ಕೇಂದ್ರ ಬಜೆಟ್ 2021: ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ
ಬೆಂಗಳೂರು, ಫೆಬ್ರುವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ನೇ ಸಾಲಿನ ಕೇಂದ್ರ ಬಜೆಟ್ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, "ಸಾಂಕ್ರಾಮಿಕ ರೋಗದ ಈ ಸಂಕಷ್ಟದ ನಡುವೆ ಇದಕ್ಕಿಂತಲೂ ಉತ್ತಮ ಬಜೆಟ್ ಮಂಡಿಸಲು ಅಸಾಧ್ಯ" ಎಂದು ಹೇಳಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಬಸವಳಿದ ಅರ್ಥ ವ್ಯವಸ್ಥೆಗೆ ಸಂಜೀವಿನಿಯಂತೆ ಆಗಿದೆ. ಕೋವಿಡ್ 19 ಸಾಂಕ್ರಾಮಿಕದ ಪರಿಣಾಮ ಸ್ಥಗಿತಗೊಂಡಿದ್ದ ಅರ್ಥವ್ಯವಸ್ಥೆ ಮತ್ತೆ ಪುಟಿದೇಳಲು ಈ ಬಜೆಟ್ ವೇಗವರ್ಧಕವಾಗಿ ಕೆಲಸ ಮಾಡಲಿದೆ ಎಂಬುದು ನನ್ನ ಬಲವಾದ ನಂಬಿಕೆ. ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟದ ನಡುವೆ ಇದಕ್ಕಿಂತಲೂ ಉತ್ತಮ ಬಜೆಟ್ ಮಂಡನೆ ಅಸಾದ್ಯ ಎಂದು ಹೇಳಿದ್ದಾರೆ.
ಬಜೆಟ್ 2021: ಕೇಂದ್ರ ಬಜೆಟ್ನ ಪ್ರಮುಖ ಅಂಶಗಳು
ರೋಗನಿಯಂತ್ರಣದ ಜೊತೆಗೆ ಅರ್ಥ ವ್ಯವಸ್ಥೆಯ ಪುನರುಜ್ಜೀವನಕ್ಕೆ ಅಗತ್ಯ ಕಾರ್ಯತಂತ್ರವನ್ನು ಪ್ರಕಟಿಸಲಾಗಿದೆ. ಕೃಷಿ ಕ್ಷೇತ್ರದ ಬಲವರ್ಧನೆ, ರೈತರ ಅಭಿವೃದ್ಧಿಗೆ ಪ್ರಾಮುಖ್ಯ, ಕೌಶಲ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಬೆಳವಣಿಗೆಗೆ ಈ ಬಜೆಟ್ ನಲ್ಲಿ ವಿಶೇಷ ಗಮನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ 2022 ರೊಳಗೆ ರೈತರ ಆದಾಯ ದ್ವಿಗುಣಗೊಳಿಸಲು ಈ ಬಜೆಟ್ ಭೂಮಿಕೆ ಒದಗಿಸಿದೆ ಎಂದು ಹೇಳಿದ್ದಾರೆ.
ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ 16.50 ಲಕ್ಷ ಕೋಟಿ ರೂ. ನಿಗದಿಮಾಡಲಾಗಿದೆ. ಎ.ಪಿ.ಎಂ.ಸಿ ಹಾಗೂ ಎಂಎಸ್ಪಿ ವ್ಯವಸ್ಥೆ ಮುಂದುವರಿಕೆ ಮತ್ತು ಬಲವರ್ಧನೆಗೆ ಒತ್ತು ನೀಡಲಾಗಿದೆ. ಕೃಷಿ ಮಾರುಕಟ್ಟೆಗೆ ಮೂಲ ಸೌಕರ್ಯಗಳಿಗಾಗಿ ನಿಧಿ, ಸೂಕ್ಷ್ಮ ನೀರಾವರಿ ಯೋಜನೆಯ ಅನುದಾನವನ್ನು ಎರಡು ಪಟ್ಟು ಮಾಡಿದ್ದು ಮತ್ತು 22 ಬೆಳೆಗಳಿಗೆ ಮೌಲ್ಯವರ್ಧನೆ ಯೋಜನೆ ಘೋಷಿಸಿರುವುದರಿಂದ ರೈತರಿಗೆ ಸಾಕಷ್ಟು ನೆರವಾಗಲಿದೆ. ಜೊತೆಗೆ ಮಿತ ವೆಚ್ಚದ ಮನೆಗಳ ನಿರ್ಮಾಣ ಮಾಡುವವರಿಗೆ ತೆರಿಗೆ ರಜೆ ನೀಡಿರುವುದು ಸ್ವಾಗತಾರ್ಹ ಎಂದರು.
ಕರ್ನಾಟಕಕ್ಕೆಂದು ಕೇಂದ್ರ ಬಜೆಟ್ ನಲ್ಲಿ ಬೆಂಗಳೂರು ಮೆಟ್ರೋ ರೈಲು ಯೋಜನೆಗೆ 14778 ಕೋಟಿ ರೂಪಾಯಿ ಒದಗಿಸಲಾಗಿದೆ. ಇದು ನಮ್ಮವರೇ ಆದ ಅರ್ಥ ಸಚಿವೆ ನೀಡಿರುವ ಕೊಡುಗೆ ಎಂದು ಶ್ಲಾಘಿಸಿದ್ದಾರೆ.
ರಾಷ್ಟ್ರದ ರಸ್ತೆ ಸಂಪರ್ಕ ಜಾಲ ಸುಧಾರಿಸಲು ಭಾರತ ಮಾಲಾ ಯೋಜನೆಯಡಿಯಲ್ಲಿ 3.30 ಲಕ್ಷ ಕೋಟಿ ರೂ. ಹಾಗೂ ವಿದ್ಯುತ್ ವಲಯಕ್ಕೆ 3 ಲಕ್ಷ ಕೋಟಿ ರೂ. ಒದಗಿಸಿರುವುದು ಪ್ರಶಂಸನೀಯ. ಸಾರ್ವಜನಿಕ ಬಸ್ ಸಾರಿಗೆ ವ್ಯವಸ್ಥೆಗೆ 18 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಕಡಿತಗೊಳಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Recommended Video