ಸಾಮೂಹಿಕ ನಾಯಕತ್ವ: ಮತ್ತೆ ಕಾಂಗ್ರೆಸ್ ಕಾಲೆಳೆದ ಬಿಜೆಪಿ
ಬೆಂಗಳೂರು, ಏಪ್ರಿಲ್ 29: ಯಾರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಲಿದೆ ಎನ್ನುವ ಚರ್ಚೆ ಪಕ್ಷದ ಆಂತರಿಕ ಮತ್ತು ಕಾರ್ಯಕರ್ತರ ವಲಯದಲ್ಲಿ ನಡೆಯುತ್ತಲೇ ಬಂದಿದೆ. ಕಾಟಾಚಾರಕ್ಕೆ ರಾಜ್ಯ ನಾಯಕರಿಂದ ಉತ್ತರ ಬರುತ್ತಿದ್ದರೂ ಖಡಾಖಂಡಿತವಾಗಿ ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಬಾಯಿಬಿಡುತ್ತಿಲ್ಲ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಂಟಿಯಾಗಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಅವರವರ ಅಭಿಮಾನಿಗಳು 'ಮುಂದಿನ ಮುಖ್ಯಮಂತ್ರಿ' ಎಂದು ಘೋಷಣೆ ಕೂಗುವುದು ನಡೆಯುತ್ತಲೇ ಬರುತ್ತಿದೆ.
ಸಿದ್ದರಾಮಯ್ಯ ಆಯೋಜಿಸಿದ್ದ ಜಾಗದಲ್ಲೇ ಕುಮಾರಸ್ವಾಮಿ ಇಫ್ತಾರ್ ಕೂಟ!
ಕಾರ್ಯಕರ್ತರ ಈ ಉತ್ಸಾಹ ಹಲವು ಬಾರಿ ಕಾಂಗ್ರೆಸ್ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದುಂಟು. ಇದು ಹಲವು ಬಾರಿ ಬಿಜೆಪಿಗೂ ಕಾಂಗ್ರೆಸ್ ವಿರುದ್ದ ಹರಿಹಾಯಲು ಅಸ್ತ್ರವಾಗಿ ಪರಿಣಮಿಸಿದೆ. ಈಗ, ಆ ವಿಚಾರವನ್ನು ಮತ್ತೆ ಬಿಜೆಪಿ ಕೆದಕಿದೆ.
ತುಮಕೂರು ಭಾಗದ ಪ್ರಭಾವೀ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿಯ ಐಟಿ ಘಟಕ ಕಾಂಗ್ರೆಸ್ಸಿನ ಕಾಲೆಳೆದಿದೆ. ಸಿದ್ದರಾಮಯ್ಯನವರು ಜಾಣ ಮೌನದ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಠಕ್ಕರ್ ನೀಡುತ್ತಿದೆ ಎಂದು ಟ್ವೀಟ್ ಮಾಡಿದೆ.
'ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಅವರ ಅಕ್ಕಪಕ್ಕದಲ್ಲೇ ಪರ್ಸೆಂಟೇಜ್ ವ್ಯವಹಾರ'
ರಾಜಣ್ಣ ಅವರು ಕಾಂಗ್ರೆಸ್ ತೊರೆಯಲು ಮುಂದಾಗಿದ್ದರು
"ಸಿದ್ದರಾಮಯ್ಯನವರು ರಾಜ್ಯದ ಮಾಸ್ ಲೀಡರ್, ಅವರ ಸೇವೆ ಪಕ್ಷಕ್ಕೆ ಅತಿಮುಖ್ಯ. ಸಿದ್ದರಾಮಯ್ಯ ಅವರು ಇಲ್ಲವೆಂದರೆ ಕಾಂಗ್ರೆಸ್ ಪಕ್ಷ ಇರಲ್ಲ. ಅವರು ಕಾಂಗ್ರೆಸ್ಸಿಗೆ ಅನಿವಾರ್ಯ"ಎಂದು ಮಾಜಿ ಶಾಸಕ ಮತ್ತು ತುಮಕೂರು ಭಾಗದ ಪ್ರಭಾವೀ ಮುಖಂಡ ಕೆ.ಎನ್.ರಾಜಣ್ಣ ಹೇಳಿಕೆಯನ್ನು ನೀಡಿದ್ದರು. ಶಿರಾ ಕ್ಷೇತ್ರದ ಉಪ ಚುನಾವಣೆಯ ವೇಳೆ ರಾಜಣ್ಣ ಅವರು ಕಾಂಗ್ರೆಸ್ ತೊರೆಯಲು ಮುಂದಾಗಿದ್ದರು. ಇದಾದ ನಂತರ, ಕೆಪಿಸಿಸಿ ಅಧ್ಯಕ್ಷರು ಇವರ ಮನವೊಲಿಸಿದ್ದರು. ತುಮಕೂರು ಜಿಲ್ಲಾ ರಾಜಕಾರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರೊಂದಿಗೆ ಮೊದಲಿನಿಂದಲೂ ಮುನಿಸನ್ನು ರಾಜಣ್ಣ ಹೊಂದಿದ್ದರು.
ಕೆಪಿಸಿಸಿ ಅಧ್ಯಕ್ಷರು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ
"ಒಂದು ಕಡೆ ಕೆಪಿಸಿಸಿ ಅಧ್ಯಕ್ಷರು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಮೂಲಕ ʼಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆʼ ಎಂದು ಹೇಳಿಸುತ್ತಿದ್ದಾರೆ. #ಬುರುಡೆರಾಮಯ್ಯ ಅವರೇ, ಜಾಣ ಮೌನದ ಮೂಲಕ @DKShivakumar ಅವರಿಗೆ ಟಕ್ಕರ್ ನೀಡುತ್ತಿದ್ದೀರಾ?" ಎನ್ನುವ ಪ್ರಶ್ನೆಯನ್ನು ಬಿಜೆಪಿ ರಾಜ್ಯ ಐಟಿ ಸೆಲ್ ಎತ್ತಿದೆ.
|
ರಾಜಸ್ಥಾನದಲ್ಲಿ ನಡೆಯುವ ಚಿಂತನ ಶಿಬಿರದಲ್ಲೂ ಸಿದ್ದರಾಮಯ್ಯ
"ಕಾಂಗ್ರೆಸ್ ನಾಯಕ ರಾಜಣ್ಣ ಅವರು, ಸಿದ್ದರಾಮಯ್ಯ ಪಕ್ಷಕ್ಕೆ ಅನಿವಾರ್ಯ ಎಂದಿದ್ದಾರೆ. ಮೇ ತಿಂಗಳಲ್ಲಿ ರಾಜಸ್ಥಾನದಲ್ಲಿ ನಡೆಯುವ ಚಿಂತನ ಶಿಬಿರದಲ್ಲೂ ಸಿದ್ದರಾಮಯ್ಯ ಅವರ ಹೆಸರೇ ಇದೆ, ಅಲ್ಲದೆ ಕೆಲ ಶಾಸಕರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಾಗಾದರೆ @DKShivakumar ಆಟಕ್ಕುಂಟು ಲೆಕ್ಕಕ್ಕಿಲ್ಲವೇ?" ಎನ್ನುವ ಪ್ರಶ್ನೆಯನ್ನು ಬಿಜೆಪಿ ಐಟಿ ಘಟಕ ಎತ್ತುವ ಮೂಲಕ, ಕಾಂಗ್ರೆಸ್ ನಾಯಕರ ಕಾಲೆಳೆದಿದೆ.
ಡಿಕೆ ವರ್ಸಸ್ ಸಿದ್ದು ಎನ್ನುವ ಹ್ಯಾಶ್ ಟ್ಯಾಗ್
ಡಿಕೆ ವರ್ಸಸ್ ಸಿದ್ದು ಎನ್ನುವ ಹ್ಯಾಶ್ ಟ್ಯಾಗ್ ಮೂಲಕ ಮತ್ತೊಂದು ಪ್ರಶ್ನೆಯನ್ನು ಎತ್ತಿರುವ ಬಿಜೆಪಿ, "ವಿಪಕ್ಷ ನಾಯಕ @siddaramaiah ಅವರು ಚುನಾವಣೆಗೆ ಆರು ತಿಂಗಳ ಮುನ್ನವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಎಲ್ಲಿಯೂ ಈ ಬಗ್ಗೆ ಉಲ್ಲೇಖಿಸಿಲ್ಲ. ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸಿದ್ದರಾಮಯ್ಯ ನಿಯಂತ್ರಣದಲ್ಲಿದೆಯೇ ಅಥವಾ ಡಿಕೆಶಿ ಬೆದರಿದ್ದಾರೆಯೇ?" ಎಂದು ಬಿಜೆಪಿ ಪ್ರಶ್ನಿಸಿದೆ.