ಒಂದೇ ದಿನದಲ್ಲಿ ಸಿದ್ದರಾಮಯ್ಯ 'ದಿಲ್' ಕದ್ದವರು ಯಾರು?
'ದಿಲ್ ಕಿ ಬಾತ್ ' ಎಂಬ ಹೆಸರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್ ಇನ್ ಮಾಡಲಿದ್ದಾರೆ ಎಂದಾಗಲೇ ಆಕ್ರೋಶಗೊಂಡ ಕನ್ನಡಿಗರು ವಾರ್ತಾ ಇಲಾಖೆಯ ಪೋಸ್ಟರ್ ಅನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದರು. ಇದು ಶುಕ್ರವಾರದ ಘಟನೆ. ಶನಿವಾರ ಬೆಳಗ್ಗೆ ಎದ್ದು ನೋಡಿದರೆ ಪೋಸ್ಟರ್ ಬದಲಾಗಿತ್ತು, ಜತೆಗೆ ಸಿಎಂ ಸಿದ್ದರಾಮಯ್ಯ ಅವರ ದಿಲ್ ಚೋರಿಯಾಗಿತ್ತು!
ಈ ರಾಜ್ಯ ಸರ್ಕಾರ ಸಣ್ಣ ಸಣ್ಣದಕ್ಕೂ ವಿವಾದ ಮಾಡಿಕೊಳ್ಳುತ್ತಿದೆ. ಜನರೊಂದಿಗೆ ಮುಖ್ಯಮಂತ್ರಿ ನೇರವಾಗಿ ಮಾತನಾಡುವ ಉದ್ದೇಶದಿಂದ ಆಕಾಶವಾಣಿಯಲ್ಲಿ ಫೋನ್ ಇನ್ ಕಾರ್ಯಕ್ರಮ ಮಾಡಲು ಮುಂದಾಗಿದ್ದು ಮೆಚ್ಚಿಕೊಳ್ಳಬೇಕಾದ ಸಂಗತಿಯೇ.. ಆದರೆ ಅದಕ್ಕೆ ಹಿಂದಿ ಹೆಸರೇ ಬೇಕಿತ್ತೆ? ಜನರ ಪ್ರಶ್ನೆ..[ತುರ್ತು ಸಭೆ, ಬಿಬಿಎಂಪಿ ಅಧಿಕಾರಿಗಳ ಕಿವಿ ಹಿಂಡಿದ ಸಿಎಂ!]
ಆಕಾಶವಾಣಿಯ ಬೆಂಗಳೂರು ಕೇಂದ್ರ ಮೇ 21ರಂದು ಶನಿವಾರ ಮುಖ್ಯಮಂತ್ರಿಗಳ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಿದೆ. ಸಂಜೆ 7.45ರಿಂದ 8.42ರ ವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಆದರೆ ಯಾವ ಪುಣ್ಯಾತ್ಮ ಸಲಹೆ ನೀಡಿದನೋ ಗೊತ್ತಿಲ್ಲ,, ಮುಖ್ಯಮಂತ್ರಿಯವರ ನೇರ ಫೋನ್ ಇನ್ ಕಾರ್ಯಕರ್ಮಕ್ಕೆ 'ದಿಲ್ ಕಿ ಬಾತ್' ಅಂತ ನಾಮಕರಣ ಮಾಡಲಾಗಿತ್ತು. ಕನ್ನಡದ ಯಾವ ಹೆಸರು ಇವರಿಗೆ ಸಿಗಲಿಲ್ಲವೇ? ಕರ್ನಾಟಕ ವಾರ್ತೆ ಮುಖ್ಯಮಂತ್ರಿಯವರ ಕಾರ್ಯಕ್ರಮದ ವಿವರದ ಚಿತ್ರವನ್ನು ತನ್ನ ತಾಣದಲ್ಲಿ ಪ್ರಕಟ ಮಾಡಿದ ನಂತರ ಸಾಮಾಜಿಕ ತಾಣ ಶೂರರು ಸರಿಯಾಗೇ ಕ್ಲಾಸ್ ತಗೆದುಕೊಂಡಿದ್ದಾರೆ.
ಇದೀಗ 'ದಿಲ್ ಕಿ ಬಾತ್' ಮಾಯವಾಗಿದ್ದು ಸರಳವಾಗಿ ಮುಖ್ಯಮಂತ್ರಿಯವರ ನೇರ ಫೋನ್ ಇನ್ ಎಂದು ಬರೆಯಲಾಗಿದೆ. ದಿಲ್ ಚೋರಿ ಆದ ಮೇಲೆ ಕನ್ನಡದ ಯಾವುದಾದರೊಂದು ಹೆಸರನ್ನು ಹಾಕಬಹುದಿತ್ತಲ್ಲ... ಅದು ನಮ್ಮ ಸಲಹೆಗಾರರಿಗೆ ಹೊಳೆಯಲಿಲ್ಲವೇ?
ದಿಲ್ ಕೀ ಬಾತ್ ಅನ್ನೇ ಕನ್ನಡಕ್ಕೆ ಬದಲಾಯಿಸಿ ಮನದ ಮಾತು ಮಾಡಬಹುದಿತ್ತಲ್ಲ. ನಿಮ್ಮೊಂದಿಗೆ ನಾವು, ನೇರ ಮಾತು, ಹರ್ಷದ ಮಾತು ಹೀಗೆ ಯಾವುದಾದರೊಂದು ಹೆಸರು ಇಟ್ಟುಕೊಳ್ಳಬಹುದಿತ್ತಲ್ಲ.[ಕರ್ನಾಟಕ ಸರ್ಕಾರಕ್ಕೆ ಮೂರು ವರ್ಷ, ಮುಂದಿದೆ ಎರಡು ವರ್ಷ!]
ದಿಲ್ ಕಿ ಬಾತ್ ಹೆಸರಲ್ಲಿ ಪ್ರಕಟವಾದ ತಕ್ಷಣವೇ ಕನ್ನಡಿಗರು ಆಕ್ರೋಶ ಹೊರಹಾಕಿದ್ದರು. ಶುಕ್ರವಾರ ಇದೆಲ್ಲ ಅವಘಡಗಳು ನಡೆದು ಹೋಗಿದ್ದವು. ಕೆಲವರು ವಾರ್ತಾ ಇಲಾಖೆಯ ಪೇಜ್ ನಿಂದಲೇ ಫೆಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಆದರೆ ಶನಿವಾರ ಬೆಳಗ್ಗೆ ದಿಲ್ ಮಾಯವಾಗಿತ್ತು.
ಇಂಥ ಹೆಸರುಗಳನ್ನು ಬಳಕೆ ಮಾಡುವ ಮೊದಲು ಒಮ್ಮೆ ಚಿಂತಿಸಿದರೆ ಒಲಿತು. ಇದೆಲ್ಲಾ ಏನೇ ಇರಲಿ ಇಂದು ಸಂಜೆ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹೇಳಿಕೊಳ್ಳಲು ಮರೆಯಬೇಡಿ...