ಸುಪ್ರೀಂ ಅಂಗಣದಲ್ಲಿಂದು ಬಿಎಸ್ವೈ ಆಡಿಯೋ: ಅನರ್ಹರನ್ನು ದೇವರೇ ಕಾಪಾಡಬೇಕು!
ಎಲ್ಲಾ ಸಸೂತ್ರವಾಗಿದ್ದರೆ, ಈ ವಾರದಲ್ಲಿ (ನ 4-8) ಅನರ್ಹ ಶಾಸಕರ ಅರ್ಜಿಯ ತೀರ್ಪನ್ನು ನ್ಯಾ. ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಸರ್ವೋಚ್ಚ ನ್ಯಾಯಾಲಯ ಪೀಠ ಪ್ರಕಟಿಸುವ ಸಾಧ್ಯತೆಯಿತ್ತು. ಈಗಲೂ ಪ್ರಕಟಿಸಬಾರದೆಂದೇನೂ ಇಲ್ಲ. ಆದರೆ, ಅನರ್ಹ ಶಾಸಕರಿಗೆ, ಯಡಿಯೂರಪ್ಪನವರ ಆಡಿಯೋ ತಲೆನೋವಾಗಿ ಕೂತಿದೆ.
ಉಪಚುನಾವಣೆಯ ನಿಮಿತ್ತ, ಹುಬ್ಬಳ್ಳಿಯಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಸಿಎಂ ಯಡಿಯೂರಪ್ಪನವರ ಧ್ವನಿ ಎನ್ನಲಾಗುತ್ತಿರುವ ಆಡಿಯೋ ಬಹಿರಂಗವಾಗಿ, ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಕ್ಕೆ ನಾಂದಿ ಹಾಡಿದೆ.
ರಾಜ್ಯಪಾಲ ಕೈಗೆ ಆಡಿಯೋ ಬಾಂಬ್: ಸರ್ಕಾರ ವಜಾಕ್ಕೆ ಕೆಪಿಸಿಸಿ ಆಗ್ರಹ
ನಾಲ್ಕು ಗೋಡೆಯ ಮಧ್ಯೆ ಇರಬೇಕಾಗಿದ್ದ ಪಕ್ಷದ ಆಂತರಿಕ ವಿಚಾರ, ಈಗ, ರಾಜ್ಯದ ಮನೆಮನೆ ಮಾತಾಗಿದೆ. ಆಡಿಯೋ ಲೀಕ್ ಮಾಡಿದ ಹಿತಶತ್ರುಗಳಾರು ಅಥವಾ ಉದ್ದೇಶಪೂರ್ವಕವಾಗಿರುವುದೋ ಎನ್ನುವುದರ ಬಗ್ಗೆ ಚರ್ಚೆ ಹಲವು ಆಯಾಮದಲ್ಲಿ ನಡೆಯುತ್ತಿದೆ.
ಯಡಿಯೂರಪ್ಪ ಆಡಿಯೋ ವಿವಾದ; ಬಿಜೆಪಿಯ ಸ್ಪಷ್ಟನೆಗಳು
ಕಾಂಗ್ರೆಸ್, ಇಂದು (ನ 4) ಆಡಿಯೋ ವಿಚಾರವನ್ನು ಸುಪ್ರೀಂ ಅಂಗಣಕ್ಕೆ ಕೊಂಡೊಯ್ಯುವುದಾಗಿ ಹೇಳಿದೆ. ಇದನ್ನು, ಸರ್ವೋಚ್ಚ ನ್ಯಾಯಾಲಯ ಯಾವ ರೀತಿ ಸ್ವೀಕರಿಸಲಿದೆ ಎನ್ನುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಸುಪ್ರೀಂ ಮುಂದಿರುವ ಕೆಲವೊಂದು ಆಯ್ಕೆಗಳು:
ವಕೀಲರಾದ ಕಪಿಲ್ ಸಿಬಲ್ ಮತ್ತು ರಾಜೀವ್ ಧವನ್
ಕಾಂಗ್ರೆಸ್ ಪಕ್ಷದ ಪರವಾಗಿ ವಾದಿಸುತ್ತಿರುವ ವಕೀಲರಾದ ಕಪಿಲ್ ಸಿಬಲ್ ಮತ್ತು ರಾಜೀವ್ ಧವನ್, ಹತ್ತನೇ ಶೆಡ್ಯೂಲ್ ಪ್ರಕಾರ, ಯಾವ ರೀತಿ ಈ ಲೀಕ್ ಆಗಿರುವ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುತ್ತಾರೆ ಎನ್ನುವುದರ ಮೇಲೆ, ಈ ಕೇಸ್ ನಿಂತಿದೆ. ಮೇಲ್ನೋಟಕ್ಕೆ, ಸುಪ್ರೀಂ ಇದನ್ನು ಒಪ್ಪಿಕೊಳ್ಳುವುದು ಕಷ್ಟ.
ಕೇಂದ್ರ ಚುನಾವಣಾ ಆಯೋಗ
ಕೇಸ್ ಸುಪ್ರೀಂಕೋರ್ಟಿನಲ್ಲಿ ಇರುವಾಗಲೇ, ಚುನಾವಣಾ ಆಯೋಗ, ಉಪಚುನಾವಣೆಯ ದಿನಾಂಕವನ್ನು (ಡಿ 5) ಘೋಷಿಸಿದೆ. ನವೆಂಬರ್ ಹನ್ನೊಂದರಂದು ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಹಾಗಾಗಿ, ಇದಕ್ಕೆ ಮೊದಲು, ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿರುವುದರಿಂದ, ಆಡಿಯೋವನ್ನು ಪರಿಗಣಿಸುವ ಸಾಧ್ಯತೆ ಕಮ್ಮಿ ಎನ್ನುವುದು ಕಾನೂನು ಪಂಡಿತರ ಅಭಿಪ್ರಾಯ.
ಯಡಿಯೂರಪ್ಪನವರದ್ದು ಎನ್ನಲಾಗುತ್ತಿರುವ ಧ್ವನಿಸುರುಳಿ
ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರದ್ದು ಎನ್ನಲಾಗುತ್ತಿರುವ ಧ್ವನಿಸುರುಳಿಯನ್ನು ತಜ್ಞರಿಂದ ಪರೀಕ್ಷೆಗೊಳಿಸಲು ಸುಪ್ರೀಂ ಸೂಚಿಸಲೂ ಬಹುದು. ಒಂದು ವೇಳೆ, ಈ ರೀತಿ ನ್ಯಾಯಾಲಯ ಆದೇಶ ನೀಡಿದರೆ, ಅದು ಬೆಂಗಳೂರಿನಲ್ಲಿರುವ ಪ್ರಯೋಗಾಲಯದಲ್ಲೇ ಪರೀಕ್ಷೆ ನಡೆಯಬೇಕು. ವರದಿ ಬಂದ ನಂತರ, ವಿಚಾರಣೆ ನಡೆಯಬೇಕು. ಇದಕ್ಕೆಲ್ಲಾ ಕಾಲಾವಕಾಶ ಬೇಕಾಗುತ್ತದೆ.
ಅನರ್ಹ ಶಾಸಕರ ಭವಿಷ್ಯ ಮುಳ್ಳಿನ ಹಾದಿಯೇ ಸರಿ
ಇದೊಂದು ಗಂಭೀರ ಸಾಕ್ಷಿಯಾಗಿರುವುದರಿಂದ, ಸರ್ವೋಚ್ಚ ನ್ಯಾಯಾಲಯ ಇದನ್ನು ಪರಿಗಣಿಸಲೂ ಬಹುದು. ಒಂದು ವೇಳೆ, ಸರ್ವೋಚ್ಚ ನ್ಯಾಯಾಲಯ ಇದಕ್ಕೆ ಅನುಮತಿ ನೀಡಿದರೆ, ಅನರ್ಹ ಶಾಸಕರ ಭವಿಷ್ಯ ಮುಳ್ಳಿನ ಹಾದಿಯೇ ಸರಿ. ಯಾಕೆಂದರೆ, ಈ ಪ್ರಕ್ರಿಯೆ ಬೇಗ ಮುಗಿಯುವಂತದಲ್ಲ.
ಹಾಲೀ ಸಿಜೆಐ ಗೊಗೋಯ್ ಅವರ ಕಾಲಾವಧಿ
ಹಾಲೀ ಸಿಜೆಐ ಗೊಗೋಯ್ ಅವರ ಕಾಲಾವಧಿ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ರಫೇಲ್, ಶಬರಿಮಲೆಯ ತೀರ್ಪು ಈ ಅವಧಿಯಲ್ಲಿ ಹೊರಬೀಳಬೇಕಾಗಿದೆ. ಅದಕ್ಕಿಂತಲೂ ಹೆಚ್ಚು, ಇಡೀ ದೇಶದ ಪಾಲಿಗೆ ಅತ್ಯಂತ ಸೂಕ್ಷ್ಮ ವಿಚಾರವಾಗಿರುವ ಅಯೋಧ್ಯೆಯ ತೀರ್ಪು ಪ್ರಕಟಿಸಬೇಕಾಗಿದೆ. ಹಾಗಾಗಿ, ಈ ಆಡಿಯೋ ಟೇಪ್ ವಿಚಾರದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಮ್ಮಿಯೆಂದೇ ಹೇಳಲಾಗುತ್ತಿದೆ.
ಆಪರೇಷನ್ ಕಮಲದಂತಹ ಗಂಭೀರ ವಿಚಾರ
ಪಕ್ಷಾಂತರ ಎನ್ನುವುದು ಎಲ್ಲಾ ಪಕ್ಷಗಳಿಗೆ ಕಾಡುತ್ತಿರುವ ದೊಡ್ಡ ಪಿಡುಗು. ಅದರಲ್ಲೂ, ಆಪರೇಷನ್ ಕಮಲದಂತಹ ಪ್ರಕರಣಗಳು, ಮತದಾರರ ತೀರ್ಪನ್ನೇ ಅಗೌರವಿಸುವಂತದ್ದು. ಇಂತಹ ವಿದ್ಯಮಾನಗಳಿಗೆ ಫುಲ್ ಸ್ಟಾಪ್ ನೀಡಬೇಕು. ಕೊಡುವ ತೀರ್ಪು ಎಲ್ಲಾ ಪಕ್ಷಗಳಿಗೆ ಎಚ್ಚರಿಕೆ ಮತ್ತು ಪಾಠವಾಗಬೇಕೆಂದು ಸರ್ವೋಚ್ಚ ನ್ಯಾಯಾಲಯ, ಆಡಿಯೋ ಟೇಪನ್ನು ಸಾಕ್ಷಿಯೆಂದು ಪರಿಗಣಿಸಲೂ ಬಹುದು ಎಂದೂ ಕಾನೂನು ಪಂಡಿತರು ಅಭಿಪ್ರಾಯ ಪಡುತ್ತಿದ್ದಾರೆ.