ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಗುಡುಗಿದ ಸಿದ್ದರಾಮಯ್ಯ
ನವದೆಹಲಿ, ಜೂನ್ 30: ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ ಹಿಂದಿ ಹೇರಿಕೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಇಂಥ ಕ್ರಮದ ವಿರುದ್ಧ ರಾಜ್ಯ ಸರಕಾರ ಹೋರಾಟ ನಡೆಸಲಿದೆ ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕನ್ನಡಿಗರ ಮೇಲೆ ಹಿಂದಿ ಸವಾರಿ ಏಕೆ ಅಷ್ಟು ಸುಲಭವೆಂದರೆ...
ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಪ್ರತಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಅವರ ನಾಮ ನಿರ್ದೇಶನಕ್ಕಾಗಿ ದೆಹಲಿಗೆ ತೆರಳಿದ್ದ ಅವರು ಮಾಧ್ಯಮದವರ ಜತೆಗೆ ಮಾತನಾಡಿ, ತ್ರಿಭಾಷಾ ಸೂತ್ರದಡಿಯಲ್ಲಿ ಕೇಂದ್ರ ಸರಕಾರವು ಹಿಂದಿ ಭಾಷೆ ಹೇರಲು ಮುಂದಾಗಿದೆ. ಅದನ್ನು ಕರ್ನಾಟಕ ಸರಕಾರ ಒಪ್ಪುವುದಿಲ್ಲ ಎಂದಿದ್ದಾರೆ.
ಮೆಟ್ರೋ ಯೋಜನೆಗೆ ರಾಜ್ಯ ಸರಕಾರವೇ ಹೆಚ್ಚಿನ ಬಂಡವಾಳ ಹೂಡಿದ್ದು, ಇದು ಕೇಂದ್ರದ ಯೋಜನೆಯಲ್ಲ ಎಂದಿರುವ ಅವರು, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಈಚೆಗೆ ಹಿಂದಿ ಕಲಿಯಬೇಕು ಎಂದಿರುವ ಹೇಳಿಕೆಗೆ, ಹಿಂದಿಯನ್ನು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಾತ್ರ ಮಾತನಾಡಲಾಗುತ್ತದೆ. ವೆಂಕಯ್ಯ ನಾಯ್ಡು ಅವರ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ ಸಿದ್ದರಾಮಯ್ಯ.
ಬೆಂಗಳೂರಿನ ಮೆಟ್ರೋ ನಿಲ್ದಾಣದಳಲ್ಲಿ ಹಿಂದಿ ಬಳಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದರ ವಿರುದ್ಧ ಕನ್ನಡಪರ ಸಂಘಟನೆಗಳಿಂದ ಹೋರಾಟಗಳು ನಡೆಯುತ್ತಿವೆ.