ಕಾಂಗ್ರೆಸ್ ಕೈಗೆ ಬಿಎಸ್ವೈ ಆಡಿಯೋ ಬ್ರಹ್ಮಾಸ್ತ್ರ: ಎಲ್ಲರ ಚಿತ್ತ ಈಗ ಸುಪ್ರೀಂನತ್ತ!
ಅನರ್ಹ ಶಾಸಕರ ಅರ್ಜಿಯ ವಿಚಾರಣೆಯನ್ನು ಮುಗಿಸಿರುವ ಸರ್ವೋಚ್ಚ ನ್ಯಾಯಾಲಯ, ಸೋಮವಾರ (ನ 4) ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿತ್ತು. ಅಷ್ಟರಲ್ಲಿ, ಯಡಿಯೂರಪ್ಪನವರು ಮಾತನಾಡಿದ್ದಾರೆ ಎನ್ನಲಾಗುವ ಆಡಿಯೋ ಒಂದು ಬಹಿರಂಗಗೊಂಡಿದೆ.
ಎಲ್ಲಾ ಅತೃಪ್ತ ಶಾಸಕರು ಬಿಜೆಪಿಯ ನೆರಳಿನಲ್ಲೇ ಮುಂಬೈನಲ್ಲಿ ಇದ್ದದ್ದು ಎನ್ನುವುದನ್ನು ಗ್ರಹಿಸಿಕೊಳ್ಳಲು ರಾಜಕೀಯದಲ್ಲಿ ದೊಡ್ಡ ಸಾಧನೆ ಮಾಡಬೇಕಾಗಿಲ್ಲ. ಆದರೆ, ಇದನ್ನು ಬಿಜೆಪಿಯವರೇ ಅದರಲ್ಲೂ ಮುಖ್ಯಮಂತ್ರಿಗಳು ಆ ಆಡಿಯೋದಲ್ಲಿ ಒಪ್ಪಿಕೊಂಡಿರುವುದು ಕಾಂಗ್ರೆಸ್ಸಿಗೆ ಒಂದು ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.
"ಈ ಸಭೆಯಲ್ಲಿ ಮಾತನಾಡಿದ ವಿಚಾರ, ನಾಲ್ಕು ಗೋಡೆಯ ಮಧ್ಯೆಯಿರಲಿ. ಎಲ್ಲೂ ಬಹಿರಂಗವಾಗದಂತೇ ನೋಡಿಕೊಳ್ಳಿ, ಅದೇ ನೀವು ನನಗೆ ಮಾಡುವ ದೊಡ್ಡ ಉಪಕಾರ" ಎಂದು ಆಡಿಯೋದಲ್ಲಿ ಸಿಎಂ ಮನವಿ ಮಾಡಿದ್ದರು.
ಆದರೂ, ಆ ವಿಚಾರ ಬಹಿರಂಗಗೊಂಡು, ದೊಡ್ಡ ರಾದ್ದಾಂತವಾಗಿ ಹೋಗಿದೆ. ವಿಷಯದ ಗಂಭೀರತೆಯನ್ನು ಅರಿತ ರಾಜ್ಯ ಕಾಂಗ್ರೆಸ್ ಘಟಕ ತಡಮಾಡದೇ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದೆ. ಸುಪ್ರೀಂನಲ್ಲೂ ಸಲ್ಲಿಸಲಿದೆ.
ಸುಪ್ರೀಂ ಈ ಮನವಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಯಿದೆಯಾ?
ಸೋಮವಾರ, ಸುಪ್ರೀಂಕೋರ್ಟಿನಲ್ಲೂ ಮನವಿ ಸಲ್ಲಿಸಲಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಹಾಗಾದರೆ, ಸುಪ್ರೀಂ ಈ ಮನವಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಯಿದೆಯಾ? ನ್ಯಾ. ಎನ್.ವಿ.ರಮಣ ಅವರ ನ್ಯಾಯಪೀಠದ ಮುಂದೆ, ಕಾಂಗ್ರೆಸ್ ಮನವಿ ಸಲ್ಲಿಸುವ ಸಾಧ್ಯತೆಯಿದೆ.
ಅನರ್ಹ ಶಾಸಕರ ವಿಚಾರಣೆ
ಅನರ್ಹ ಶಾಸಕರ ವಿಚಾರಣೆಯನ್ನು ಇನ್ನೂ ಕೂಲಂಕುಷವಾಗಿ ನಡೆಸಬೇಕು. ಅರ್ಜಿಗೆ ಸಂಬಂಧಿಸಿದಂತೆ ಮಹತ್ತರವಾದ ಆಡಿಯೋ ಒಂದು ಲಭ್ಯವಾಗಿದೆ ಎಂದು ಆಡಿಯೋ ಟೇಪ್ ಅನ್ನು ಸುಪ್ರೀಂ ನಲ್ಲಿ ಸಾಕ್ಷಿಯಾಗಿ ಪರಿಗಣಿಸುವಂತೆ, ಕಾಂಗ್ರೆಸ್ ಮನವಿ ಸಲ್ಲಿಸಬಹುದು.
ಮತ್ತಷ್ಟು ವಾದ ಮಂಡನೆಗೆ ಅವಕಾಶ ನೀಡುವ ಸಾಧ್ಯತೆ ಕಮ್ಮಿ
ಈ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ಈಗಾಗಲೇ ಮುಗಿದಿರುವುದರಿಂದ, ಸರ್ವೋಚ್ಚ ನ್ಯಾಯಾಲಯದ ಪೀಠ, ಮತ್ತಷ್ಟು ವಾದ ಮಂಡನೆಗೆ ಅವಕಾಶ ನೀಡುವ ಸಾಧ್ಯತೆ ಕಮ್ಮಿ ಎನ್ನುವುದು ಕೆಲವು ಕಾನೂನು ಪಂಡಿತರ ಅಭಿಪ್ರಾಯ.
ಆಪರೇಷನ್ ಕಮಲದಂತಹ ಗಂಭೀರ ವಿಚಾರ
ಆದರೂ, ಆಪರೇಷನ್ ಕಮಲದಂತಹ ಗಂಭೀರ ವಿಚಾರ ಮತ್ತು ತಾವು ಕೊಡುವ ತೀರ್ಪು, ಎಲ್ಲರಿಗೂ ಎಚ್ಚರಿಕೆಯಾಗಬೇಕು ಎಂದು, ಕಾಂಗ್ರೆಸ್ ಮನವಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಯೂ ಇದೆ ಎಂದೂ ಕೆಲವರು ಅಭಿಪ್ರಾಯ ಪಡುತ್ತಿದ್ದಾರೆ.
ಅನರ್ಹ ಶಾಸಕರ ರಾಜಕೀಯ ಭವಿಷ್ಯ
ಒಂದು ವೇಳೆ, ಸರ್ವೋಚ್ಚ ನ್ಯಾಯಾಲಯ, ಕಾಂಗ್ರೆಸ್ ಅರ್ಜಿಯನ್ನು ಪರಿಗಣಿಸಿದರೆ, ವಿಚಾರಣೆಗೆ ಮತ್ತೆ ಸಮಯ ನಿಗದಿ ಮಾಡಬಹುದು. ಹಾಗಾದಲ್ಲಿ, ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿರ್ಣಯ ಮತ್ತೆ ವಿಳಂಬವಾಗಬಹುದು. ಒಟ್ಟಿನಲ್ಲಿ, ಆಡಿಯೋ ಟೇಪ್ ವಿಚಾರ, ಬಿಜೆಪಿಗೆ ಮತ್ತು ವರಿಷ್ಠರಿಗೆ ಹೊಸ ತಲೆನೋವು ತಂದಿರುವುದಂತೂ ಹೌದು.