ಪ್ರವಾಹ ಪರಿಹಾರಕ್ಕೆ ದೇಣಿಗೆ ನೀಡಲು ಯಡಿಯೂರಪ್ಪ ಮನವಿ
ಬೆಂಗಳೂರು, ಆಗಸ್ಟ್ 14 : "ಪ್ರವಾಹ ಪೀಡಿತ ಗ್ರಾಮಗಳ ಪುನಶ್ಚೇತನಕ್ಕೆ 10 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಪುನಶ್ಚೇತನಗೊಳ್ಳುವ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬುಧವಾರ ಯಡಿಯೂರಪ್ಪ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲಾ ಉದ್ದಿಮೆದಾರರನ್ನು ಆಹ್ವಾನಿಸಿ ನೆರೆ ಪೀಡಿತ ಪ್ರದೇಶಗಳಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಅನುದಾನ, ನೋಟ್ ಪ್ರಿಂಟ್ ಮಹಿಮೆ: ಎಚ್ಕೆಪಿ
ಕಳೆದ ಕೆಲವು ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಇವರ ನೆರವಿಗೆ ಎಲ್ಲ ಕೈಗಾರಿಕೋದ್ದಿಮೆದಾರರು ನಿಂತು ಉದಾತ್ತವಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದರು.
ಕೊಡಗಿನಲ್ಲೀಗ ಪ್ರವಾಹ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ
"ರಾಜ್ಯದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. 23 ಜಿಲ್ಲೆಯ 103 ತಾಲೂಕು ನೆರೆ ಪೀಡಿತ ಎಂದು ಘೋಷಿಸಲಾಗಿದೆ. ಮಹಾರಾಷ್ಟ್ರ, ಕೇರಳ, ಕರ್ನಾಟಕದಲ್ಲಿ ಮಳೆಯಿಂದ ಭೂ ಕುಸಿತ ಸಂಭವಿಸಿದೆ. ಹಳ್ಳಿ, ಪಟ್ಟಣ ಜಲಾವೃತವಾಗಿದೆ. ಸೇತುವೆ ಮುಳುಗಿ, ರಸ್ತೆ ಹಾಳಾಗಿದೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ" ಎಂದು ಹೇಳಿದರು.
"ನೆರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ 6.97 ಲಕ್ಷ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 1160 ಪರಿಹಾರ ಕೇಂದ್ರ ತೆರೆಯಲಾಗಿದೆ. 56 ಸಾವಿರ ಮನೆ ವಾಸಕ್ಕೆ ಯೋಗ್ಯವಿಲ್ಲ ಎಂದು ಘೋಷಿಸಿದ್ದೇವೆ. ಅಧಿಕಾರಿಗಳು, ನಾನು ಪ್ರವಾಹ ಮಾಡಿ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿದ್ದೇವೆ. ರಕ್ಷಣೆ, ಪರಿಹಾರ ಕೆಲಸ ನಡೆಯುತ್ತಿದೆ. ಕಳೆದೆರಡು ದಿನದಿಂದ ಮಳೆ ಹತೋಟಿಗೆ ಬಂದಿದೆ" ಎಂದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹರಿದು ಬಂದ ಹಣವೆಷ್ಟು?
"ಪ್ರವಾಹದಿಂದ ಆದ ಹಾನಿಯ ಸಂಪೂರ್ಣ ಚಿತ್ರಣ, ನಷ್ಟದ ಅಂದಾಜು ತಿಳಿಯಲು ಇನ್ನು ಕೆಲವು ದಿನ ಬೇಕಾಗಲಿದೆ. 23 ಜಿಲ್ಲೆಗಳ ಪೈಕಿ 200 ಗ್ರಾಮವನ್ನು ಸ್ಥಳಾಂತರಿಸುವ ಪರಿಸ್ಥಿತಿ ಇದೆ. ಇಂಥ ಸ್ಥಿತಿಯಲ್ಲಿ ಉದ್ಯಮಿದಾರರು ಸಹಾಯ ಹಸ್ತ ಚಾಚಬೇಕು. ಉದಾರ ಮನಸ್ಸಿನಿಂದ ದೇಣಿಗೆ ನೀಡಿ" ಎಂದು ಮನವಿ ಮಾಡಿದರು.
"10 ಕೋಟಿಗೂ ಹೆಚ್ಚು ನೆರವು ನೀಡಿದ ಗ್ರಾಮಕ್ಕೆ ನಿಮ್ಮ ಸಂಸ್ಥೆ ಹೆಸರನ್ನೇ ಇಡಲು ತೀರ್ಮಾನಿಸಿದ್ದೇವೆ. ಆ ಗ್ರಾಮವನ್ನು ಹಣ ನೀಡುವ ಸಂಸ್ಥೆ ದತ್ತು ಪಡೆದುಕೊಂಡಂತೆ ಬಿಂಬಿಸಲಾಗುವುದು.
ಎಲ್ಲಾ ಕೈಗಾರಿಕೋದ್ಯಮಿಗಳೊಂದಿಗೆ ನಮ್ಮ ಸರ್ಕಾರವಿದೆ. ನೀವು ಏನು ಸಹಕಾರ ಬಯಸುತ್ತೀರೋ ಅದನ್ನು ನಾವು ಕೊಡಲು ಸಿದ್ಧ" ಎಂದರು.
ಕಂಪನಿಗಳ ಕೊಡುಗೆ: ಬ್ರಿಟಾನಿಯಾ ಕಂಪನಿಯು ಆಹಾರ ಪದಾರ್ಥಗಳ ಕೊಡುಗೆ ನೀಡಿದೆ. ಟಿವಿಎಸ್ ಮೋಟಾರು ಸಂಸ್ಥೆ 1 ಕೋಟಿ ರೂ. ದೇಣಿಗೆಯನ್ನು ಸಿಎಂ ಪರಿಹಾರ ನಿಧಿಗೆ ನೀಡಲಿದೆ. ಜಿಎಸ್ಕೆ ಸಂಸ್ಥೆ ಹಾಗೂ ಯೂನಿವರ್ಸಲ್ ಬಿಲ್ಡರ್ಸ್ ಎಲ್ಲಾ ಜಿಲ್ಲೆಯಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಪುನಶ್ಚೇತನಕ್ಕೆ ಆದ್ಯತೆ ನೀಡಲಿದೆ.
ಶಾಹಿ ಎಕ್ಸ್ಪೋರ್ಟ್ಸ್ ಮಹಿಳೆಯರಿಗೆ ಸೀರೆ ಹಾಗೂ ಉಡುಪುಗಳ ನೆರವು ನೀಡಿದೆ. ಕಾರ್ಪೋರೇಷನ್ ಬ್ಯಾಂಕ್ ಒಂದು ವಾರದಲ್ಲಿ ದೇಣಿಗೆ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದೆ, ಟಯೋಟ ಸಂಸ್ಥೆಯು 2 ಕೋಟಿ ರೂ. ದೇಣಿಗೆ ನೀಡಲು ನಿರ್ಧಾರ ಮಾಡಿದೆ.
ಲೋಗೋಸ್ ಗ್ರೂಪ್ 25 ಲಕ್ಷ ದೇಣಿಗೆ, ಕ್ರೆಡಾಯ್ 3 ಕೋಟಿ ರೂಪಾಯಿ, ವೋಲ್ವೊ ಗ್ರೂಪ್ ನೌಕರರ ಒಂದು ದಿನದ ಸಂಬಳ ಸೇರಿದಂತೆ ಇತರೆ ಕಂಪನಿಗಳು ಸಹ ತಮ್ಮಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿವೆ.