ಕಾಲಚಕ್ರ ತಿರುಗಿದಾಗ: ಅಂದು ವರಿಷ್ಠರಿಂದ ಬಿಎಸ್ವೈ ನಿರ್ಲಕ್ಷ್ಯ: ಇಂದು ಮೋದಿಯಿಂದ standing ovation
ಮೇ 15, 2018, ಕರ್ನಾಟಕ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಹೊರಬೀಳುತ್ತಿತ್ತು. ಸರಕಾರ ನಮ್ಮದೇ ಎಂದು ಮಧ್ಯಾಹ್ನದ ಹೊತ್ತಿಗೆ ಜಗನ್ನಾಥ ಭವನ, ಕೇಶವಕೃಪದಲ್ಲಿ ಪಟಾಕಿ ಹೊಡೆಯುತ್ತಿದ್ದ ಕಾರ್ಯಕರ್ತರು, ಸಂಜೆಹೊತ್ತಿಗೆ ಬೇಸರದಿಂದ ಪಕ್ಷ/ಮಾತೃ ಸಂಘಟನೆಯ ಕಚೇರಿಯನ್ನು ಖಾಲಿ ಮಾಡಿದ್ದರು.
104 ಸೀಟು ಗೆದ್ದು, ಬಹುಮತ ಜಸ್ಟ್ ಮಿಸ್ ಆಗಿದ್ದರೂ, ಯಡಿಯೂರಪ್ಪ ತರಾತುರಿಯಲ್ಲಿ ಸರಕಾರ ರಚನೆಗೆ ಮುಂದಾದರು, ರಾಜ್ಯಪಾಲರು ಪ್ರಮಾಣವಚನವನ್ನೂ ಬೋಧಿಸಿದರು. ಸರಳ ಬಹುಮತ ಸಿಗಲು, ಪಕ್ಷಕ್ಕೆ ಸಂಖ್ಯಾಬಲದ ಕೊರತೆಯಿದೆ ಎನ್ನುವುದನ್ನು ಅರಿತ ಪ್ರಧಾನಿ ಮೋದಿಯಾಗಲಿ, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಮಾಣವಚನ ಸಮಾರಂಭದಿಂದ ದೂರವುಳಿದರು.
ಅದಾದ ಮೇಲೆ, ಬಿಎಸ್ವೈ ರಾಜೀನಾಮೆ ನೀಡಿದರು, ಎಚ್ಡಿಕೆ ಸಿಎಂ ಆದರು, ಆಮೇಲೆ ಅವರೂ ರಾಜೀನಾಮೆ ನೀಡಿದರು, ಮತ್ತೆ ಬಿಎಸ್ವೈ ಸಿಎಂ ಆದರು. ಆ ಪ್ರಮಾಣವಚನಕ್ಕೂ ಬಿಜೆಪಿಯ ದೆಹಲಿ ದೊರೆಗಳು ಬಂದಿರಲಿಲ್ಲ.
ಪೌರತ್ವ ಮಸೂದೆ ಪಾಸ್: ಅಮಿತ್ ಶಾ ಮಂಡಿಸಿದ ಈ 'ಐದು' ಮಾತಿಗೆ ಭಾರೀ ಕರತಾಡನ
ಇಷ್ಟೆಲ್ಲಾ ಪೀಠಿಕೆ ಏನಕ್ಕೆಂದರೆ, ಯಡಿಯೂರಪ್ಪನವರನ್ನು ಅಮಿತ್ ಶಾ/ಮೋದಿ ನಡೆಸಿಕೊಂಡ ರೀತಿ. ಇದು ಒಂದು ಅಧ್ಯಾಯ. ಇದಾದ ಮೇಲೆ, ಯಡಿಯೂರಪ್ಪ ಸಿಎಂ ಆದ ನಂತರ, ಸಂಪುಟ ರಚನೆಯಲ್ಲಿ ಮತ್ತು ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ವಿಚಾರದಲ್ಲೂ ಯಡಿಯೂರಪ್ಪನವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಯಿತು. ಆದರೆ, ಅದೇ ವರಿಷ್ಠರು ಈಗ, ಯಡಿಯೂರಪ್ಪಗೆ ಚಪ್ಪಾಳೆ ಹೊಡೆದು ಶಹಬ್ಬಾಸ್ ಎಂದಿದ್ದಾರೆ. ಕಾರಣ?
ಬಿಎಸ್ವೈ ಅವರನ್ನು ಏಕಾಂಗಿಯನ್ನಾಗಿ ಮಾಡಲಾಯಿತು
ಉತ್ತರ ಕರ್ನಾಟಕದ ಪ್ರವಾಹದ ವೇಳೆಯೂ ಅವರನ್ನು ಏಕಾಂಗಿಯನ್ನಾಗಿ ಮಾಡಲಾಯಿತು. ಹೋರಾಟದ ಬದುಕಿನಿಂದಲೇ ಬಂದ ಯಡಿಯೂರಪ್ಪ, ಸಂತ್ರಸ್ತರ ಪರಿಹಾರದ ವಿಚಾರದಲ್ಲಿ, ಒಂದು ರೌಂಡ್ ತಮ್ಮ ಶಕ್ತಿಯೇನು ಎನ್ನುವುದನ್ನು ವರಿಷ್ಠರಿಗೆ ತೋರಿಸಿದ್ದರು. ಇಳಿವಯಸ್ಸಿನಲ್ಲೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವಿರೋಧ ಪಕ್ಷದವರಿಂದಲೂ ಸೈ ಎನಿಸಿಕೊಂಡರು
ಭೇಟಿಗೆ ಸಮಯ ಕೇಳಿದರೂ, ದೆಹಲಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ
ನೆರೆ ಪರಿಹಾರದ ವಿಚಾರದಲ್ಲಿ, ಕೇಂದ್ರ, ಯಡಿಯೂರಪ್ಪನವರನ್ನು ಯಾವರೀತಿ ನಡೆಸಿಕೊಂಡಿತ್ತು ಎನ್ನುವುದನ್ನು ಮತ್ತೆಮತ್ತೆ ಹೇಳಬೇಕಾಗಿಲ್ಲ. ಭೇಟಿಗೆ ಸಮಯ ಕೇಳಿದರೂ, ದೆಹಲಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದ್ದ ಸಂಪನ್ಮೂಲವನ್ನೇ ಕ್ರೋಢೀಕರಿಸಿ, ಬಿಎಸ್ವೈ, ಪರಿಹಾರದ ವಿಚಾರದಲ್ಲಿ ತೋರಿದ ಮುತ್ಸದ್ದಿತನ, ವಿರೋಧಿಗಳನ್ನೂ ಬೆರಗಾಗಿಸಿತ್ತು.
ಬಿಜೆಪಿ ಸಂಸದೀಯ ಸಭೆಯಲ್ಲಿ 'ಧಾರವಾಡ ಪೇಡಾ' ಸದ್ದು
ಮಹಾರಾಷ್ಟ್ರದ ಚುನಾವಣೆ ಸ್ಥಳೀಯ ಮುಖಂಡರ ಅನಿವಾರ್ಯತೆಯನ್ನು ತೋರಿಸಿತ್ತು
ಮಹಾರಾಷ್ಟ್ರದ ಚುನಾವಣೆಯಲ್ಲಿನ ಹಿನ್ನಡೆ, ಬಿಜೆಪಿಯ ಕೇಂದ್ರದ ನಾಯಕರಿಗೆ ಸ್ಥಳೀಯ ಮುಖಂಡರ ಅನಿವಾರ್ಯತೆಯನ್ನು ತೋರಿಸಿತ್ತು. ಅಲ್ಲಿಂದ, ಯಡಿಯೂರಪ್ಪನವರ ಮಾತಿಗೂ ಮನ್ನಣೆ ಸಿಗಲಾರಂಭಿಸಿತು. ಉಪಚುನಾವಣೆಯಲ್ಲಿ ಅವರಿಗೆ ಫುಲ್ ಪವರ್ ನೀಡಲಾಯಿತು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಸ್ಟಾರ್ ಪ್ರಚಾರಕರವರೆಗೆ, ಬಿಎಸ್ವೈ, ಸರಿಯಾದ ರಣತಂತ್ರವನ್ನು ರೂಪಿಸಿ, ಪಕ್ಷವನ್ನು ದಡ ಸೇರಿಸಿದರು.
ಅಮಿತ್ ಶಾ ಮತ್ತು ನರೇಂದ್ರ ಮೋದಿಯಿಂದ ಸಿಗುವ ಮರ್ಯಾದೆ
ಗೆದ್ದರೆ ಜಿಂದಾಬಾದ್, ಸೋತರೆ, ಯಡಿಯೂರಪ್ಪನವರ ಜೊತೆ, ಬಿಜೆಪಿಯ ಮಾನಮರ್ಯಾದೆಗೂ ಧಕ್ಕೆ ಬರುತ್ತಿತ್ತು. ಉಪಚುನಾವಣೆಯ ಫುಲ್ ಕಂಟ್ರೋಲ್ ತೆಗೆದುಕೊಂಡಿದ್ದ, ಯಡಿಯೂರಪ್ಪ, ಹನ್ನೆರಡು ಸ್ಥಾನವನ್ನು ಗೆದ್ದಿದ್ದೇ ತಡ, ಯಡಿಯೂರಪ್ಪವರಿಗೆ, ಅಮಿತ್ ಶಾ ಮತ್ತು ನರೇಂದ್ರ ಮೋದಿಯಿಂದ ಸಿಗುವ ಮರ್ಯಾದೆಯ ಲೆವೆಲೇ ಬೇರೆಯಾಯಿತು.
ಅಂದು ವರಿಷ್ಠರಿಂದ ಬಿಎಸ್ವೈ ನಿರ್ಲಕ್ಷ್ಯ; ಇಂದು ಮೋದಿಯಿಂದ standing ovation
ಅಂದ ಹಾಗೇ, ಮೊನ್ನೆ (ಡಿ 11) ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದರ ಸಭೆಯಲ್ಲಿ ಯಡಿಯೂರಪ್ಪನವರಿಗೆ standing ovation ಅಂತೆ, ಕಾರಣ. ಉಪಚುನಾವಣೆಯಲ್ಲಿ ತೋರಿದ ಸಾಧನೆಗೆ. ಪೌರತ್ವ ವಿಚಾರದ ಬಂದಾಗ, ಆ ವಿಚಾರ ಆಮೇಲೆ, ಮೊದಲು ನಮ್ಮ ಯಡಿಯೂರಪ್ಪನವರು ಉಪಚುನಾವಣೆಯಲ್ಲಿ ತೋರಿದ ಸಾಧನೆಗೆ ಎದ್ದು ನಿಂತು ಗೌರವಿಸೋಣ ಎಂದು ಮೋದಿ ಹೇಳಿದರಂತೆ. ಇದೇ, ಬಿಎಸ್ವೈ ಅವರನ್ನು ಅಂದು ಕಡೆಗಣಿಸಿದ್ದ ಬಿಜೆಪಿಯ ಕೇಂದ್ರ ಮುಖಂಡರು, ಈಗ, ಎದ್ದು ನಿಂತು ಗೌರವಿಸುತ್ತಾರೆ ಎಂದರೆ ಇದಕ್ಕೆ ಕಾಲಚಕ್ರ ಅನ್ನದೇ ಇನ್ನೇನು ಅನ್ನೋಣ.