ ಎಂದು ಕಾಂಗ್ರೆಸ್ ಮುಖಂಡರು ವಾದಿಸುತ್ತಿದ್ದಾರೆ.
ಹಾಲೀ ಈ 6 ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಇಲ್ಲ?
ನ್ಯಾಷನಲ್ ಕಾಲೇಜು ಮೈದಾನದ ವರೆಗೆ ಪಾದಯಾತ್ರೆ ನಡೆಯಲಿದೆ
ಆಗಸ್ಟ್ ಹದಿನೈದರಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದ ವರೆಗೆ ಪಾದಯಾತ್ರೆ ನಡೆಯಲಿದೆ. ಅಂದು ಮಧ್ಯಾಹ್ನ 2.30ಕ್ಕೆ ಸುಮಾರು ಒಂದು ಲಕ್ಷ ಜನ ರಾಷ್ಟ್ರಧ್ವಜ ಹಿಡಿದುಕೊಂಡು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾಧ್ರಾ ಅವರನ್ನು ಕರೆಸುವ ಡಿ.ಕೆ.ಶಿವಕುಮಾರ್ ಅವರ ಯೋಜನೆಗೆ ಫಲ ಸಿಕ್ಕಿದ್ದು, ಪ್ರಿಯಾಂಕ ಅಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಿಯಾಂಕ ಅವರು ಬೆಂಗಳೂರಿನ ಈ ಕಾರ್ಯಕ್ರಮಕ್ಕೆ ಆಗಮಿಸುವುದು ಖಚಿತ
ಕಾಂಗ್ರೆಸ್ಸಿನ ಉನ್ನತ ಮೂಲಗಳೂ ಪ್ರಿಯಾಂಕ ಅವರು ಬೆಂಗಳೂರಿನ ಈ ಕಾರ್ಯಕ್ರಮಕ್ಕೆ ಆಗಮಿಸುವುದು ಖಚಿತ ಎಂದು ಹೇಳಿವೆ. ಆ ಮೂಲಕ, ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡುವ ಡಿಕೆಶಿ ಕಾರ್ಯತಂತ್ರ ಸರಿಯಾದ ದಾರಿಯಲ್ಲಿ ಸಾಗಿದಂತಿದೆ. ಈ ಕಾರ್ಯಕ್ರಮದಲ್ಲಿ ಯಾವುದೇ ನಾಯಕರಿಂದ ಭಾಷಣ ಮಾಡಿಸದ ನಿರ್ಧಾರಕ್ಕೆ ಡಿಕೆಶಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಖ್ಯಾತ ಗಾಯಕ ಹರಿಹರನ್ ಅವರ ಸಂಗೀತ ಕಾರ್ಯಕ್ರಮ
ಆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಹರಿಹರನ್ ಅವರ ಸಂಗೀತ ಕಾರ್ಯಕ್ರಮವಿರಲಿದೆ, ಜೊತೆಗೆ, ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸುವ ಕಾರ್ಯಕ್ರಮವಿರುತ್ತದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆದಿಯಾಗಿ ಹಿರಿಯ ಕಾಂಗ್ರೆಸ್ ಮುಖಂಡರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಯಶಸ್ಸಿಗೆ ಡಿಕೆಶಿ ಮತ್ತು ತಂಡ ಠೊಂಕ ಕಟ್ಟಿ ನಿಂತಿದೆ.
ಬಿಜೆಪಿಗೆ ಮತ್ತೊಂದು ಠಕರ್ ಕೊಡಲು ಕಾಂಗ್ರೆಸ್ ಭರ್ಜರಿ ಸಿದ್ದತೆ
ಎಲ್ಲಾ ವರ್ಗದ ಜನರು ತಮ್ಮ ಕುಟುಂಬದ ಸಮೇತ ಕಾರ್ಯಕ್ರಮಕ್ಕೆ ಆಗಮಿಸುವಂತೆ ಡಿಕೆಶಿ ಮನವಿ ಮಾಡಿದ್ದಾರೆ. ಪ್ರಿಯಾಂಕ ಗಾಂಧಿ ಬರುವುದು ಖಚಿತವಾಗಿರುವುದರಿಂದ, ಒಂದು ವೇಳೆ, ಮಳೆರಾಯನ ಕೃಪೆಯಿದ್ದರೆ, ಕಾಂಗ್ರೆಸ್ಸಿನ ಮತ್ತೊಂದು ಕಾರ್ಯಕ್ರಮ, ಅದೂ ಒಂದೇ ತಿಂಗಳ ಅವಧಿಯಲ್ಲಿ ಯಶಸ್ಸು ಕಾಣುವುದು ಖಂಡಿತ ಎನ್ನುವುದು ಕಾರ್ಯಕರ್ತರ ವಿಶ್ವಾಸದ ಮಾತು.
Recommended Video